ಜೆಡಿಎಸ್ ನ ಬೆಳವಣಿಗೆಯಿಂದ ಬೇಸತ್ತ ವೈಎಸ್ ವಿ ದತ್ತ
ಬೆಂಗಳೂರು, ಮೇ 31: ಎಚ್.ಡಿ.ದೇವೇಗೌಡರ ಮಾನಸ ಪುತ್ರ ಅಂತಲೇ ಗುರುತಿಸಿಕೊಂಡಿರುವ ವೈಎಸ್ ವಿ ದತ್ತ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳಿಂದ ಬೇಸರಗೊಂಡಿದ್ದಾರಾ? ಹೌದು, ಎನ್ನುತ್ತಿವೆ ಮೂಲಗಳು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.
ಆ ನಂತರ ತಮ್ಮ ಸೋಲಿನ ಪರಾಮರ್ಶೆ ಮಾಡುತ್ತಾ, ಪಕ್ಷದೊಳಗೆ ಕೆಲವರಿಗೆ ನನ್ನ ಗೆಲುವು ಬೇಕಾಗಿರಲಿಲ್ಲ ಎಂದರು.
ಇನ್ನು ಸೈದ್ಧಾಂತಿಕವಾಗಿ ದೇವೇಗೌಡರ ವಿಚಾರಧಾರೆಗಳಿಗೆ ಹತ್ತಿರವಾಗಿರುವ ದತ್ತ ಅವರು ಕುಮಾರಸ್ವಾಮಿ ಸಿದ್ಧಾಂತ- ಆಲೋಚನೆಗಳಿಗೆ ಸ್ವಲ್ಪ ದೂರ. ವಿವಿಧ ಸಂದರ್ಭದಲ್ಲಿ ಸಿದ್ಧಾಂತದ ವಿಚಾರ ಬಂದಾಗ ದೇವೇಗೌಡರ ನಿಲವನ್ನು ಒಪ್ಪುವ ದತ್ತ, ಇತರರನ್ನು ಸಮರ್ಥಿಸಿಕೊಂಡವರಲ್ಲ.
ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು
ಇದೀಗ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ಸ್ವತಃ ದತ್ತ ಅವರಿಗೆ ಬೇಸರ ತರಿಸಿದಂತೆ ಇದೆ. ಈ ಬಗ್ಗೆ ಪ್ರಶ್ನೆ ಮಾಡಲು ಒನ್ಇಂಡಿಯಾ ಕನ್ನಡ ದತ್ತ ಅವರನ್ನು ಮಾತನಾಡಿಸಿತು. "ನಾನು ಇಪ್ಪತ್ತನೇ ವಯಸ್ಸಿನಲ್ಲಿ ಈ ಪಕ್ಷದೊಳಗೆ ಬಂದೆ. ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಮಧ್ಯೆ ಅಸಮಾಧಾನ ಬಂದಾಗ ಜಾತಿ ನೋಡದೆ ಗೌಡರ ಜತೆ ನಿಂತೆ. ಅದಕ್ಕೆ ಸೈದ್ಧಾಂತಿಕ ಕಾರಣ ಇದೆ" ಎಂದರು.
ಈ ಹಿಂದೆ ಪಕ್ಷದಿಂದ ನನ್ನನ್ನು ಎಂಎಲ್ ಸಿ ಮಾಡಲಾಯಿತು. ಆ ನಂತರ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ಕೆಲಸ ಮಾಡಬೇಕು ಅಂತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಿಂತೆ. ಅಲ್ಲಿ ಒಮ್ಮೆ ಗೆದ್ದೆ. ಆದರೆ ಈ ಬಾರಿ ಪಕ್ಷದೊಳಗಿನ ಕೆಲವರು ದ್ರೋಹ ಬಗೆದರು. ನನ್ನ ವಿರುದ್ಧ ಕೆಲಸ ಮಾಡಿದರು. ಇದರಿಂದ ಮನಸಿಗೆ ಘಾಸಿಯಾಗಿದೆ ಎಂದು ದತ್ತ ಹೇಳಿದರು.
ಈ ವಿಚಾರವಾಗಿ ದೇವೇಗೌಡರ ಜತೆಗೆ ಮಾತನಾಡುವುದಕ್ಕೆ ಶುಕ್ರವಾರ ಹೋಗುತ್ತಿದ್ದೇನೆ. ನನ್ನಂಥ ಸಿದ್ಧಾಂತ ಇರುವ ಸಾಮಾನ್ಯ ಕಾರ್ಯಕರ್ತನಿಂದ ಪಕ್ಷಕ್ಕೆ ಯಾವುದೇ ಉಪಯೋಗ ಇಲ್ಲ ಅನ್ನೋದಾದರೆ ಅಂತರ ಕಾಯ್ದುಕೊಂಡು ದೂರ ಇದ್ದು ಬಿಡುವುದೇ ಒಳ್ಳೆಯದಲ್ಲವಾ? ಎಂದವರೇ, ಮಾತು ಮುಗಿಸಿದರು ದತ್ತ.