ಕಡಬಗೆರೆ ಸೀನ ಶೂಟೌಟ್: ನನ್ನ ಪಾತ್ರ ಏನಿಲ್ಲ: ಶಾಸಕ ವಿಶ್ವನಾಥ್
ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೂ ಸಿದ್ಧ ಹಾಗೂ ಯಾವುದೇ ರೀತಿಯ ತನಿಖೆಗೂ ಸಿದ್ಧ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 09: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೂ ಸಿದ್ಧ ಹಾಗೂ ಯಾವುದೇ ರೀತಿಯ ತನಿಖೆಗೂ ಸಿದ್ಧ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ವಿಧಾನಸೌಧದಲ್ಲಿ ಅಂಗಳದಲ್ಲಿ ಸುದ್ದಿಗಾರರ ಮುಂದೆ ಈ ರೀತಿ ಹೇಳಿದರು.
ನಾಲ್ಕು ವರ್ಷದ ಹಿಂದೆ ಶ್ರೀನಿವಾಸ್ ನನ್ನ ಆತ್ಮೀಯರಾಗಿದ್ದರು. ನಮ್ಮಿಬ್ಬರದು ರಾಜಕೀಯ ನಂಟು. ನಾಲ್ಕು ವರ್ಷಗಳಿಂದ ನಾನು, ಶ್ರೀನಿವಾಸ್ ಸಂಪರ್ಕದಲ್ಲಿಲ್ಲ ಎಂದರು. ಆದರೆ, ಶೂಟೌಟ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲದಿದ್ದರೂ ಕೆಲ ಮಾಧ್ಯಮಗಳಲ್ಲಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದರು.[ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣ: ಮತ್ತೆ ಇಬ್ಬರ ಬಂಧನ]
ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ತನಿಖೆಗೆ ಸಿದ್ಧ ಎಂದು ಹೇಳಿದ್ದೇನೆ. ಮಂಪರು ಪರೀಕ್ಷೆಗೂ ಒಳಪಡಿಸಲಿ. ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದರು. ಮಾಧ್ಯಮಗಳು ತಮ್ಮ ಕುಟುಂಬದ ಸದಸ್ಯರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸತೀಶ್ ಎಂಬುವರು ಸ್ನೇಹಿತ.
ಆದರೆ, ಬಲಗೈ ಭಂಟ ಎಂಬ ರೀತಿಯಲ್ಲಿ ತಮ್ಮೊಂದಿಗೆ ಲಿಂಕ್ ಮಾಡುವುದು ಸರಿಯಲ್ಲ. ಜನಪ್ರತಿನಿಧಿಯಾಗಿ ಹಲವು ರೀತಿಯ ಜನರ ಸಂಪರ್ಕವಿರುತ್ತದೆ. ಸತ್ಯಾಸತ್ಯತೆ ಪರಿಶೀಲಿಸದೆ ತಮ್ಮನ್ನೇ ಆರೋಪಿ ಎಂಬ ರೀತಿ ಬಂಬಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.