ಬೆಂಗಳೂರಿಗೆ ಬರುತ್ತಿದ್ದ ಲಾರಿಯಿಂದ 9 ಸಾವಿರ ಮೊಬೈಲ್ ಕಳವು!
ಮಥುರಾ ಅಕ್ಟೋಬರ್ 17: ಗ್ರೇಟರ್ ನೋಯ್ಡಾದಿಂದ ಬೆಂಗಳೂರಿಗೆ ಬರುತ್ತಿದ್ದ ಲಾರಿಯಲ್ಲಿದ್ದ ಮೊಬೈಲ್ ಕಳವು ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಲಾರಿಯಲ್ಲಿದ್ದ ಮೊಬೈಲ್ಗಳನ್ನು ದೋಚಲಾಗಿದೆ. ಲಾರಿಯಲ್ಲಿದ್ದ ಮೊಬೈಲ್ ಕಳುವಾದ ಬಗ್ಗೆ ಉತ್ತರ ಪ್ರದೇಶದ ಮಥುರಾದಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕನನ್ನು ಥಳಿಸಿ, ವಾಹನದಿಂದ ಹೊರಕ್ಕೆ ದೂಡಿ ಲಾರಿಯಲ್ಲಿದ್ದ ಸುಮಾರು 7 ಕೋಟಿ ಮೌಲ್ಯದ 9,000 ಮೊಬೈಲ್ ಫೋನ್ಗಳನ್ನು ಲೂಟಿ ಮಾಡಲಾಗಿದೆ. ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಅಕ್ಟೋಬರ್ 5ರಂದು ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್, "ಒಪ್ಪೋ ಮೊಬೈಲ್ ಕಂಪನಿಯ ಮ್ಯಾನೇಜರ್ ಸಚಿನ್ ಮಾನವ್ ಸಲ್ಲಿಸಿದ ದೂರಿನಲ್ಲಿ, ಫರೂಖಾಬಾದ್ ಜಿಲ್ಲೆಯ ಚಾಲಕ ಮನೀಶ್ ಯಾದವ್ ಅಕ್ಟೋಬರ್ 5ರಂದು ಗ್ರೇಟರ್ ನೋಯ್ಡಾದಿಂದ ಹೊರಟಿದ್ದಾರೆ. ಬೆಳಗ್ಗೆ ಲಾರಿಗೆ ಮೊಬೈಲ್ ಫೋನ್ಗಳನ್ನು ಲೋಡ್ ಮಾಡಿದ ನಂತರ ಲಾರಿ ಬೆಂಗಳೂರಿಗೆ ಹೊರಟಿದೆ. ಇಬ್ಬರು ಫರಾ ಪೊಲೀಸ್ ಠಾಣೆ ಪ್ರದೇಶದ ಗ್ವಾಲಿಯರ್ ಬೈಪಾಸ್ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಲಾರಿ ಹತ್ತಿದ್ದರು" ಎಂದರು.
ಲಾರಿ ಬಬಿನಾ ಟೋಲ್ ಗೇಟ್ ದಾಟಿದ ಬಳಿಕ ಪ್ರಯಾಣಿಕರ ಸೋಗಿನಲ್ಲಿದ್ದ ದುಷ್ಕರ್ಮಿಗಳು ಚಾಲಕನನ್ನು ಥಳಿಸಿದ್ದಾರೆ. ಆತನನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ವಾಹನದಿಂದ ಹೊರಗೆ ದೂಡಿ ಲಾರಿಯ ಜೊತೆ ಪರಾರಿಯಾಗಿದ್ದಾರೆ. ಬಳಿಕ ಶಿಯೋಪುರ್ ಜಿಲ್ಲೆಯ ಮಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಖಾಲಿ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬಂಧ ದೂರು ನೀಡಲು ಮಧ್ಯಪ್ರದೇಶ ಪೊಲೀಸರನ್ನು ಸಂಪರ್ಕಿಸಿದ್ದಾಗಿ ದೂರುದಾರರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾರೆ. ಆದರೆ ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ದೂರು ತೆಗೆದುಕೊಳ್ಳದೇ ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಸಹ ಲಾರಿ ಚಾಲಕ ಆರೋಪಿಸಿದ್ದಾನೆ. ನಂತರ ಆಗ್ರಾದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಈ ಕುರಿತು ದೂರು ನೀಡಲಾಯಿತು. ನಂತರ ಪ್ರಕರಣವನ್ನು ಮಥುರಾದಲ್ಲಿ ದಾಖಲಿಸಲಾಗಿದೆ.
ಸದ್ಯ ಮಧ್ಯಪ್ರದೇಶದ ಮಾನ್ಪುರ್ ಪೊಲೀಸರ ವಶದಲ್ಲಿ ಲಾರಿ ಇದೆ. ಲಾರಿಯಲ್ಲಿ 8,990 ಮೊಬೈಲ್ ಫೋನ್ಗಳಿದ್ದು, ಇವುಗಳ ಮೌಲ್ಯ ಸುಮಾರು 7 ಕೋಟಿ ರೂ.ಗಳು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರನ್ನು ಸಹ ಸಂಪರ್ಕಿಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ನಡೆಸಿದ್ದು, ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.