ಶಾಸಕ ಜಮೀರ್ ಅಹಮದ್ ಬಂಧನ: ಸಿದ್ದರಾಮಯ್ಯ ಹೀಗಂದ್ರು
ಬೆಂಗಳೂರು, ಜನವರಿ 13: ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಬಂಧಿಸಬೇಕಿದ್ದ ಬಿಜೆಪಿ ಸರ್ಕಾರ ನಮ್ಮ ಶಾಸಕ ಜಮೀರ್ ಅಹ್ಮದ್ ಅವರನ್ನು ಬಂಧಿಸಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಸಂವಿಧಾನ ವಿರೋಧಿ ಹೇಳಿಕೆಯಿಂದ ಕೋಮುದ್ವೇಷ ಕೆರೆಳಿಸಿದ್ದ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಬಂಧಿಸಬೇಕಿದ್ದ ಬಿಜೆಪಿ ಸರ್ಕಾರ ಶಾಂತಿಯುತವಾಗಿ ಪ್ರತಿಭಟಿಸಲು ಹೋಗಿದ್ದ ಜಮೀರ್ ಅವರನ್ನು ಬಂಧಿಸಿರುವುದು ಖಂಡನೀಯ ಅವರನ್ನು ಶೀಘ್ರ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಜಮೀರ್ ಅಹ್ಮದ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಫ್ಐಆರ್ ದಾಖಲು
ಹಿಂದು - ಮುಸ್ಲಿಂ ಸಮುದಾಯದ ಕೋಮು ಸೌಹಾರ್ದತೆ ಕದಡುವಂತ ಹೇಳಿಕೆಯನ್ನು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಕೆಲ ದಿನಗಳ ಹಿಂದೆ ನೀಡಿದ್ದರು.
ಜತೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೆಂಡಾಮಂಡಲರಾಗಿದ್ದರು. ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮೀರ್, ಬಳ್ಳಾರಿಗೇ ಬರುತ್ತೇನೆ, ಅದೇನು ಮಾಡ್ತೀರೋ ಮಾಡಿ ಎಂದು ಗುಡುಗಿದ್ದರು.
ಇದೀಗ ಹೇಳಿದಂತೆ ಜಮೀರ್ ಸೋಮಶೇಖರ್ ಮನೆಗೆ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾದ ಕಾರಣಕ್ಕೆ ಜಮೀರ್ ಮತ್ತವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.