ಒಂದು ಮರದ ಭದ್ರತೆಗಾಗಿ ವರ್ಷಕ್ಕೆ 15 ಲಕ್ಷ ರುಪಾಯಿ ಖರ್ಚು
ಭೋಪಾಲ್, ಮಾರ್ಚ್ 24: ರಾಷ್ಟ್ರಪತಿ, ಪ್ರಧಾನಮಂತ್ರಿ ಅಂದರೆ ಭಾರೀ ಭದ್ರತೆ ಕೊಟ್ಟಿರುತ್ತಾರೆ. ಈ ಬಗ್ಗೆ ನಿಮಗೂ ಗೊತ್ತಿರುತ್ತದೆ. ಆದರೆ ಈ ವರದಿಯಲ್ಲಿ ಒಂದು ಅಪರೂಪದ ಮಾಹಿತಿ ನೀಡುತ್ತಿದ್ದು, ಮರವೊಂದಕ್ಕೆ ದಿನದ ಇಪ್ಪತ್ನಾಲ್ಕು ಗಂಟೆಯೂ ಭದ್ರತೆ ಒದಗಿಸಲಾಗುತ್ತದೆ. ಇದು ನಿಜ ಕಣ್ರೀ. ಮಧ್ಯಪ್ರದೇಶದ ಭೋಪಾಲ್ ಮತ್ತು ವಿದಿಶಾದ ಮಧ್ಯೆ ಸಲಮತ್ ಪುರ್ ಎಂಬಲ್ಲಿ ಬೆಟ್ಟ ಇದ್ದು, ಅಲ್ಲಿ ಈ ಮರ ಇದೆ.
ಯಾವ ಅತಿಗಣ್ಯ ನಾಯಕರಿಗೂ ಕಡಿಮೆ ಇಲ್ಲದಂತೆ ಈ ಮರಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಈಗ ನಿಮಗೆ ಅಚ್ಚರಿ ಆಗಬಹುದು. ಆದರೆ ಯಾವ ಕಾರಣಕ್ಕೆ ಈ ಭದ್ರತೆ ಎಂಬುದನ್ನು ವಿವರವಾಗಿ ತಿಳಿಸಲಾಗುತ್ತದೆ. ಈ ಮರವನ್ನು ರಕ್ಷಣೆ ಮಾಡುವ ಸಲುವಾಗಿಯೇ ದಿನದ ಇಪ್ಪತ್ನಾಲ್ಕು ಗಂಟೆಯೂ ಪೊಲೀಸರನ್ನು ನೇಮಕ ಮಾಡಲಾಗಿದೆ.
ವಿಡಿಯೋ: ಕೋಲಾರದಲ್ಲಿ ಮಾನಸಿಕ ಅಸ್ವಸ್ಥನಿಗೆ ಅನ್ನ ಕೊಟ್ಟ ಪೊಲೀಸ್
ಈ ಮರಕ್ಕಾಗಿಯೇ ಸಾಂಚಿ ಪಾಲಿಕೆಯಿಂದ ನೀರು ತರಲಾಗುತ್ತದೆ. ಕೃಷಿ ಇಲಾಖೆಯಿಂದ ಪ್ರತಿ ವಾರ ಅಧಿಕಾರಿಗಳು ಬಂದು, ಮರವನ್ನು ಪರೀಕ್ಷೆ ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ, ವರ್ಷಕ್ಕೆ 12-15 ಲಕ್ಷ ರುಪಾಯಿಯನ್ನು ಈ ಮರದ ನಿರ್ವಹಣೆಗಾಗಿಯೇ ಖರ್ಚು ಮಾಡಲಾಗುತ್ತದೆ.
ಇದು ಅರಳಿ ಮರ. 2012ನೇ ಇಸವಿಯಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಸೆ ಇಲ್ಲಿ ಗಿಡ ನೆಟ್ಟರು. ಅಂದ ಹಾಗೆ ಈ ಮರಕ್ಕೆ ಬೋಧಿವೃಕ್ಷ ಎಂಬ ಹೆಸರೂ ಇದೆ. ಬುದ್ಧನಿಗೆ ಜ್ಞಾನೋದಯ ಆಗಿದ್ದು ಬೋಧಿ ವೃಕ್ಷದ ಕೆಳಗೆ. ಆದ್ದರಿಂದ ಬೌದ್ಧ ಧರ್ಮದಲ್ಲಿ ಇದಕ್ಕೆ ವಿಶಿಷ್ಟ ಸ್ಥಾನ.
ನಂಬಿಕೆಗಳ ಪ್ರಕಾರ, ಸಾಮ್ರಾಟ ಅಶೋಕ, ಅವನ ಮಗ ಮಹೇಂದ್ರ, ಮಗಳು ಸಂಘಮಿತ್ರಾ ಸೇರಿ, ಬೌದ್ಧ ಧರ್ಮದ ಪ್ರಚಾರಕ್ಕೆ ಶ್ರೀಲಂಕಾಗೆ ತೆರಳಿದರಂತೆ. ಬೋಧಿವೃಕ್ಷದ ಕೊಂಬೆಯನ್ನು ತೆಗೆದುಕೊಂಡು ಹೋಗಿ, ಶ್ರೀಲಂಕಾದ ಅನುರಾಧಪುರಂನಲ್ಲಿ ನೆಟ್ಟರಂತೆ. ಅದು ಇಂದಿಗೂ ಅಲ್ಲಿದೆ.
ಗೃಹಬಂಧನ ಬಿಡುಗಡೆಯಾದ ಒಮರ್ಗೆ ಲಾಕ್ಡೌನ್ ಸ್ವಾಗತ
ಇನ್ನು ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷ ಇದ್ದದ್ದು ಬಿಹಾರದ ಗಯಾದಲ್ಲಿ. ಅದನ್ನು ನಾಶಪಡಿಸಲು ಹಲವು ಸಲ ಯತ್ನಿಸಲಾಗಿದೆ. ಆದರೆ ಪ್ರತಿ ಸಲ ಅಲ್ಲಿ ಹೊಸ ಮರ ಬೆಳೆದಿದೆ. 1876ರಲ್ಲಿ ಪ್ರಾಕೃತಿಕ ವಿಕೋಪದಿಂದ ಮರ ನಾಶವಾಗಿತ್ತು. 1880ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಕನ್ನಿಂಗ್ ಹ್ಯಾಮ್ ಶ್ರೀಲಂಕಾದ ಅನುರಾಧಪುರಂದಿಂದ ಬೋಧಿವೃಕ್ಷದ ಕೊಂಬೆ ತಂದು, ಬಿಹಾರದ ಗಯಾದಲ್ಲಿ ನೆಟ್ಟರು. ಇಂದು ಅದು ದೊಡ್ಡ ಮರವಾಗಿದೆ.