ಅವಲಕ್ಕಿ ತಿನ್ನುವವರನ್ನು ಬಾಂಗ್ಲಾದೇಶಿಗಳೆಂದ ಬಿಜೆಪಿ ನಾಯಕ
ಇಂದೋರ್, ಜನವರಿ 24: ಪೋಹಾ (ಅವಲಕ್ಕಿ ಖಾದ್ಯ) ತಿನ್ನುವ ಕೆಲಸಗಾರರನ್ನು ಬಾಂಗ್ಲಾದೇಶಿ ರಾಷ್ಟ್ರೀಯರು ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ ವಿಜಯವರ್ಗಿಯಾ ಲೇವಡಿಗೆ ಒಳಗಾಗಿದ್ದಾರೆ.
ತಮ್ಮ ಮನೆಯಲ್ಲಿ ಹೊಸ ಕೊಠಡಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ಕೆಲವು ಕಾರ್ಮಿಕರು 'ವಿಚಿತ್ರ ಆಹಾರ ಅಭ್ಯಾಸ' ಹೊಂದಿರುವುದನ್ನು ಕೈಲಾಶ್ ಗಮನಿಸಿದ್ದರಂತೆ. ಅವರಲ್ಲಿ ಕೆಲವರು 'ಪೋಹಾ' ಮಾತ್ರ ತಿನ್ನುವುದು ಅವರಿಗೆ ಅಚ್ಚರಿ ಮೂಡಿಸಿದೆಯಂತೆ. ಈ ಕೆಲಸಗಾರರು ಬಾಂಗ್ಲಾದೇಶದ ಪ್ರಜೆಗಳು ಎನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾ ಗುಮ್ಮ ತೋರಿಸಿ, ಬಡಪಾಯಿಗಳನ್ನು ಬೀದಿಗೆ ತಂದ ಬಿಬಿಎಂಪಿ!
ಅಷ್ಟೇ ಅಲ್ಲ, ತಾವು ಎರಡು ದಿನ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುವುದನ್ನೇ ನಿಲ್ಲಿಸಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.
'ನಾನು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ. ಜನರನ್ನು ಎಚ್ಚರಿಸುವ ಸಲುವಾಗಿ ಮಾತ್ರವೇ ನಾನು ಈ ಘಟನೆಯನ್ನು ತಿಳಿಸುತ್ತಿದ್ದೇನೆ' ಎಂದು ಅವರು ಹೇಳಿದ್ದಾರೆ.
ಪೋಹಾ (ಅವಲಕ್ಕಿ ತಿನಿಸು) ತಿನ್ನುವವರನ್ನು ಬಾಂಗ್ಲಾದೇಶದ ಪ್ರಜೆಗಳು ಎಂದು ಶಂಕಿಸಿರುವ ಕೈಲಾಶ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟ್ರೋಲ್ ಮಾಡಲಾಗಿದೆ. ಏಕೆಂದರೆ ಅವಲಕ್ಕಿ ಬಹುತೇಕ ರಾಜ್ಯಗಳಲ್ಲಿ ತಿನಿಸಾಗಿ ಬಳಕೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಜನಪ್ರಿಯ ತಿಂಡಿಯಾಗಿದೆ.
ಎನ್ಆರ್ಸಿ-ಸಿಎಎ ಪರ ಅಭಿಯಾನ ನಡೆಸಲಿರುವ ರಾಜ್ ಠಾಕ್ರೆ
ಇಂದಿನಿಂದ ಪೋಹಾ ಕೂಡ ದೇಶವಿರೋಧಿ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಇಂಧೋರ್ ಪೋಹಾಕ್ಕೆ ಹೆಸರುವಾಸಿ. ಹೀಗಿರುವಾಗ ಕಾರ್ಮಿಕರು ಅದನ್ನೇ ತಿನ್ನುತ್ತಾರೆ. ಇಂಧೋರ್ನ ಈ ಮುಖಂಡನಿಗೆ ಅದರ ತಿಳಿವಳಿಕೆಯೇ ಇಲ್ಲ ಎಂದು ಟೀಕಿಸಿದ್ದಾರೆ.
ತಮ್ಮ ಮೇಲೆ ಬಾಂಗ್ಲಾದೇಶದ ಉಗ್ರನೊಬ್ಬ ಕಳೆದ ಒಂದೂವರೆ ವರ್ಷದಿಂದ ಕಣ್ಣಿಟ್ಟಿದ್ದಾನೆ ಎಂದೂ ಕೈಲಾಶ್ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದಾರೆ.
'ನಾನು ಹೊರಗೆ ಹೋದಾಗಲೆಲ್ಲಾ ಆರು ಸಶಸ್ತ್ರ ಸಿಬ್ಬಂದಿ ನನ್ನ ಹಿಂದೆ ಬರುತ್ತಾರೆ. ಈ ದೇಶದಲ್ಲಿ ಏನಾಗುತ್ತಿದೆ? ಹೊರಗಿನಿಂದ ಜನರು ಬಂದು ಇಷ್ಟು ಭೀತಿ ಮೂಡಿಸುತ್ತಾರೆಯೇ? ಸಿಎಎ ಈ ದೇಶದ ಹಿತಕ್ಕಾಗಿ ಇದೆ' ಎಂದು ಹೇಳಿದ್ದಾರೆ.