ಮಧ್ಯಪ್ರದೇಶದಲ್ಲಿ ದಾಖಲೆ ಸೃಷ್ಟಿಯಾದ ದಿನದಂದು 13 ವರ್ಷದ ಬಾಲಕನಿಗೆ ಲಸಿಕೆ!
ಭೋಪಾಲ್, ಜೂ.29: ಪ್ರಸ್ತುತ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆ ಪಡೆಯಬಹುದಾಗಿದೆ. ಆದರೆ ಮಧ್ಯಪ್ರದೇಶದ 13 ವರ್ಷದ ವಿಕಲಚೇತನ ಬಾಲಕನಿಗೆ ಲಸಿಕೆ ನೀಡಲಾಗಿದೆ ಎಂದು ಕುಟುಂಬಸ್ಥರ ಮೊಬೈಲ್ಗೆ ಬಂದಿದೆ.
ಸಂದೇಶದಲ್ಲಿ ಭೋಪಾಲ್ನ ತಿಲಾ ಜಮಾಲ್ಪುರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸಿಸುವ ಹದಿಮೂರು ವರ್ಷದ ವೇದಾಂತ್ ದಂಗ್ರೆಗೆ ಲಸಿಕೆ ಹಾಕಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಆದರೆ ಈ ಸಂದೇಶದಲ್ಲಿ 13 ವರ್ಷದ ಬಾಲಕನ ವಯಸ್ಸು ಮಾತ್ರ 56 ಎಂದು ಉಲ್ಲೇಖ ಮಾಡಲಾಗಿದೆ.
ಅತಿ ಹೆಚ್ಚು ಲಸಿಕೆ ನೀಡಲಾಗಿರುವ ರಾಜ್ಯಗಳ ಪಟ್ಟಿ ಇಲ್ಲಿದೆ
ಈ ಬಗ್ಗೆ ಮಾಹಿತಿ ನೀಡಿದ ಬಾಲಕನ ತಂದೆ ರಜತ್ ಡಂಗ್ರೆ, "21 (ಜೂನ್) ರಂದು, ಸಂಜೆ 7.27 ಕ್ಕೆ, ವೇದಾಂತ್ಗೆ ಲಸಿಕೆ ಹಾಕಲಾಗಿದೆ ಎಂದು ನನಗೆ ಸಂದೇಶ ಬಂದಿತು. ಅವನಿಗೆ ಕೇವಲ 13 ವರ್ಷ. ನಾನು ಈ ಬಗ್ಗೆ ದೂರು ನೀಡಲು ಪ್ರಯತ್ನಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಲಿಂಕ್ ಬಳಸಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿದಾಗ, ನಾನು ವೇದಾಂತ್ನ ಪಿಂಚಣಿಗಾಗಿ (ವಿಶೇಷಚೇತನ ವ್ಯಕ್ತಿಗಳಿಗೆ ನೀಡುವ) ಕೆಲವು ದಿನಗಳ ಹಿಂದೆ ಮುನ್ಸಿಪಲ್ ಕಾರ್ಪೊರೇಶನ್ಗೆ ಸಲ್ಲಿಸಿದ್ದ ದಾಖಲೆಗಳನ್ನು ಇದಕ್ಕೆ ಬಳಸಲಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದೇನೆ," ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶವು ಜೂನ್ 21 ರಂದು 17.42 ಲಕ್ಷ ಕೋವಿಡ್ ಲಸಿಕೆಗಳನ್ನು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಆದರೆ ಈಗ, ರಾಜ್ಯದಲ್ಲಿ ಹೆಚ್ಚುತ್ತಿರುವ "ಫಲಾನುಭವಿಗಳು" ಲಸಿಕೆಯ ಒಂದು ಡೋಸ್ ಸಹ ಪಡೆಯದೆಯೇ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.
ಐದು ನಿಮಿಷದಲ್ಲಿ ಬಂತು ಅಪರಿಚಿತ ಮೂವರು ಲಸಿಕೆ ಪಡೆದ ಎಸ್ಎಮ್ಎಸ್
ವೇದಾಂತ್ಗೆ ಈ ಎಸ್ಎಮ್ಎಸ್ ಬಂದಿರುವ ದಿನವೇ, ಸತ್ನಾದ ಚೈನೇಂದ್ರ ಪಾಂಡೆಗೆ ಐದು ನಿಮಿಷಗಳಲ್ಲಿ ಮೂರು ಸಂದೇಶಗಳು ಬಂದಿದೆ. ಪಾಂಡೆಗೆ ಗೊತ್ತಿಲ್ಲದ ಮೂರು ಜನರಿಗೆ ಲಸಿಕೆ ನೀಡಿರುವ ಬಗ್ಗೆ ಈ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಕತಿಕ್ರಮ್, ಕಾಳಿಂದ್ರಿ ಮತ್ತು ಚಂದನ್ ಎಂದು ಲಸಿಕೆ ಹಾಕಿದ ಬಗ್ಗೆ ಬಂದ ಎಸ್ಎಮ್ಎಸ್ನಲ್ಲಿ ಹೆಸರಿದೆ. ಆಘಾತಕ್ಕೊಳಗಾದ ಮತ್ತು ಗೊಂದಲಕ್ಕೊಳಗಾದ ಚೈನೇಂದ್ರ ಬೇರೆ ಯಾರದೋ ಸಂದೇಶ ತನಗೆ ಹೇಗೆ ಬಂದಿದೆ ಎಂದು ಆಶ್ಚರ್ಯಗೊಂಡಿದ್ದಾರೆ. "ಐದು ನಿಮಿಷಗಳಲ್ಲಿ ಮೂರು ಸಂದೇಶಗಳು ಬಂದವು, ಕೇವಲ ಹೆಸರು ವಿಭಿನ್ನವಾಗಿದೆ. ಇಲ್ಲಿಯವರೆಗೆ ನನಗೆ ಯಾವುದೇ ಲಸಿಕೆ ಸಿಕ್ಕಿಲ್ಲ," ಎಂದು 52 ವರ್ಷದ ಚೈನೇಂದ್ರ ಎನ್ಡಿಟಿವಿಗೆ ತಿಳಿಸಿದರು.
3 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿ ಕೋವಿಡ್ ಲಸಿಕೆ ಫಲಾನುಭವಿ! - ಇದು ಗುಜರಾತ್ನ ಏಕೈಕ ಪ್ರಕರಣವಲ್ಲ
ಇನ್ನು ಲಸಿಕೆ ಹೇಗೆ ಪಡೆಯಲಿ? : ಮಹಿಳೆಗೆ ಆತಂಕ
ಇನ್ನು ಭೋಪಾಲ್ನ ಪಿಜಿಬಿಟಿ ಕಾಲೇಜು ರಸ್ತೆಯಲ್ಲಿ ವಾಸಿಸುವ 46 ವರ್ಷದ ನುಝತ್ ಸಲೀಂಗೆ ಜೂನ್ 21 ರಂದು ಲಸಿಕೆ ಪಡೆಯುದ ಸಂದೇಶವೂ ಬಂದಿದೆ. ಆಕೆ ಪಿಂಚಣಿದಾರೆ ಅಲ್ಲದಿದ್ದರೂ, ಪಿಂಚಣಿ ದಾಖಲೆಗಳನ್ನು ಆಕೆಯ ಗುರುತಿಗೆ ಪುರಾವೆಯಾಗಿ ದಾಖಲು ಮಾಡಲಾಗಿದೆ. "ನಾನು ಇನ್ನೂ ಲಸಿಕೆ ಪಡೆಯದಿದ್ದಾಗ 'ನಿಮಗೆ ಲಸಿಕೆ ಸಿಕ್ಕಿದೆ' ಎಂದು 21 ನೇ ರಾತ್ರಿ 10:57 ಕ್ಕೆ ನನಗೆ ಸಂದೇಶ ಬಂದಿದೆ, ಈಗ ನಾನು ಲಸಿಕೆ ಹೇಗೆ ಪಡೆಯುವುದು ಎಂಬ ಚಿಂತೆ ಉಂಟಾಗಿದೆ," ಎಂದು ಹೇಳಿದ್ದಾರೆ.
ಲಸಿಕೆ ಪಡೆಯದವರಿಗೆ ಬಂತು ಲಸಿಕೆ ಪಡೆದ ಎಸ್ಎಮ್ಎಸ್!
ರತ್ಲಾಂನಲ್ಲಿ ಸುಮಾರು 300 ಕಿ.ಮೀ ದೂರದಲ್ಲಿರುವ ಊರಿನಲ್ಲಿರುವ, ತೆರಿಗೆ ಸಲಹೆಗಾರ ಪ್ರೇಮ್ ಪಾಂಡ್ಯಗೆ ಇದೇ ರೀತಿಯ ಸಂಕಷ್ಟ ಉಂಟಾಗಿದೆ. ಪ್ರೇಮ್ ಪಾಂಡ್ಯ ಲಸಿಕೆಗಾಗಿ ನೋಂದಣಿ ಮಾಡಿದ್ದರು. ಆದರೆ ಲಸಿಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಅದೇ ದಿನ ಪ್ರೇಮ್ ಪಾಂಡ್ಯ ಲಸಿಕೆ ಪಡೆದಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ. "ನಾನು ಹೋಗದಿದ್ದರೂ ನಿಮಗೆ ಲಸಿಕೆ ಸಿಕ್ಕಿದೆ ಎಂದು ಸಂಜೆ 4 ಗಂಟೆಗೆ ಸಂದೇಶ ಬಂದಿತು. ನಾನು ಲಸಿಕೆ ಹೇಗೆ ಪಡೆದುಕೊಂಡೆ? ನಾನು ಅದರ ಬಗ್ಗೆ ಫೇಸ್ಬುಕ್ನಲ್ಲಿ ಬರೆದಿದ್ದೇನೆ. ನಂತರ ಮರುದಿನ, ದಯವಿಟ್ಟು ಬನ್ನಿ ಎಂದು ಕರೆ ಮಾಡಿದ್ದಾರೆ," ಎಂದು ತಿಳಿಸಿದ್ದಾರೆ.
ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದ ವೈದ್ಯಕೀಯ ಶಿಕ್ಷಣ ಸಚಿವ
ಜನರು ಇಷ್ಟೆಲ್ಲಾ ಮಾಹಿತಿ ನೀಡಿದ್ದರೂ, ಸರ್ಕಾರದ ಈ ಸಮಸ್ಯೆಯನ್ನು ತಳ್ಳಿಹಾಕಿದೆ. "ಅಂತಹ ಯಾವುದೇ ಸಮಸ್ಯೆ ಇಲ್ಲ. ನಿಮಗೆ ಎಲ್ಲಿಂದ ಮಾಹಿತಿ ಸಿಕ್ಕಿದೆ ಎಂದು ನನಗೆ ತಿಳಿದಿಲ್ಲ. ನಾನು ಇದನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ. ಏನಾದರೂ ಇಂತಹ ಸಂಸ್ಯೆ ಇದೆ ಎಂದು ಗಮನಕ್ಕೆ ಬಂದರೆ ನಾವು ಅದನ್ನು ತನಿಖೆ ಮಾಡುತ್ತೇವೆ," ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಎನ್ಡಿಟಿವಿಗೆ ತಿಳಿಸಿದರು. ಆದರೆ ವಿರೋಧ ಪಕ್ಷ ಕಾಂಗ್ರೆಸ್ ಮಾತ್ರ ಸರ್ಕಾರವನ್ನು ದೂಷಿಸಿದೆ. ಲಸಿಕೆ ದಾಖಲೆಗಳನ್ನು ಮುರಿಯುವ ಆತುರದಲ್ಲಿ ಸರ್ಕಾರ ಡೇಟಾವನ್ನು ತಿರುಚುತ್ತಿದೆ ಎಂದು ಈ ಪ್ರಕರಣಗಳು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಹೇಳಿದೆ. "ಪ್ರತಿದಿನ ಹೊಸ ಅಂಕಿ ಅಂಶಗಳು ಹೊರಬರುತ್ತಿವೆ. 13 ವರ್ಷದ ಮಗು ಮತ್ತು ಸತ್ತ ವ್ಯಕ್ತಿಗೆ ಲಸಿಕೆ ನೀಡಲಾಗಿದೆ ಎಂದು ಎಸ್ಎಮ್ಎಸ್ ಬಂದಿದೆ. ಬೆತುಲ್ನ ನಲವತ್ತೇಳು ಹಳ್ಳಿಗಳಿಗೆ ಲಸಿಕೆ ಸಿಗಲಿಲ್ಲ. ಈ ಲಸಿಕೆ ದಾಖಲೆಯು ಬರಿ ಗಿಮಿಕ್," ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಆರೋಪಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)