'ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್!
ಬೆಂಗಳೂರು, ಜೂನ್ 02 : ಗೋವಿನ ರಕ್ಷಣೆಗೆ ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರಕ್ಕೆ ಬೆಂಬಲ ಮತ್ತು ಅಭಿನಂದನೆಯನ್ನು ಸೂಚಿಸಲು ಗೋವಿನ ಹಬ್ಬ ('ಬಿಲೀಫ್ ಫೆಸ್ಟ್') ಆಚರಿಸುವಂತೆ ಯುವ ಬ್ರಿಗೇಡ್ ಕರೆ ಕೊಟ್ಟಿದೆ.
ಹಲವು ದಿನಗಳ ಗೋವುಗಳನ್ನು ಸಾಕಿ ಕಾಪಾಡಿದ ಗೋಶಾಲೆಗಳ ಗೋಪಾಲಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಯುವ ಬ್ರಿಗೇಡ್ ರಾಜ್ಯಾದ್ಯಂತ ಗೋವಿನ ಹಬ್ಬ ('ಬಿಲೀಫ್ ಫೆಸ್ಟ್') ಆಯೋಜಿಸುತ್ತಿದೆ. 'ಬಿಲೀಫ್ ಫೆಸ್ಟ್' ನ್ನು ಯಾರು ಬೇಕಾದರೂ ಮಾಡಬಹುದು.
ಗೋವಿನ ಹಾಲು ಕುಡಿಯುವ ಗೋವನ್ನು ಪ್ರೀತಿಸುವ ಯಾವ ಧರ್ಮದವರು ಬೇಕಿದ್ದರೂ ಇದರಲ್ಲಿ ಭಾಗವಹಿಸಬಹುದು. ಏನಿದು 'ಬಿಲೀಫ್ ಫೆಸ್ಟ್'?, ಇದನ್ನು ಹೇಗೆ ಮತ್ತು ಎಲ್ಲಿ ಮಾಡ್ಬೇಕು? ಎಂಬುವುದನ್ನು ಮುಂದೆ ಓದಿ.
ಹೇಗೆ ಮಾಡುವುದು? ಮೊದಲು ಗೋಶಾಲೆಯನ್ನು ಆಯ್ದುಕೊಂಡು ಗೋಶಾಲೆಯ ಮುಖ್ಯಸ್ಥರಿಂದ ಕಾರ್ಯಕ್ರಮಕ್ಕೆ ಅನುಮತಿ ಪಡೆಯಿರಿ. ಗೋ ಮಹತ್ವದ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಬಲ್ಲ ವಾಗ್ಮಿ, ಗೋಶಾಲೆಯ ಮುಖ್ಯಸ್ಥ ಮತ್ತು ಬಹಳ ವರ್ಷಗಳಿಂದ ಗೋಸೇವೆ ಮಾಡಿದ ಗೋಸೇವಕ ಅಥವಾ ಗೋರಕ್ಷಕ, ಈ ಮೂವರನ್ನು ಅತಿಥಿಗಳಾಗಿ ಕರೆಯಿರಿ.
ಕಾರ್ಯಕ್ರಮದ ದಿನ ಗೋಶಾಲೆಯನ್ನು ಸ್ವಚ್ಛಗೊಳಿಸಿ. ತಳಿರು ತೋರಣ ರಂಗೋಲಿಗಳಿಂದ ಅಲಂಕರಿಸಿ. ಗೋವುಗಳಿಗೆ ಅಂದು ಗೋಶಾಲೆಯವರು ವಿಶೇಷ ಸ್ನಾನ ಮಾಡಿಸಿ ಗೋಪೂಜೆ ನಡೆಯಲಿ. ಅನುಕೂಲವಿದ್ದರೆ ಹೋಮ ಹವನಗಳನ್ನೂ ಆಯೋಜಿಸಬಹುದು. ಆದರೆ, ನಾವು ಮಾಡುವ ಪೂಜೆ ಗೋವುಗಳಿಗೆ ಕಿರಿಕಿರಿಯಾಗದಂತಿರಲಿ. ಪಟಾಕಿ ಮತ್ತು ಸಿಡಿಮದ್ದುಗಳ ಬಳಕೆ ಬೇಡ.
ಗೋವಿನ ಕೊಂಬಿಗೆ ಅನವಶ್ಯಕ ವಸ್ತುಗಳನ್ನು ಕಟ್ಟುವುದು ಅಥವಾ ಬಣ್ಣ ಬಳಿಯುವುದು ಇತ್ಯಾದಿಗಳನ್ನು ಮಾಡದಿರಿ. ಗೋಶಾಲೆಯಲ್ಲಿ ಕೆಲಸ ಮಾಡುವ ಗೋಪಾಲಕರನ್ನು ಹೂವಿನ ಹಾರ, ಹಣ್ಣು, ಶಾಲು ಮತ್ತು ನೆನಪಿನ ಕಾಣಿಕೆಗಳನ್ನು ಕೊಟ್ಟು ಸನ್ಮಾನಿಸಿ.
ಅವರ ಮಕ್ಕಳಿಗೆ ಶಾಲೆಗೆ ಉಪಯುಕ್ತವಾಗುವ ನೋಟ್ ಪುಸ್ತಕ, ಪೆನ್, ಬ್ಯಾಗ್ ಇತ್ಯಾದಿಗಳನ್ನು ಕೊಡಿ. ಇದಕ್ಕೆ ಅತಿಯಾದ ಪೋಟೋ ಪ್ರಚಾರ ಬೇಡ. ಕಾರ್ಯಕ್ರಮದ ಕೊನೆಗೆ ದೇಶಿ ಹಸುಗಳ ಹಾಲಿನ ಪಾರ್ಟಿ ಮಾಡಬಹುದು.
ನೀವೇನು ಮಾಡಬೇಕು? ಈ ನೆಪದಲ್ಲಿ ಗೋಶಾಲೆಗೆ ಹೋಗಿ. ಗೋಶಾಲೆಗೆ ಆರ್ಥಿಕ ಸಹಾಯ ಮಾಡಿ ರಸೀದಿ ಪಡೆಯಿರಿ. ಮೇವು ಅಥವಾ ಬೆಲ್ಲ ಇತ್ಯಾದಿ ಆಹಾರ ಒದಗಿಸಿಕೊಡಿ. ನೀವು ಹೋಗುವಾಗ ನಿಮ್ಮೊಡನೆ ದಾನಿಗಳನ್ನು ಕರೆದೊಯ್ಯಿರಿ.
ನಿಮ್ಮ ಮಕ್ಕಳ ಹುಟ್ಟು ಹಬ್ಬವಿದ್ದರೆ ಅಲ್ಲಿ ಮಕ್ಕಳ ತುಲಾಭಾರ ಮಾಡಿಸಿ. ಅಂದರೆ ಅವರ ತೂಕದ ಬೆಲ್ಲವನ್ನು ಅಥವಾ ಧಾನ್ಯವನ್ನು ಗೋಶಾಲೆಗೆ ದಾನ ಕೊಡಿ.
ಉತ್ಸವದಲ್ಲಿ ಸಂತೋಷದಿಂದ ಪಾಲ್ಗೊಳ್ಳಿ. ಕಾರ್ಯಕ್ರಮದ ಆಯೋಜನೆಗೂ ಸಹಾಯ ಮಾಡಿ. ಕಾರ್ಯಕ್ರಮದ ಸ್ಥಳದಲ್ಲಿ ಮಾರಾಟಕ್ಕಿಟ್ಟಿರುವ ಗೋವಿಗೆ ಸಂಬಂಧಿಸಿದ ಪುಸ್ತಕಗಳು ಮತ್ತು ಗೋಗವ್ಯ ಉತ್ಪನಗಳ ಔಷಧಿಗಳನ್ನು ಮರೆಯದೇ ಕೊಂಡುಕೊಳ್ಳಿ.
ಉತ್ಸವ ನೋಡಿದ ನಂತರ ಬೇರೆ ಗೋಶಾಲೆಯಲ್ಲಿ ನೀವೇ ಬಿಲೀಫ್ ಫೆಸ್ಟ್ ಅನ್ನು ಆಯೋಜಿಸಿ. ಗೋವಿನ ರಕ್ಷಣೆಗೆ ಗೋಪ್ರೇಮಿಗಳಾದ ನಾವೆಲ್ಲರೂ ಒಂದಾಗಿದ್ದೇವೆಂದು ಸಮಾಜಕ್ಕೆ ಸಂದೇಶ ರವಾನಿಸಿ ಎಂದು ಯುವ ಬ್ರಿಗೇಡ್ ಹೇಳಿದೆ.