ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಚಿವ ಜಮೀರ್ ವಿಚಾರಣೆ
ಬೆಂಗಳೂರು, ಜುಲೈ 5: ಐಎಂಎ ಜ್ಯುವೆಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಂದು ಸಚಿವ ಜಮೀರ್ ಅಹಮದ್ ಅವರ ವಿಚಾರಣೆ ನಡೆಸಲಿದೆ.
ಜಮೀರ್ ಅವರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಂತಿನಗರದ ಇಡಿ ಕಚೇರಿಗೆ ಸಚಿವರು ಹಾಜರಾಗಲಿದ್ದು, ಅಧಿಕಾರಿಗಳು ನಡೆಸುವ ವಿಚಾರಣೆ ಎದುರಿಸಲಿದ್ದಾರೆ ಎನ್ನಲಾಗಿದೆ.
ಐಎಂಎ ವಂಚನೆ ಪ್ರಕರಣ: ಜಮೀರ್ ಅಹ್ಮದ್ಗೆ ಮನೆಗೆ ಇಡಿ ಅಧಿಕಾರಿಗಳು
ಸಚಿವರ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್ನ ಸರ್ಕಾರಿ ಮನೆಗೆ ಹೋಗಿ ಸಚಿವರ ಕೈಗೆ ಇಡಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದರು. ನೋಟಿಸ್ ತಲುಪಿದ ನಂತರ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅವರು, ಕಾನೂನು ಪ್ರಕಾರವಾಗಿ ನಿವೇಶನ ಮಾರಾಟ ಮಾಡಿದ್ದೇನೆ. ಇಡಿ ವಿಚಾರಣೆಗೆ ಹಾಜರಾಗಿ ಎಲ್ಲಾ ದಾಖಲಾತಿಗಳನ್ನ ನೀಡಿ ವಿವರಣೆ ನೀಡುತ್ತೇನೆ ಎಂದಿದ್ದರು.
ರಿಚ್ಮಂಡ್ ಟೌನಿನಲ್ಲಿರುವ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನ ಮನ್ಸೂರ್ ಖಾನ್ಗೆ ಸಚಿವ ಜಮೀರ್ ಮಾರಾಟ ಮಾಡಿದ್ದರು. ಈ ಬಗ್ಗೆ ವಿವರಣೆಗೆ ಹಾಜಾರಾಗುವಂತೆ ಇ.ಡಿ ಅಧಿಕಾರಿಗಳು ಜಮೀರ್ ಅವರಿಗೆ ನೋಟೀಸ್ ನೀಡಿದ್ದರು.
ಮನ್ಸೂರ್ ಅಲಿಖಾನ್ ಸಾವಿರಾರು ಮಂದಿಗೆ ವಂಚನೆ ಮಾಡಿ ವಿದೇಶಕ್ಕೆ ಹಾರಿದ್ದಲ್ಲದೆ, ಅಲ್ಲಿಂದ ವಿಡಿಯೋಒಂದನ್ನು ಕೂಡ ಹರಿಬಿಟ್ಟಿದ್ದರು.
ಜೂನ್ 5ರಂದು ಖುದ್ದು ಹಾಜರಾಗಿ ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಜೊತೆ ನಡೆಸಿದ ನಿವೇಶನ ಮಾರಾಟ ಸಂಬಂಧ ಮಾಹಿತಿ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು.