ಆಸ್ತಿ ಮಾರಿ ಆಸ್ಪತ್ರೆಗೆ ಬಂದವರಿಗೆ ಆಗಿದ್ದು ಎಂಥಾ ನಿರಾಸೆ?
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಿಡ್ನಿ ವೈಫಲ್ಯದ ಚಿಕಿತ್ಸೆ ಪಡೆದ ಯೆಮನ್ ದೇಶದ ಹದಿನೆಂಟು ವರ್ಷದ ಯುವತಿಗೆ ಎರಡೂ ಕಿವಿ ಕೇಳಿಸದಂತಾಗಿದೆ. ವೈದ್ಯಕೀಯ ನಿರ್ಲಕ್ಷದಿಂದಲೇ ಹೀಗಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಆಕೆ ಕೇಳಿಸಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ ನಂತರವೂ ವೈದ್ಯರು ಔಷಧ ಮುಂದುವರಿಸಿದರು ಎಂಬುದು ಪೋಷಕರ ಆರೋಪ. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯೆಮೆನ್ ರಾಯಭಾರ ಕಚೇರಿಯಿಂದಲೂ ಆ ಆಸ್ಪತ್ರೆಗೆ ಪತ್ರ ಬರೆದಿದ್ದು, ಸ್ಪಷ್ಟನೆ ಕೇಳಲಾಗಿದೆ.['ಮುಂಜಿ ಶಾಸ್ತ್ರ'ದಲ್ಲಿ ವೈದ್ಯರ ನಿರ್ಲಕ್ಷ್ಯ: ಸಿಎಂಗೆ ಪೋಷಕರ ಪತ್ರ]
ಯೆಮನ್ ನಲ್ಲಿ ಟ್ಯಾಕ್ಸಿ ಚಾಲಕರಾಗಿರುವ ಅಬ್ದುಲ್ಲಾ ಸಯೀದ್ ಮೆಸರಿ ಎಂಬುವರು ತಮ್ಮ ಮಗಳ ಕಿಡ್ನಿ ವೈಫಲ್ಯದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಉತ್ತಮ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕೆ ತಮ್ಮ ಆಸ್ತಿಯನ್ನೆಲ್ಲ ಮಾರಿ, ತಮ್ಮ ಕುಟುಂಬ ಸಮೇತರಾಗಿ ಏಪ್ರಿಲ್ 25ಕ್ಕೆ ಇಲ್ಲಿಗೆ ಬಂದಿದ್ದಾರೆ.
ಅವರ ಪಾಲಿಗೆ ಆ ಚಿಕಿತ್ಸೆಯೇ ದುಃಸ್ವಪ್ನದಂತಾಯಿತು ಎಂದು ಆ ಕುಟುಂಬಕ್ಕೆ ಸ್ನೇಹಿತರಾಗಿರುವವರು ಹೇಳುತ್ತಾರೆ. ಆ ಹುಡುಗಿಗೆ ಕಿವಿ ಕೇಳಿಸದಂತೆ ಅದ ಮೇಲೆ ಬೇರೆ ಆಸ್ಪತ್ರೆಗೆ ಪರೀಕ್ಷೆಗಾಗಿ ಕರೆದೊಯ್ದಿದ್ದಾರೆ. ಕಿಡ್ನಿ ವೈಫಲ್ಯದ ಚಿಕಿತ್ಸೆಗಾಗಿ ನೀಡಿದ ಔಷಧದ ಅಡ್ಡ ಪರಿಣಾಮದಿಂದಲೇ ಹೀಗಾಗಿದೆ ಎಂದು ಗೊತ್ತಾಗಿದೆ.[ಹುಲಿ ಕಚ್ಚಿದ್ದಕ್ಕಿಂತ ಬಡತನದ ಗಾಯವೇ ಹೆಚ್ಚು ಆಳ!]
ಆ ಹೆಣ್ಣುಮಗಳ ವೈದ್ಯಕೀಯ ವರದಿ ಪ್ರಕಾರ, ಔಷಧ ಪ್ರಮಾಣವನ್ನು ಎರಡಷ್ಟು ಮಾಡಿರುವುದು ಕಂಡುಬಂದಿದೆ. ಅದನ್ನು ಆ ಕುಟುಂಬದವರ ಗಮನಕ್ಕೂ ತಂದಿಲ್ಲ. ಈ ರೀತಿ 42 ದಿನ ಔಷಧ ನೀಡಿದ್ದಾರೆ ಎಂದು ಆ ಕುಟುಂಬಕ್ಕೆ ಸ್ನೇಹಿತರಾದ ಯೂಸುಫ್ ಎಂಬುವರು ತಿಳಿಸಿದ್ದಾರೆ. ವಕೀಲರು ನೀಡಿದ ಮಾಹಿತಿ ಪ್ರಕಾರ, ಚಿಕಿತ್ಸೆಗಾಗಿ ಇದೀಗ ಆ ಹುಡುಗಿಯನ್ನು ಈಜಿಪ್ಟ್ ಗೆ ಕರೆದೊಯ್ಯಲಾಗಿದೆ.