ಮೋಸದ ಬಗ್ಗೆ ಫೇಸ್ ಬುಕ್ ನಲ್ಲಿ ಲೈವ್ ಮಾಡಿ ಸಾವಿಗೆ ಶರಣಾದ ಯುವಕ !
ಬೆಂಗಳೂರು, ಫೆಬ್ರವರಿ 28: ಸ್ನೇಹಿತರು ವಂಚನೆ ಮಾಡಿದ ಬಗ್ಗೆ ಫೇಸ್ ಬಕ್ ಲೈವ್ ವಿಡಿಯೋ ಮಾಡಿರುವ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊತ್ತನೂರು ನಿವಾಸಿ ಮಂಜುನಾಥ್ ತನ್ನ ಬಳಿಯಿದ್ದ 11 ಲಕ್ಷ ರೂ. ಹಣವನ್ನು ಪವನ್ ಎಂಬುವರಿಗೆ ನೀಡಿದ್ದರು. ವಾಪಸು ನೀಡುವುದಾಗಿ ಪವನ್ ಮತ್ತು ಆತನ ಆಪ್ತರು ಹಣ ಪಡೆದಿದ್ದರು. ಆದರೆ ಆರು ತಿಂಗಳಾದರೂ ಹಣ ವಾಪಸು ನೀಡಿರಲಿಲ್ಲ. ಹಣ ನೀಡುವಂತೆ ಪವನ್ ಗೆ ಕೇಳಿದಾಗ, ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದ ಬಳಿಕ ಮಂಜುನಾಥ್ ಫೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಮಾಡಿ ತನ್ನ ನೋವು ಹಂಚಿಕೊಂಡಿದ್ದಾರೆ.
ನನ್ನಿಂದ ಹನ್ನೊಂದು ಲಕ್ಷ ಪವನ್ ಮತ್ತು ಇತರರು ಪಡೆದು ಮೋಸ ಮಾಡಿದ್ದಾರೆ. ಕೇಳಿದರೆ ಜೀವ ಬೆದರಿಕೆ ಹಾಕಿದ್ದಾರೆ. ಇವರನ್ನು ಪೊಲೀಸರು ಬಿಡಬಾರದು. ನನ್ನ ಸಾವಿಗೆ ಇವರೇ ಕಾರಣ ರಾಗಿರುತ್ತಾರೆ. ಹಣ ನೀಡದೇ ಚಿತ್ರ ಹಿಂಸೆ ನೀಡುತ್ತಿರುವ ಪವನ್ ನನ್ನು ಬಂಧಿಸಿ. ನಾನು ಆತ್ಮಹತ್ಯೆ ಮೊರೆ ಹೋಗುತ್ತಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ವಿಡಿಯೋ ಅಪಲೋಡ್ ಮಾಡಿದ್ದ. ಆತನ ಆಪ್ತರು ಆತ್ಮಹತ್ಯೆ ಮಾಡಿಕೊಳ್ಳಬೇಡ ಎಂದು ಮನವಿ ಮಾಡಿದರೂ ಮಂಜುನಾಥ್ ಕೇಳಿಲ್ಲ.
ಎರಡು ದಿನದ ಹಿಂದೆ ನೇಣು ಬಿಗಿದುಕೊಂಡು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೃತ ದೇಹವನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪೊಷಕರಿಗೆ ಒಪ್ಪಿಸಲಾಗಿದೆ. ಪವನ್ ಗೆ ಯಾಕೆ ಮಂಜುನಾಥ್ ಅಷ್ಟೊಂದು ಹಣ ನೀಡಿದ್ದ ಎಂಬುದರ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪವನ್ ಮತ್ತು ಇತರರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777