ಮರೆಯಾಯಿತೆ ಮಾನವೀಯತೆ: ಸತ್ತವರ ಚಿತಾಭಸ್ಮವನ್ನೂ ಪಡೆಯದ ಸಂಬಂಧಿಕರು!
ಭೋಪಾಲ್, ಸಪ್ಟೆಂಬರ್ 27: ಜಗತ್ತಿನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಜನರಲ್ಲಿ ಸಾವಿನ ಭೀತಿ ಹೆಚ್ಚಿಸುವುದರ ಜೊತೆ ಮಾನವೀಯ ಮೌಲ್ಯಗಳನ್ನು ಮರೆ ಮಾಚುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಸಂಬಂಧಗಳ ಬಾಂಧವ್ಯವನ್ನೇ ತೊರೆದು ಜನರು ವರ್ತಿಸುತ್ತಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣೆದುರಿಗೆ ಇವೆ.
ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಗರದಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಂದು ತಿಂಗಳ ಹಿಂದೆಯೇ 57 ಮಂದಿ ಪ್ರಾಣ ಬಿಟ್ಟದ್ದರು. ಸರ್ಕಾರಿ ಅಧಿಕಾರಿಗಳೇ ಮೃತರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು. ಆದರೆ ಮೃತರ ಚಿತಾಭಸ್ಮವನ್ನೂ ತೆಗೆದುಕೊಳ್ಳುವುದಕ್ಕೆ ಸಂಬಂಧಿಕರು ಹಿಂದೇಟು ಹಾಕುತ್ತಿರುವುದು ಪ್ರಸ್ತುತ ಪರಿಸ್ಥಿತಿ ಹಿಡಿದ ಕೈಗನ್ನಡಿಯಾಗಿದೆ.
ಸ್ಮಶಾನದ ಉದ್ಯಾನ ಅಭಿವೃದ್ಧಿಗೆ ಕೊರೊನಾದಿಂದ ಮೃತರಾದವರ ಚಿತಾಭಸ್ಮ ಬಳಕೆ
ಭಾನುವಾರ ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಚಿತಾಭಸ್ಮವನ್ನು ವಿಶ್ರಾಮ ಘಾಟ್ ಟ್ರಸ್ಟ್ ಮತ್ತು ಸೇವಾ ಸಂಸ್ಕಾರ ಸಮಿತಿಯು ನರ್ಮದಾ ನದಿಯಲ್ಲಿ ತೇಲಿ ಬಿಟ್ಟಿರುವುದಾಗಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಮಹಾಮಾರಿಯಿಂದ 10,518 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಚಿತಾಭಸ್ಮ ತೆಗೆದುಕೊಂಡ ಹೋಗದ ಕುಟುಂಬ
"ವಿಶ್ರಾಮ ಘಾಟ್ ಟ್ರಸ್ಟ್ ಮತ್ತು ಸೇವಾ ಸಂಸ್ಕಾರ ಸಮಿತಿಯು ಭಾನುವಾರ 57 ಜನರ ಚಿತಾಭಸ್ಮವನ್ನು ವಿಸರ್ಜನೆ ಮಾಡಲಾಯಿತು. ಅವರು ಕೋವಿಡ್ -19 ನಿಂದ ಸಾವನ್ನಪ್ಪಿದರು. ಆದರೆ ಅವರ ಚಿತಾಭಸ್ಮವನ್ನು ಅವರ ಕುಟುಂಬಗಳು ಅಂತ್ಯಕ್ರಿಯೆಯ ವಿಧಿವಿಧಾನಗಳ ನಂತರ ಸಂಗ್ರಹಿಸಿಲ್ಲ" ಎಂದು ಸುಭಾಷ್ ನಗರ ವಿಶ್ರಾಮ ಘಾಟ್ (ಸ್ಮಶಾನ)ದ ವ್ಯವಸ್ಥಾಪಕ ಶೋಭರಾಜ್ ಸುಖವಾನಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಅಶ್ರುದರ್ಪಣಕ್ಕೂ ಮೊದಲು ಒಂದು ತಿಂಗಳ ನಿರೀಕ್ಷೆ
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಚಿತಾಭಸ್ಮವನ್ನು ಒಂದು ತಿಂಗಳವರೆಗೂ ಸಂಗ್ರಹಿಸಿಡಲಾಗಿತ್ತು. ಅದಾಗ್ಯೂ, ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಮೃತರ ಕುಟುಂಬ ಸದಸ್ಯರು ಚಿತಾಭಸ್ಮವನ್ನು ಸಂಗ್ರಹಿಸುವಲ್ಲಿ ವಿಫಲರಾಗಿದ್ದರು. "ಆದ್ದರಿಂದ ಅಸ್ಥಿಯಾನ್ (ಸುಟ್ಟ ಅವಶೇಷಗಳನ್ನು) ಸಂಗ್ರಹಿಸಿ ಮತ್ತು ಹೋಶಂಗಾಬಾದ್ನ ನರ್ಮದಾ ನದಿಯಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಯಿತು," ಎಂದು ಶೋಭರಾಜ್ ಸುಖವಾನಿ ಹೇಳಿದ್ದಾರೆ.
ನರ್ಮದಾ ನದಿಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸುವ ಮುನ್ನ ಹಿಂದೂ ಆಚರಣೆಗಳ ಪ್ರಕಾರ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎಂದು ವಿಶ್ರಾಮ ಘಾಟ್ ಟ್ರಸ್ಟ್ ಅಧ್ಯಕ್ಷ ರಮೇಶ್ ಶರ್ಮಾ ಗುತ್ತು ತಿಳಿಸಿದ್ದಾರೆ. ಅಗಲಿದ ಆತ್ಮಗಳ ಶಾಂತಿಗಾಗಿ ನಾವು 'ತರ್ಪಣ' ಆಚರಣೆಯನ್ನು ನಡೆಸುತ್ತೇವೆ" ಎಂದು ಅವರು ಹೇಳಿದ್ದಾರೆ.
ಸುಂದರ ಉದ್ಯಾನವನಕ್ಕೆ 21 ಟ್ರಕ್ ಲೋಡ್ ಬೂದಿ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲೂ ಸಾವಿರಾರು ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರು. ಅವರ ಸಂಬಂಧಿಕರು ಮೃತರ ಚಿತಾಭಸ್ಮವನ್ನು ಸಂಗ್ರಹಿಸಲು ನಿರಾಕರಿಸಿದ ನಂತರ 12,000 ಚದರ ಅಡಿ ಭೂಮಿಯಲ್ಲಿ ಸುಂದರ ಉದ್ಯಾನವನ್ನು ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೇ ವರ್ಷದ ಜುಲೈನಲ್ಲಿ ಭೋಪಾಲ್ನ ಭದ್ಭದ ವಿಶ್ರಾಮ ಘಾಟ್ನ ನಿರ್ವಹಣಾ ಸಮಿತಿಯು COVID-19 ಸೋಂಕಿನಿಂದ ಸಾವನ್ನಪ್ಪಿದವರ 21 ಟ್ರಕ್ ಲೋಡ್ ಬೂದಿಯನ್ನು ಬಳಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿತ್ತು.
ದೇಶದಲ್ಲಿ ಕೊವಿಡ್-19 ಮತ್ತು ಸಾವಿನ ಸಂಖ್ಯೆ ಎಷ್ಟಿದೆ?
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 26041 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಒಂದೇ ದಿನ 29,621 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇದೇ ಅವಧಿಯಲ್ಲಿ 276 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,36,78,786ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 3,29,31,972 ಮಂದಿ ಸೋಂಕಿತರು ಗುಣಮುಖರಾಗಿದ್ದು, 4,47,194 ಮಂದಿ ಕೊರೊನಾವೈರಸ್ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. 2,99,620 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.