ಸಂಸದೆ ಪ್ರಗ್ಯಾ ಸಿಂಗ್ಗೆ ಜೀವ ಬೆದರಿಕೆ ಕರೆ
ಭೋಪಾಲ್, ಜೂನ್ 18: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ಆಪ್ತನೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಶನಿವಾರ ಆರೋಪಿಸಿದ್ದಾರೆ.
ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಭೋಪಾಲ್ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಿರುವುದಕ್ಕೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಬೆದರಿಕೆ ದೂರು ಪ್ರಕರಣ ಸಂಬಂಧ ಪ್ರಜ್ಞಾ ಠಾಕೂರ್ ಭೋಪಾಲ್ನ ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ಹಿಂದೂ ಹಬ್ಬಗಳ ಆಚರಣೆಯನ್ನ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ : ಸಂಸದೆ ಪ್ರಗ್ಯಾ ಸಿಂಗ್
"ಬೆದರಿಕೆ ಕರೆ ಬಂದಿರುವ ಬಗ್ಗೆ ಪ್ರಗ್ಯಾ ಠಾಕೂರ್ ದೂರಿನ ನಂತರ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506 (ಅಪರಾಧ ಬೆದರಿಕೆ) ಮತ್ತು 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ," ಎಂದು ಟಿಟಿ ನಗರ ಪೊಲೀಸ್ ಠಾಣೆಯ ಪ್ರಭಾರಿ ಚೆನ್ ಸಿಂಗ್ ರಘುವಂಶಿ ಹೇಳಿದ್ದಾರೆ. ಬೆದರಿಕೆ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
'ಕಡಿಮೆ ಮದ್ಯ ಸೇವಿಸಿದರೆ ಅದು ಔಷಧಿಯಾಗುತ್ತದೆ': ಪ್ರಜ್ಞಾ ಠಾಕೂರ್
ಗುರುತು ಬಿಟ್ಟುಕೊಡದ ಅನಾಮಿಕ
ದೂರಿನ ಪ್ರಕಾರ, ಶುಕ್ರವಾರ ರಾತ್ರಿ ಪ್ರಗ್ಯಾ ಸಿಂಗ್ಗೆ ಕರೆ ಬಂದಿದೆ. ದಾವೂದ್ ಸೋದರ ಇಕ್ಬಾಲ್ ಕಸ್ಕರ್ ನಿಕಟವರ್ತಿ ಎಂದು ಹೇಳಿಕೊಂಡು ಕರೆ ಮಾಡಿರುವ ಅಪರಿಚಿತ, ಮುಸ್ಲಿಮರ ವಿರುದ್ಧ ಕಾಮೆಂಟ್ ಮಾಡಿದ್ದಕ್ಕಾಗಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಪ್ರಗ್ಯಾ ತನಗೆ ಕರೆ ಮಾಡಿದ ವ್ಯಕ್ತಿ ಬಳಿ ಇಕ್ಬಾಲ್ ಕಸ್ಕರ್ ಯಾರು ಎಂದು ಪ್ರಶ್ನಿಸಿದಾಗ, ಕರೆ ಮಾಡಿದವನು ಕೊಲೆಯಾದ ಮೇಲೆ ಅವನ ಬಗ್ಗೆ ತಿಳಿದುಕೊಳ್ಳುತ್ತೀಯಾ ಎಂದು ಬೆದರಿಕೆ ಹಾಕಿದ್ದಾನೆ.
ಕರೆ ಮಾಡಿದವನ ಬಳಿ ಗುರುತು ಹೇಳುವಂತೆ ಪ್ರಗ್ಯಾ ಸಿಂಗ್ ಎಷ್ಟು ಬಾರಿ ಕೇಳಿಕೊಂಡರು ಆತ ತಾನು ಯಾರು ಎನ್ನುವುದನ್ನು ಬಹಿರಂಗಪಡಿಸಿಲ್ಲ.
|
ಬೆದರಿಕೆ ಕರೆ ವೀಡಿಯೋ ವೈರಲ್
ಬೆದರಿಕೆ ಕರೆ ಮಾಡಿದಾಗ ಆ ವ್ಯಕ್ತಿಯೊಂದಿಗೆ ಪ್ರಗ್ಯಾ ಸಿಂಗ್ ಠಾಕೂರ್ 2 ನಿಮಿಷ ಮಾತನಾಡಿರುವ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದ್ದು, ಈ ವಿಡಿಯೋ ವೈರಲ್ ಆಗತೊಡಗಿದೆ.
ಪ್ರಗ್ಯಾ ಸಿಂಗ್ ಠಾಕೂರ್ ತನಗೆ ಕರೆ ಮಾಡಿದವನ ಬಳಿ ಯಾವ ಹೇಳಿಕೆಗಳಿಗಾಗಿ ಕೊಲೆ ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಕರೆ ಮಾಡಿದವನು "ನೀನು ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುತ್ತಿದ್ದೀರಿ ಮತ್ತು ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿರುವೆ" ಎಂದು ಹೇಳಿದ್ದಾನೆ.
ನೂಪುರ್ ಶರ್ಮಾ ಹೇಳಿಕೆ ಸಮರ್ಥಿಸಿಕೊಂಡಿದ್ದ ಪ್ರಗ್ಯಾ
ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಪ್ರವಾದಿ ಮುಹಮ್ಮದ್ ಕುರಿತಾದ ಆಕ್ಷೇಪಾರ್ಹ ಹೇಳಿಕೆಗೆ ಪ್ರಗ್ಯಾ ಠಾಕೂರ್ ಬೆಂಬಲ ವ್ಯಕ್ತಪಡಿಸಿದ್ದರು.
ನೂಪುರ್ ಶರ್ಮಾ ಹೇಳಿಕೆ ದೇಶದಲ್ಲಿ ಭಾರೀ ಹಿಂಸಾಚಾರ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ನೂಪುರ್ ಶರ್ಮಾ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು.
ಈ ಮೊದಲು ಬೆದರಿಕೆ ಹಾಕಿದ್ದರು
ಇಕ್ಬಾಲ್ ಕಸ್ಕರ್ ಆಪ್ತ ಎಂದು ಹೇಳಿಕೊಳ್ಳುವ ವ್ಯಕ್ತಿ ಫೋನ್ ಕರೆಯಲ್ಲಿ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ವಸೀಮ್ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ್ ತ್ಯಾಗಿ ತನಗೆ ವಿದೇಶಗಳಿಂದ ಫೋನ್ನಲ್ಲಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದಿದ್ದರು.
ಜೂನ್ 10 ರಂದು ರಾತ್ರಿ 11.30 ರ ಸುಮಾರಿಗೆ ದುಬೈನಿಂದ ವಾಟ್ಸಾಪ್ ಕರೆ ಮೂಲಕ ತನಗೆ ಕೊಲೆ ಮತ್ತು ಶಿರಚ್ಛೇದದ ಬೆದರಿಕೆಗಳು ಬಂದವು ಎಂದು ತ್ಯಾಗಿ ಆರೋಪಿಸಿದ್ದ.
ಭಯೋತ್ಪಾದಕ ಇಕ್ಬಾಲ್ ಕಸ್ಕರ್ನ ಸಹೋದರ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಮುಂದಿನ ಮೂರು ದಿನಗಳಲ್ಲಿ ತ್ಯಾಗಿಯ ಶಿರಚ್ಛೇದ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ ಎಂದು ಆರೋಪಿಸಿದ್ದರು. ಇಸ್ಲಾಂ ತೊರೆದು ಹಿಂದೂ ಧರ್ಮ ಸೇರಿದಾಗಿನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಆರೋಪಿಸಿದ್ದ.