ಜನವರಿಯಲ್ಲಿಯೇ ಸಂಪುಟ ವಿಸ್ತರಣೆ: ರೇಣುಕಾಚಾರ್ಯ
ಬೆಂಗಳೂರು, ಜ.24: ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡು ಪುಟ್ಪಾತ್ ನಲ್ಲಿದ್ದ ಚಿಲ್ಲರೆ ಗಿರಾಕಿ ಜಮೀರ್ ಅಹ್ಮದ್ ಖಾನ್ ಅವರನ್ನು ಕರೆದುಕೊಂಡು ಬಂದು ಮಂತ್ರಿ ಮಾಡಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಗೂ ಅಣ್ಣ ಕುಮಾರಣ್ಣ ಎನ್ನುತ್ತಲೆ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಏನೂ ಮಾಡಿದರು ಎಂಬುದು ನನಗೆ ಗೊತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮಾಜಿ ಸಚಿವ ಜಮೀರ್ ಆಹ್ಮದ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದ್ರೆ ನಾನೂ ಕೂಡ ಅದೇ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಜಮೀರ್ ಆಹ್ಮದ್ ಖಾನ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ನಾನು ಹೇಳಿಕೆ ನೀಡಿರುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಇದೇ ಸಂದರ್ಭದಲ್ಲಿ ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಪೌರತ್ವ ಕಾಯ್ದೆ ಅರಿವು ಕಾರ್ಯಕ್ರಮಗಳಿಗೆ ಮುಸ್ಲಿಂ ಸಮುದಾಯದ ಯುವಕರು ಹೋಗದಂತೆ ಫತ್ವಾ ಹೊರಡಿಸಿ ತಡೆಯಲಾಗಿತ್ತು. ಇದರಿಂದ ನನಗೆ ನೋವಾಗಿತ್ತು, ಅದರಿಂದಾಗಿ ಹಾಗೆ ಹೇಳಿದ್ದೆ ಎಂದಿದ್ದಾರೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ದ ಸಿಡಿದೆದ್ದ ಮುಸ್ಲಿಂ ಸಮುದಾಯ
ದಿನೇಶ್ ಗುಂಡೂರಾವ್, ಕರ್ನಾಟಕಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿದ್ದ ಮಾಜಿ ಸಚಿವ ಯು.ಟಿ. ಖಾದರ್ ಅವರನ್ನು ಮೊದಲು ಉಚ್ಛಾಟನೆ ಮಾಡಲಿ. ಖೋಟಾ ನೋಟು ದಂಧೆಯಲ್ಲಿ ತೊಡಗಿರುವ ಜಮೀರ್ ಅಹಮದ್ ಖಾನ್ರನ್ನು ಉಚ್ಛಾಟನೆ ಮಾಡಲಿ. ಅದನ್ನೆಲ್ಲ ಬಿಟ್ಟು ಒಂದೇ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದ ದಿನೇಶ್ ಗುಂಡೂರಾವ್ ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ವಿದೇಶದಿಂದ ಬಂದ ತಕ್ಷಣ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಜನವರಿ ತಿಂಗಳಲ್ಲೆ ಸಂಪುಟ ವಿಸ್ತರಣೆ ಆಗಲಿದೆ. ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಸಿಎಂ ಚರ್ಚೆ ಮಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ತೊಂದರೆಯಿಲ್ಲ. ಉಪಮುಖ್ಯಮಂತ್ರಿ ಹುದ್ದೆ ಕುರಿತು ನನ್ನ ಅಭಿಪ್ರಾಯ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲಿ ಯಾರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಈಗ ಮತ್ತೆ ಅದರ ಬಗ್ಗೆ ಏನನ್ನು ಮಾತನಾಡುವುದಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟಿದ್ದಾರೆ.