6ನೇ ರಾಜ್ಯ: ಮಧ್ಯಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕಥೆ ಅಷ್ಟೇ
ಭೂಪಾಲ್, ಫೆಬ್ರವರಿ.05: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಮತ್ತೊಂದು ರಾಜ್ಯ ಸಮರ ಸಾರಿದೆ. ದೇಶದ 6ನೇ ರಾಜ್ಯವು ಬುಧವಾರ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದೆ.
ಸಿಎಎ ಮತ್ತು ಎನ್ ಆರ್ ಸಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರಗಳು ಸಿಡಿದೇಳುತ್ತಿವೆ. ಸಾಲು ಸಾಲು ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುತ್ತಿದ್ದು, ಅದೇ ಸಾಲಿಗೆ ಮಧ್ಯಪ್ರದೇಶ ಸೇರ್ಪಡೆಯಾಗಿದೆ.
ಸಿಎಎ ವಿರುದ್ಧ ನಿರ್ಣಯ ಪಾಸ್: ಇದು ಮಮತಾ ಸರ್ಕಾರದ ನಿರ್ಧಾರ
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಪಾಸ್ ಮಾಡಲಾಗಿದೆ. ಸಿಎಎ ರದ್ದುಗೊಳಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಜಾತಿ ಆಧಾರದಲ್ಲಿ ವಲಸಿಗರ ವಿಂಗಡಣೆಗೆ ವಿರೋಧ
ನೆರೆ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದಿರುವ ಪ್ರಜೆಗಳಿಗೆ ಭಾರತದ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರವು ರೂಪಿಸಿದ ಕಾಯ್ದೆಯು ಧರ್ಮದ ಆಧಾರದಲ್ಲಿ ವಲಸಿಗರನ್ನು ವಿಂಗಡಿಸಲಾಗುತ್ತಿದೆ. ಇದನ್ನು ಮಧ್ಯಪ್ರದೇಶ ಸರ್ಕಾರ ಒಪ್ಪುವುದಿಲ್ಲ ಎಂದು ಸಿಎಂ ಕಮಲ್ ನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ
ಭಾರತವು ಸಂವಿಧಾನವನ್ನು ಅಳವಡಿಸಿಕೊಂಡ ನಂತರದಲ್ಲಿ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಒಂದು ಕಾಯ್ದೆಯನ್ನು ರಚಿಸಿದ್ದರೆ ಅದೇ ಪೌರತ್ವ ತಿದ್ದುಪಡಿ ಕಾಯ್ದೆ. ಜಾತ್ಯಾತೀತ ರಾಷ್ಟ್ರದಲ್ಲಿ ಇಂಥ ಕಾಯ್ದೆಗಳನ್ನು ರೂಪಿಸುವುದು ಸಂವಿಧಾನಕ್ಕೆ ವಿರುದ್ಧವಾಗುತ್ತದೆ.
ಪೌರತ್ವ ಕಾಯ್ದೆ ವಿರುದ್ಧ ರಾಜ್ಯದಲ್ಲಿ ಶಾಂತಿಯುತ ಹೋರಾಟ
ಪೌರತ್ವ ತಿದ್ದುಪಡಿ ಕಾಯ್ದೆಯ ಅಂಶಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ಜನರಲ್ಲಿ ಸ್ಪಷ್ಟತೆ ಇಲ್ಲ. ಸಾಕಷ್ಟು ಗೊಂದಲಗಳ ನಡುವೆ ರಾಷ್ಟ್ರಾದ್ಯಂತ ಉಗ್ರ ಸ್ವರೂಪದ ಪ್ರತಿಭಟನೆಗಳು ನಡೆದವು. ಮಧ್ಯಪ್ರದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗಳಾದವು ಎಂದು ಉಲ್ಲೇಖಿಸಲಾಗಿದೆ.
ಈ ರಾಜ್ಯಗಳಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕಾರ
ಇನ್ನು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗಾಗಲೇ ಐದು ರಾಜ್ಯಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಕೇರಳ, ಪಂಜಾಬ್, ರಾಜಸ್ಥಾನ್, ಪಶ್ಚಿಮ ಬಂಗಾಳ, ಛತ್ತೀಸ್ ಗಢ್ ರಾಜ್ಯಗಳು ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಿಎಎ ವಿರುದ್ಧ ನಿರ್ಣಯ ಪಾಸ್ ಮಾಡಿವೆ. ಇದೀಗ ಮಧ್ಯಪ್ರದೇಶ ಸರ್ಕಾರ ಕೂಡಾ ಅದೇ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು, ಸಿಎಎ ವಾಪಸ್ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.