ಬೆಂಗಳೂರಿನಲ್ಲಿ 50 ಜೆಸಿಬಿ, 50 ಟ್ರ್ಯಾಕ್ಟರ್ಗಳ ಮೂಲಕ ಬೃಹತ್ ಮೆರವಣಿಗೆ
ಬೆಂಗಳೂರು, ಆಗಸ್ಟ್ 15: ಭಾರತೀಯರಾಗಿ ಅಧಿಕಾರದಲ್ಲಿರುವ ನಾವುಗಳು ಮುಂದಿನ ಪೀಳಿಗೆಗೆ ಸರಿಯದ ಮಾರ್ಗ ತೋರಿಸಿದದ್ದರೆ ಅವರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಬಿಜೆಪಿ ಮುಖ್ಯ ಸಚೇತಕರಾದ ಸತೀಶ್ ರೆಡ್ಡಿ ಹೇಳಿದರು.
75 ನೇ ಸ್ವಾತಂತ್ರ್ಯ ಮಹೋತ್ಸವ ವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಆಗಸ್ಟ್ 14ರಂದು ಸೋಮವಾರ ಬೆಳಗ್ಗೆ ಬೆಂಗಳೂರಿನ ಪುಟ್ಟೇನಹಳ್ಳಿ ಸತ್ಯ ಗಣಪತಿ ದೇವಸ್ಥಾನದಿಂದ ಕಂಠೀರವ ಕ್ರೀಡಾಂಗಣದವೆರೆಗೆ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಾಜಿ ಉಪ ಮೇಯರ್ ರಾಮ್ ಮೋಹನ ರಾಜ್ ನೇತೃತ್ವದಲ್ಲಿ 50ಜೆಸಿಬಿಗಳು ಮತ್ತು 50 ಟ್ರ್ಯಾಕ್ಟರ್ ಗಳ ಮೂಲಕ ಬೃಹತ್ ಮೆರವಣಿಗೆ ನಡೆಯಿತು.
ಈ ವೇಳೆ ಮಾತನಾಡಿದ ಅವರು, ನಮ್ಮ ಆಡಳಿತ ಯಾವತ್ತೂ ರೈತರ ಪರವಾಗಿದೆ. ದೇಶಕ್ಕೆ ಯಾರು ಅಭದ್ರತೆಯನ್ನುಂಟು ಮಾಡುತ್ತಾರೋ ಅವರ ವಿರುದ್ಧ ಸರ್ಕಾರ ನಿಲ್ಲಲಿದೆ ಎಂಬುದನ್ನು ಎಲ್ಲರಿಗೂ ತಿಳಿಸಿಕೊಡುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ತೋರಿಸಲಾಗಿದೆ. ನಾವೆಲ್ಲರೂ ಭಾರತೀಯರು, ಎಲ್ಲಕ್ಕಿಂತ ಮಿಗಿಲಾದದ್ದು ನಮ್ಮ ದೇಶ, ನಮ್ಮ ದೇಶದ ಬಾವುಟ ಎಂದು ಅಪಾರವಾಗಿ ಪ್ರೀತಿಸುವವರು. ನಾವೆಲ್ಲರೂ ಕೂಡ ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗವನ್ನು ತೋರಿಸದಿದ್ದರೆ ಮುಂದಿನ ಪೀಳಿಗೆಯವರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ದಾಸ್ಯದ ಕಡೆಗೆ ನೂಕದಂತೆ ಎಚ್ಚರವಹಿಸಬೇಕು
ನಾವೆಲ್ಲರೂ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಹಿಂದೆ ಸುಲ್ತಾನರು ನಮ್ಮ ದೇಶವನ್ನು ದಾಸ್ಯದ ಕಡೆಗೆ ತಳ್ಳಿದ್ದರು. ಅದನ್ನು ನೆನೆಪಿನಲ್ಲಿಟ್ಟುಕೊಂಡು ನಾವು ಜವಾಬ್ದಾರಿಯಿಂದ ಇರದಿದ್ದರೆ ನಮ್ಮ ನೆರೆಯ ರಾಷ್ಟ್ರಗಳು ನಮ್ಮನ್ನ ದಾಸ್ಯದ ಕಡೆಗೆ ನೂಕುತ್ತಾರೆ.ಹಾಗಾಗಿ ಎಚ್ಚರಿಕೆಯಿಂದ ಭವಿಷ್ಯದ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದರು.
ನಂತರ ಮಾಜಿ ಉಪಮೇಯರ್ ರಾಮ್ ಮೋಹನ ರಾಜ್ ಮಾತನಾಡಿ, ರೈತರು, ಕಾರ್ಮಿಕರು ಎಲ್ಲರೂ ಈ ಮೆರವಣಿಗೆಯಲ್ಲಿ ಸೇರಿದ್ದಾರೆ. ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಬ್ಬರಿಗೂ ನಾವು ಭಾರತೀಯರು ಎಂಬ ಹೆಮ್ಮೆ ಇರಬೇಕು. ಜಾತಿ, ಧರ್ಮಕ್ಕಿಂತ ನಾವೆಲ್ಲರೂ ಭಾರತೀಯರು ಎಂಬ ಭಾವನೆಯೇ ನಮ್ಮನ್ನು ಒಗ್ಗಟ್ಟಾಗಿಸುತ್ತದೆ ಎಂದು ತಿಳಿಸಿದರು.
ಪುಟ್ಟೇನಹಳ್ಳಿಯಿಂದ ಪ್ರಾರಂಭವಾದ ಈ ವಿಶೇಷ ಮೆರವಣಿಗೆ ನಗರದ ವಿವಿಧ ಪ್ರಮುಖರಸ್ತೆಗಳ ಮೂಲಕ ಹಾದು ಕಂಠೀರವ ಕ್ರೀಡಾಂಗಣದಲ್ಲಿ ಸಮಾಪ್ತಿಯಾಯಿತು.