ಮಧ್ಯಪ್ರದೇಶದಲ್ಲಿ ಮಕ್ಕಳ ಕಳ್ಳರೆಂದು ಕಾಂಗ್ರೆಸ್ ಮುಖಂಡರನ್ನು ಥಳಿಸಿದ ಸ್ಥಳೀಯರು
ಭೋಪಾಲ್, ಜುಲೈ 27: ಅಪಹರಣಕಾರರು ಎಂದು ತಪ್ಪು ತಿಳಿದು ಮೂವರು ಕಾರ್ಯಕರ್ತರಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ಶನಿವಾರ ನಡೆದಿದೆ.
ಕೆಲವು ದಿನಗಳಿಂದ ನಗರದಲ್ಲಿ ಮಕ್ಕಳ ಕಳ್ಳರು ನಗರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಕಾರಿನಲ್ಲಿ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಮಕ್ಕಳ ಕಳ್ಳರೆಂದು ತಿಳಿದು ರಸ್ತೆಗೆ ಅಡ್ಡವಾಗಿ ಮರದ ದಿಮ್ಮಿಯನ್ನು ಹಾಕಿ ಬ್ಲಾಕ್ ಮಾಡಿ ಬಳಿಕ ಅವರನ್ನು ಥಳಿಸಿದ್ದಾರೆ.
ಧಮೇಂದ್ರ ಶುಲ್ಕ, ಧರ್ಮು ಸಿಂಗ್, ಲಲಿತ್ ಭರಾಸ್ಕರ್ ಹಲ್ಲೆಗೊಳಗಾದ ಸ್ಥಳೀಯ ಮುಖಂಡರಾಗಿದ್ದಾರೆ. ರಾತ್ರಿ ಕಾರಿನಲ್ಲಿ ಬಂದ ಮೂವರು ರಸ್ತೆಯಲ್ಲಿದ್ದ ಬ್ಯಾರಿಕೇಡ್ನ್ನು ಪಕ್ಕಕ್ಕೆ ಸರಿಸುತ್ತಿದ್ದಂತೆ ಊರ ಜನರು ಅವರನ್ನು ಮಕ್ಕಳ ಕಳ್ಳರೆಂದು ತಿಳಿದು ಅವರಿಗೆ ಹೊಡೆದಿದ್ದಾರೆ.
ಸಾರ್ವಜನಿಕರು ಅವರನ್ನು ಹೈವೇ ದರೋಡೆಕೋರರು ಎಂದು ಹಿಂಬಾಲಿಸಿಕೊಂಡು ಹೋಗಿ ಅವರ ಕಾರಿನ ಗಾಜನ್ನು ಒಡೆದು ಕಾರನ್ನು ಹಾಳುಮಾಡಿದ್ದಾರೆ. ಥಳಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಮಕ್ಕಳ ಕಳ್ಳರು ಅಂದುಕೊಂಡು ಹಲ್ಲೆ ಮಾಡುವ ಪ್ರಕರಣ ಮಧ್ಯಪ್ರದೇಶದಲ್ಲಿ ಹೆಚ್ಚಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಕ್ಕಳ ಕಳ್ಳರೆಂದು ವಿಕಲಾಂಗ ಚೇತನ ಮಹಿಳೆ ಹಾಗೂ ಇಬ್ಬರು ವ್ಯಕ್ತಿಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಕಳೆದ ಜುಲೈನಲ್ಲಿ ಟೆಕ್ಕಿಯೊಬ್ಬನಿಗೆ ಮಕ್ಕಳ ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿದ್ದರು.