ಭ್ರಷ್ಟಾಚಾರ ನಿಲ್ಲಿಸದಿದ್ದರೆ ಧನ್ ಧನಾ ಧನ್! ಇದು ಬಿಜೆಪಿ ಎಂಎಲ್ಎ ಬ್ಯಾಟಿಂಗ್ ಸ್ಟೈಲ್
ಇಂದೋರ್, ಜೂನ್ 26 : "ಇದು ಆರಂಭ ಮಾತ್ರ. ನಾವು ಭ್ರಷ್ಟಾಚಾರ ಮತ್ತು ಗೂಂಡಾಗಿರಿಗೆ ಅಂತ್ಯ ಹಾಡಲಿದ್ದೇವೆ. ಭ್ರಷ್ಟಾಚಾರ ನಿಲ್ಲಿಸಲು ಮೊದಲು ನಿವೇದನೆ, ನಿಲ್ಲಿಸದಿದ್ದರೆ ಧನ್ ಧನಾ ಧನ್!" ಇದು ಮಧ್ಯ ಪ್ರದೇಶದ ಬಿಜೆಪಿ ಎಂಎಲ್ಎ ಆಕಾಶ್ ವಿಜಯ್ ವರ್ಗಿಯಾ ಅವರು ಭ್ರಷ್ಟಾಚಾರವನ್ನು ನಿಗ್ರಹಿಸಲು ಕಂಡುಕೊಂಡಿರುವ ರೀತಿ.
ಮಧ್ಯ ಪ್ರದೇಶದ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಅವರ ಮಗನಾಗಿರುವ ಆಕಾಶ್ ಅವರು, ಸಾರ್ವಜನಿಕರ ಸಮ್ಮುಖದಲ್ಲಿಯೇ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು, ಭ್ರಷ್ಟಾಚಾರದಲ್ಲಿ ತೊಡಗಿದ್ದ ಸರಕಾರಿ ನೌಕರನನ್ನು ಥಳಿಸಿದ್ದಾರೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅವರು ಮೇಲಿನಂತೆ ಉತ್ತರಿಸಿದ್ದಾರೆ.
#WATCH Madhya Pradesh: Akash Vijayvargiya, BJP MLA and son of senior BJP leader Kailash Vijayvargiya, thrashes a Municipal Corporation officer with a cricket bat, in Indore. The officers were in the area for an anti-encroachment drive. pic.twitter.com/AG4MfP6xu0
— ANI (@ANI) 26 June 2019
ಸಾರ್ವಜನಿಕರು ಮಾತ್ರವಲ್ಲ, ಮಾಧ್ಯಮದವರು ಕ್ಯಾಮೆರಾ ಹಿಡಿದುಕೊಂಡು ನಿಂತಿದ್ದಾಗಲೇ ಆಕಾಶ್ ಅವರು, ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯನ್ನು ಬ್ಯಾಟಿನಿಂದ ಮನಬಂದಂತೆ ಥಳಿಸಿದ್ದಾರೆ. ಇಂದೋರ್ ನಲ್ಲಿ ಭೂಕಬಳಿಕೆ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ.
ಮೊದಲು ಆ ಅಧಿಕಾರಿ ಮತ್ತು ಆಕಾಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಮಿತಿಮೀರುತ್ತಿದ್ದಂತೆ ಆಕಾಶ್ ಅವರು ಬ್ಯಾಟ್ ಬೀಸಲು ಆರಂಭಿಸಿದ್ದಾರೆ. ಆ ಅಧಿಕಾರಿಗಳು ಅಕ್ರಮವಾಗಿ ಕೆಲ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಆಕಾಶ್ ಅವರು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಆ ಕಟ್ಟಡದಲ್ಲಿ ಜನರು ವಾಸಿಸುತ್ತಿದ್ದರೂ ಕಟ್ಟಡದ ಮಾಲಿಕ ಕಾರ್ಪೊರೇಷನ್ನಿಗೆ ಲಂಚ ನೀಡಿ ಅದನ್ನು ಕೆಡವಿಸುತ್ತಿದ್ದಾನೆ. ನಾನು ಕಾರ್ಪೊರೇಷನ್ ಅನ್ನು ಸಂಪರ್ಕಿಸಲು ಯತ್ನಿಸಿದರೂ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ನನಗೆ ಮತ ಹಾಕಿದ ಜನರನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಆಕಾಶ್ ಅವರು ಪ್ರತಿಕ್ರಿಯಿಸಿದ್ದಾರೆ.
ಭ್ರಷ್ಟಾಚಾರ ಸಹಿಸೋಲ್ಲ! ಖಡಕ್ ಸಂದೇಶ ನೀಡಿದ ನಿರ್ಮಲಾ ಸೀತಾರಾಮ್
ಕಟ್ಟಡವನ್ನು ಕೆಡವುವ ಸಮಯದಲ್ಲಿ ಕಾರ್ಪೊರೇಷನ್ ಅಧಿಕಾರಿ ಲಂಚ ಕೇಳಿದ್ದರು. ಇದರಿಂದ ಅವರನ್ನು ಥಳಿಸಲಾಯಿತು ಎಂದು ಮತ್ತೊಬ್ಬ ಬಿಜೆಪಿ ನಾಯಕ ಹಿತೇಶ್ ಬಾಜಪೈ ಅವರು ಸಮರ್ಥಿಸಿಕೊಂಡಿದ್ದಾರೆ. ನೀವು ಬೇಕಿದ್ದರೆ ಆಕಾಶ್ ಅವರನ್ನು ಜೈಲಿಗೆ ತಳ್ಳಬಹುದು. ಆದರೆ, ಲಂಚ ತಿಂದ ಆ ಅಧಿಕಾರಿಗೇನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದೆ ಕೂಡ ನಾವು ಭ್ರಷ್ಟಾಚಾರದ ವಿರುದ್ಧ, ಗೂಂಡಾಗಿರಿಯ ವಿರುದ್ಧ ಹೀಗೆಯೇ ಕ್ರಮ ಜರುಗಿಸಲಿದ್ದೇವೆ. ಭ್ರಷ್ಟಾಚಾರ ತೊಲಗಿಸುವುದು ನಮ್ಮ ಗುರಿ. ಮೊದಲಿಗೆ ಲಂಚ ತೆಗೆದುಕೊಳ್ಳದಂತೆ ಮನವಿ ಮಾಡಲಿದ್ದೇವೆ. ಇದಕ್ಕೂ ತಲೆಬಾಗದಿದ್ದರೆ ನಾವು ಧನ್ ಧನಾ ಧನ್ ಎಂದು ಭ್ರಷ್ಟರಿಗೆ ಪಾಠ ಕಲಿಸಲಿದ್ದೇವೆ ಎಂದು ಆಕಾಶ್ ನುಡಿದಿದ್ದಾರೆ.