ಪ್ರಗ್ಯಾ ಸಿಂಗ್ಗೆ ಉಸಿರಾಟ ಸಮಸ್ಯೆ; ಏರ್ಲಿಫ್ಟ್ ಮೂಲಕ ಮುಂಬೈ ಆಸ್ಪತ್ರೆಗೆ ದಾಖಲು
ಭೋಪಾಲ್, ಮಾರ್ಚ್ 6: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಶನಿವಾರ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣವೇ ಏರ್ಲಿಫ್ಟ್ ಮೂಲಕ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಮಾನದ ಮೂಲಕ ಅವರನ್ನು ಮುಂಬೈ ನಗರದ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಕಳೆದ ತಿಂಗಳು ಕೂಡ ಪ್ರಗ್ಯಾ ಸಿಂಗ್ ಇದೇ ಆಸ್ಪತ್ರೆಗೆ ದಾಖಲಾಗಿದ್ದರು.
ವಿಮಾನದಲ್ಲಿ ಗದ್ದಲವೆಬ್ಬಿಸಿದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್
ಕಳೆದ ಕೆಲವು ದಿನಗಳಿಂದ ಅವರು ಹೆಚ್ಚು ಓಡಾಟದಲ್ಲಿದ್ದರು ಎನ್ನಲಾಗಿದೆ. ಶನಿವಾರವೂ ದಿಶಾ ಸಮಿತಿಯ ಜಿಲ್ಲಾ ಪಂಚಾಯಿತಿ ಕಚೇರಿಯ ಸಭೆಯೊಂದಕ್ಕೆ ಹಾಜರಾಗಬೇಕಿದ್ದು, ಅದಕ್ಕೆ ಮುನ್ನ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ಕಳೆದ ಡಿಸೆಂಬರ್ ನಲ್ಲಿ ಪ್ರಗ್ಯಾ ಸಿಂಗ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ರಕ್ತದ ಒತ್ತಡ ಕಾಣಿಸಿಕೊಂಡಿತ್ತು. ಅವರಿಗೆ ಈಚೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಂತರ ಗುಣಮುಖರಾಗಿದ್ದರು.
2008 ರ ಸೆಪ್ಟಂಬರ್ 29 ರಂದು ಮಹಾರಾಷ್ಟ್ರದ ಮಾಲೇಗಾಂವ್ ನ ಮಸೀದಿ ಬಳಿ ನಿಲ್ಲಿಸಿದ ಮೋಟರ್ ಸೈಕಲ್ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿ, ಸುಮಾರು 100 ಮಂದಿ ಗಾಯಗೊಂಡಿದ್ದರು. ಈ ಸ್ಫೋಟಕ್ಕೆ ಹಿಂದೂ ತೀವ್ರವಾದಿಗಳು ಕಾರಣ ಎಂದು ಶಂಕೆ ವ್ಯಕ್ತವಾಗಿತ್ತು.
ಪ್ರಗ್ಯಾ ಹಾಗೂ ಲೆ. ಕರ್ನಲ್ ಪ್ರಸಾದ್ ಪುರೋಹಿತ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ್, ಸುಧಾಕರ್ ದ್ವಿವೇದಿ, ಅಜಯ್ ರಾಹಿರ್ಕರ್, ಸಮೀರ್ ಕುಲಕರ್ಣಿ ಹಾಗೂ ಸುಧಾಕರ್ ಚತುರ್ವೇದಿ 6 ಮಂದಿ ಇತರೆ ಆರೋಪಿಗಳ ವಿರುದ್ಧ ಯುಎಪಿಎ, ಐಪಿಸಿ ವಿವಿಧ ಸೆಕ್ಷನ್ ಗಳಡಿಯಲ್ಲಿ ಐಪಿಸಿ ಸೆಕ್ಷನ್ 302,120,324, 153 ಎ ಹಾಗೂ ಯುಎಪಿಎ ಸೆಶಹ್ನ್ 16, 18 ಅನ್ವಯ ಪ್ರಕರಣ ದಾಖಲಾಗಿದೆ.