ಬೆಂಗಳೂರಲ್ಲಿ ಬಿಯರ್ ಕೊಡಿಸದ ಸ್ನೇಹಿತನಿಗೆ ಚಾಕು ಹಾಕಿದ ಗೆಳೆಯ!
ಬೆಂಗಳೂರು, ಆಗಸ್ಟ್ 8: ಏಣ್ಣೆ ಏಟು ಮಾಡಿಸುವ ಎಡವಟ್ಟುಗಳು ಒಂದು ಎರಡಲ್ಲ. ಮದ್ಯಪಾನದ ಮತ್ತಿನಲ್ಲಿ ತೇಲಾಡುವ ಮಂದಿಗೆ ಮೈ ಮೇಲೆ ಪ್ರಜ್ಞೆಯೇ ಇರುವುದಿಲ್ಲ. ಈ ಮಾತು ನಿಜ ಎನ್ನುವಂತಹ ಘಟನೆಯೊಂದು ಬೆಂಗಳೂರಿನಲ್ಲೇ ನಡೆದು ಹೋಗಿದೆ.
ಮಿತಿ ಮೀರಿದ ಮದ್ಯಪಾನದ ಗುಂಗಿನಲ್ಲಿ ಸ್ನೇಹಿತನಿಗೆ ಚಾಕು ಹಾಕಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿದೆ. ತನಗೆ ಬಿಯರ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!
ಔಟಿಂಗ್, ನೈಟ್ ಪಾರ್ಟಿ ಎಂದು ಸುತ್ತಾಡುವ ಹುಡುಗರು ಕೊಂಚ ಯೋಚಿಸಬೇಕು. ತಮ್ಮ ಜೊತೆಗೆ ಬರುವ ಸ್ನೇಹಿತರು ಎಂಥವರು ಎಂಬುದನ್ನು ಅರಿತುಕೊಳ್ಳದಿದ್ದರೆ ಇಂಥ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಅಸಲಿಗೆ ಬೆಂಗಳೂರಿನಲ್ಲಿ ಆ ರಾತ್ರಿ ನಡೆದ ಘಟನೆಯಾದರೂ ಏನು ಎಂಬುದನ್ನು ಇಲ್ಲಿ ಓದಿ ತಿಳಿಯಿರಿ.
ಬಿಯರ್ ಕೊಡಿಸದ್ದಕ್ಕಿ ಚಾಕು ಇರಿದ ಸ್ನೇಹಿತ!
ಬೆಂಗಳೂರಿನಲ್ಲಿ ಬಿಯರ್ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಬೆಳಗ್ಗೆ ಹೊತ್ತಿನಲ್ಲಿ ತನ್ನ ಸ್ನೇಹಿತನಿಗೇ ಇರಿದು ಪರಾರಿಯಾಗಿದ್ದಾನೆ. ಬೈಯಪ್ಪನಹಳ್ಳಿ ಪೊಲೀಸರ ಪ್ರಕಾರ, ಬೈಯಪ್ಪನಹಳ್ಳಿ ಸಮೀಪದ ನಾಗವಾರಪಾಳ್ಯ ಮುಖ್ಯರಸ್ತೆ ನಿವಾಸಿ ರಾಘವೇಂದ್ರ ಎಂಬಾತ ತನ್ನ ಸ್ನೇಹಿತನಾಗಿರುವ ನಾಗವಾರಪಾಳ್ಯದ ಬಾಬಾಜಾನ್ ಚಾಕುವಿನಿಂದ ಇರಿದಿದ್ದಾನೆ.
ಗುರುವಾರ ಸಂಜೆ ಔಟಿಂಗ್ ಹೋಗಿದ್ದ ಗೆಳೆಯರು
ರಾಘವೇಂದ್ರ ಮತ್ತು ಬಾಬಾಜಾನ್ ಪರಸ್ಪರ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ರಾಘವೇಂದ್ರ ತನ್ನ ಸ್ನೇಹಿತನನ್ನು ಔಟಿಂಗ್ ಕರೆದುಕೊಂಡು ಹೋಗಿದ್ದಾನೆ. ತದನಂತರದಲ್ಲಿ ರಾಘವೇಂದ್ರ ಕೇಳಿದ ಎಂದು ಬಾಬಾಜಾನ್ 3 ಬಿಯರ್ ಬಾಟಲಿಯನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾನೆ. ಮಧ್ಯರಾತ್ರಿವರೆಗೂ ಸ್ನೇಹಿತರು ಪಾರ್ಟಿ ಮಾಡಿದ್ದಾರೆ. ಅಲ್ಲಿಂದ ಮುಂದೆ ಆಗಿದ್ದೇ ಬೇರೆ.
ಬಿಯರ್ ಕೊಡಿಸಲು ಕಾಸಿಲ್ಲ ಎಂದ ಬಾಬಾಜಾನ್
ಮಧ್ಯರಾತ್ರಿವರೆಗೂ ಬಿಯರ್ ಪಾರ್ಟಿ ಮಾಡಿದ ಸ್ನೇಹಿತ ರಾಘವೇಂದ್ರ ಅದೇ ಗುಂಗಿನಲ್ಲಿ ಮತ್ತೊಂದು ಬಾಟಲಿ ಖರೀದಿಸಿ ತರುವಂತೆ ಪಟ್ಟು ಹಿಡಿದಿದ್ದಾನೆ. ಈ ವೇಳೆ ಹಣವಿಲ್ಲ ಎಂದು ಬಾಬಾಜಾನ್ ಹೇಳುತ್ತಿದ್ದಂತೆ ರಾಘವೇಂದ್ರ ರಾಂಗ್ ಆಗಿದ್ದಾನೆ. ಅದು ಹೇಗೆ ಬಿಯರ್ ತರುವುದಿಲ್ಲ ಎಂದು ಆವಾಜ್ ಬಿಟ್ಟಿದ್ದಾನೆ.
ರಾಂಗ್ ರಾಘವೇಂದ್ರನಿಂದ ಗೆಳೆಯನಿಗೆ ಚಾಕು ಇರಿತ
ಎಣ್ಣೆ ಏಟಿನಲ್ಲಿ ಮೊದಲೇ ರಾಂಗ್ ಆಗಿದ್ದ ರಾಘವೇಂದ್ರ, ಬಿಯರ್ ತಂದು ಕೊಡುವುದಿಲ್ಲ ಎಂದಾಕ್ಷಣ ಮತ್ತಷ್ಟು ಕೆರಳಿದ್ದಾನೆ. ಕೈಯಲ್ಲಿ ಚಾಕು ಹಿಡಿದು ಬೆದರಿಸುವುದಕ್ಕೆ ಶುರು ಮಾಡಿದ್ದಾನೆ. ನೋಡನೋಡುತ್ತಿದ್ದಂತೆ ಚಾಕುವಿನಿಂದ ಬಾಬಾಜಾನ್ ಹೊಟ್ಟೆಗೆ ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಎಡ ತೊಡೆಯ ಭಾಗಕ್ಕೆ ಗಾಯವಾಗಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ರಾಘವೇಂದ್ರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.
Recommended Video