ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ರಾಜೀನಾಮೆ ಸಲ್ಲಿಸಿದ ಸಿಂಧಿಯಾ
ಭೋಪಾಲ್, ಜುಲೈ 07: ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಭಾನುವಾರ(ಜುಲೈ 07) ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ಸಲ್ಲಿಸಿದ ಬಳಿಕ ಆ ಸ್ಥಾನಕ್ಕೆ ಸಿಂಧಿಯಾ ಅವರ ಹೆಸರು ಕೇಳಿ ಬಂದಿದೆ. ಹೀಗಾಗಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿಂಧಿಯಾ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯಿದೆ.
ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಮುಖ್ಯಮಂತ್ರಿ ಕಮಲ್ ನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಈಗ ಗುಣ ಕ್ಷೇತ್ರದ ಮಾಜಿ ಸಂಸದ ಸಿಂಧಿಯಾ ಅವರು ರಾಹುಲ್ ಬದಲಿಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಯುವ ಮುಖಂಡರು ಕಾಂಗ್ರೆಸ್ ಮುನ್ನಡೆಸಲಿ ಎಂಬ ಕೂಗೆದ್ದಿರುವುದರಿಂದ ಸಿಂಧಿಯಾ ಅಲ್ಲದೆ ಸಚಿನ್ ಪೈಲಟ್, ಮಿಲಿಂದ್ ದಿಯೋರಾ ಅವರ ಹೆಸರು ಕೇಳಿ ಬಂದಿದೆ.
ರಾಹುಲ್ ಸ್ಥಾನ ತುಂಬಬಲ್ಲ ಸಮರ್ಥ ಸಂಭಾವ್ಯರ ಪಟ್ಟಿ ಬಹಿರಂಗ
ಮಿಕ್ಕಂತೆ, ಎಕೆ ಅಂಟನಿ, ಸುಶೀಲ್ ಕುಮಾರ್ ಶಿಂಧೆ ಹೆಸರು ಕೇಳೀ ಬಂದಿತ್ತು. ಮುಂದಿನ ವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊಸ ನಾಯಕನ ಆಯ್ಕೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದ ಬಳಿಕ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ರಾಹುಲ್ ಗಾಂಧಿ ನೊಂದಿದ್ದರು. ಮೇ 25ರಂದು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದ್ದರೂ, ಸಭೆ ಒಪ್ಪಿರಲಿಲ್ಲ.
ಇಡೀ ದೇಶದಾದ್ಯಂತ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳನ್ನು ಜಾರಿಗೆ ತರುವಂತೆ ರಾಹುಲ್ ಸೂಚಿಸಿದ್ದಾರೆ. ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನ ಪಡೆಯುವುದಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಈ ರೇಸಿನಿಂದ ಹೊರಗಿಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಈ ನಡುವೆ ಗಾಂಧಿ-ನೆಹರು ಮನೆತನಯೇತರ ಹಿರಿಯ ಮುಖಂಡರೊಬ್ಬರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ಲೋಕಸಭಾ ನಾಯಕನ ಸ್ಥಾನಕ್ಕೆ ಅಧೀರ್ ರಂಜನ್ ಚೌಧುರಿ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಲಾಗಿದೆ.