ಲಾಕ್ ಡೌನ್ ವೇಳೆ ಕೆಲಸ ಹುಡುಕದ ಪತಿಯನ್ನೇ ಕೊಂದ ಪತ್ನಿ.!
ಭೋಪಾಲ್, ಮೇ 31: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ಮೇಲೆ, ದಿನಗೂಲಿಯನ್ನೇ ನಂಬಿಕೊಂಡಿದ್ದ ನೌಕರರು, ಕಾರ್ಮಿಕರು ಸಂಕಷ್ಟಕ್ಕೆ ಗುರಿಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು, ಕೈಯಲ್ಲಿ ಕಾಸಿಲ್ಲದೆ, ಹೊಟ್ಟೆಗೆ ಆಹಾರವಿಲ್ಲದೆ ವಲಸೆ ಕಾರ್ಮಿಕರು ಪಡುತ್ತಿರುವ ಪಾಡು ಹೇಳತೀರದು. ಪರಿಸ್ಥಿತಿ ಹೀಗಿರುವಾಗ 'ಕೆಲಸ ಹುಡುಕಲಿಲ್ಲ' ಎಂಬ ಕಾರಣಕ್ಕೆ 38 ವರ್ಷದ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಲಾಕ್ಡೌನ್ ಸಮಯದಲ್ಲಿ ಮನೆಗಳ್ಳತನ; 12 ಲಕ್ಷ ರು ವಶ
ಮಧ್ಯಪ್ರದೇಶದ ಖಾರ್ಕಳಾ ಎಂಬ ಗ್ರಾಮದಲ್ಲಿ ಮೇ 24 ರಂದು ಮಧ್ಯಾಹ್ನ ಪತಿ ರಮೇಶ್ ಮತ್ತು ಪತ್ನಿ ಲೀಲಾ ನಡುವೆ ಮಾಹಾಮಾರಿ ನಡೆದಿದೆ. ಲಾಕ್ ಡೌನ್ ವೇಳೆಯಲ್ಲಿ ಕೆಲಸ ಹುಡುಕುವಂತೆ ಪತಿಗೆ ಪತ್ನಿ ಲೀಲಾ ಕೇಳಿಕೊಂಡಾಗ, ಕೆಲಸ ಸಿಗುತ್ತಿಲ್ಲ ಅಂತ ಪತಿ ರಮೇಶ್ ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಆಗಿದೆ. ಗಲಾಟೆಯಲ್ಲಿ ಪತ್ನಿ ಲೀಲಾ ಮತ್ತು ಆಕೆಯ ತಾಯಿ ಪ್ರೇಮ್ ಬಾಯಿ.. ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ನನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಚಿಕಿತ್ಸೆಗೆ ಸ್ಪಂದಿಸದೆ ಮೇ 27 ರಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ: ಚೌಡೇಶ್ವರಿ ದೇವಸ್ಥಾನದ ಹುಂಡಿ ಹೊತ್ತೊಯ್ದ ಕಳ್ಳರು!
ರಮೇಶ್ ಪತ್ನಿ ಲೀಲಾ ಹಾಗೂ ಅತ್ತೆ ಪ್ರೇಮ್ ಬಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಾವನ್ನಪ್ಪುವ ಮುನ್ನ ರಮೇಶ್ ನೀಡಿದ್ದ ಹೇಳಿಕೆಯನ್ನು ಆಧರಿಸಿ ಲೀಲಾ ಮತ್ತು ಪ್ರೇಮ್ ಬಾಯಿಯನ್ನು ಬಂಧಿಸಲಾಗಿದೆ.