ಚಾಮರಾಜಪೇಟೆಯಲ್ಲಿ ಜಮೀರ್ ಚಾಯ್ ಪೇ ಚರ್ಚಾ!
ಬೆಂಗಳೂರು, ನವೆಂಬರ್ 13 : ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಶಾಸಕ ಜಮೀರ್ ಅಹಮದ್ ಖಾನ್ ಟೀ ತಯಾರಿಸಿ , ಜನರೊಂದಿಗೆ ಸವಿದು ಮಾತುಕತೆ ನಡೆಸಿದರು.
ಜಮೀರ್ ಹುಟ್ಟಿದ ಹಬ್ಬಕ್ಕೆ ದೇವೇಗೌಡ್ರು ಕೊಟ್ಟ ಭರ್ಜರಿ ರಾಜಕೀಯ ಗಿಫ್ಟ್
ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಭಾನುವಾರ ಬಿಜೆಪಿಯ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮಾದರಿಯಲ್ಲಿಯೇ ಚಿಕ್ಕ ಕಾರ್ಯಕ್ರಮ ನಡೆಸಿದರು. ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ನಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಜಮೀರ್ ಅಹಮದ್ ವಿರುದ್ಧ ಲಹರಿ ವೇಲು ಬಿಜೆಪಿ ಅಭ್ಯರ್ಥಿ?
ಭಾನುವಾರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲಿಸಿದ ಬಳಿಕ ಜಮೀರ್ ಅಹಮದ್ ಖಾನ್, ಅರಾಫಾತ್ ಟೀ ಅಂಗಡಿಗೆ ಭೇಟಿ ಕೊಟ್ಟರು. ಸ್ವತಃ ತಾವೇ ಟೀ ತಯಾರಿಸಿ ಅಲ್ಲಿದ್ದ ಜನರಿಗೆ ನೀಡಿದರು. ಜನರ ಅಹವಾಲು ಸ್ವೀಕಾರ ಮಾಡುತ್ತಲೇ ಟೀ ಸವಿದರು.
ಜೆಡಿಎಸ್ನಿಂದ ಅಮಾನತು ಗೊಂಡಿದ್ದಾರೆ
2013ರ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜಮೀರ್ ಅಹಮದ್ ಖಾನ್ ಈಗ ಪಕ್ಷದಿಂದ ಅಮಾನತುಗೊಂಡಿದ್ದಾರೆ. 2018ರ ಚುನಾವಣೆಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ ನೆಚ್ಚಿನ ನಾಯಕ
ಚಾಮರಾಪೇಟೆ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿರುವ ಜಮೀರ್ ಕ್ಷೇತ್ರದ ಜನರ ನೆಚ್ಚಿನ ನಾಯಕರು. 2013ರ ಚುನಾವಣೆಯಲ್ಲಿ ಅವರು 56,339 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು
ಚಾಮರಾಜಪೇಟೆ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. 1994ರ ನಂತರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. ಈ ಬಾರಿ ಕೆಲವು ದಿನಗಳ ಹಿಂದೆ ಪಕ್ಷ ಸೇರಿರುವ ಲಹರಿ ವೇಲು ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
ದೇವೇಗೌಡರ ಮಾಸ್ಟರ್ ಪ್ಲಾನ್
ಪಕ್ಷದಿಂದ ಅಮಾನತುಗೊಂಡಿರುವ ಜಮೀರ್ ಅಹಮದ್ ಖಾನ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ದೇವೇಗೌಡರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಮುಸ್ಲಿಂ ಅಭ್ಯರ್ಥಿಯನ್ನು ಜಮೀರ್ ಅಹಮದ್ ಖಾನ್ ವಿರುದ್ಧ ಕಣಕ್ಕಿಳಿಸಲು ಜೆಡಿಎಸ್ ನಿರ್ಧಿರಿಸಿದೆ.