ಸಂಕ್ರಾಂತಿ ಹಬ್ಬದಂದು ಯಲಚೇನಹಳ್ಳಿ ಮೆಟ್ರೋಗೆ ಹಸಿರು ನಿಶಾನೆ
ಬೆಂಗಳೂರು, ಜನವರಿ 13: ಬಹು ನಿರೀಕ್ಷಿತ ಯಲಚೇನಹಳ್ಳಿ ಹಾಗೂ ಅಂಜನಾಪುರ ನಡುವಿನ ನಮ್ಮ ಮೆಟ್ರೋ ಸಂಚಾರ ಮಕರ ಸಂಕ್ರಾಂತಿ ದಿನದಂದು ಹಸಿರು ನಿಶಾನೆ ತೋರಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಸಾಧ್ಯವಾದ ಬಳಿಕ ನಮ್ಮ ಮೆಟ್ರೋ ಹಸಿರು ಮಾರ್ಗದ ಯಲಚೇನಹಳ್ಳಿ ಇಂದ ಸಿಲ್ಕ್ ಇನ್ಸ್ಟಿಟ್ಯೂಟ್ ತನಕದ ಮಾರ್ಗಕ್ಕೆ ಸಂಕ್ರಾಂತಿ ಹಬ್ಬದಂದು ಚಾಲನೆ ನೀಡಲಾಗುತ್ತದೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಜನವರಿ 14ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೋಣನಕುಂಟೆ ಕ್ರಾಸ್ ನಮ್ಮ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಎರಡನೇ ಹಂತದ ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವ ಹರ್ದೀಪ್ ಸಿಂಗ್ ಅವರು ಕೂಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 15ರಿಂದ ಯಲಚೇನಹಳ್ಳಿ ಹಾಗೂ ಅಂಜನಾಪುರ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ (ಬಿಎಂಆರ್ ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.
After the successful launch of the train service to the Airport, here is one more step towards easing commute in Bengaluru. Namma Metro's 6 km Yelachenahalli to Silk Institute stretch of the Green Line will be flagged off on January 14. #BengaluruMission2022@cpronammametro pic.twitter.com/187jY5m2DT
— B.S. Yediyurappa (@BSYBJP) January 13, 2021
Recommended Video
ಭೈಯಪ್ಪನಹಳ್ಳಿ- ಮೈಸೂರು ರಸ್ತೆ 18.08 ಕಿ.ಮೀ ದೂರದ ನೇರಳೆ ಮಾರ್ಗ ಹಾಗೂ ನಾಗಸಂದ್ರ ಹಾಗೂ ಯಲಚೇನಹಳ್ಳಿ ನಡುವಿನ 24.22 ಕಿ. ಮೀ ದೂರದ ಹಸಿರು ಮಾರ್ಗದ ಜೊತೆಗೆ ಈಗ ವಿಸ್ತರಿಸಿದ ಹಸಿರು ಮಾರ್ಗವಾಗಿ ಯಲಚೇನಹಳ್ಳಿ-ಅಂಜನಾಪುರ ನಡುವೆ ರೀಚ್ 4 ಬಿ ಮಾರ್ಗ 6.52 ಕಿ.ಮೀ ರೈಲು ಸಂಚರಿಸಲಿದೆ. ಈ ಮಾರ್ಗ 5 ನಿಲ್ದಾಣಗಳನ್ನು ಒಳಗೊಂಡಿದೆ. ನಾಗಸಂದ್ರದಿಂದ ಹೊರಡು ಹಸಿರು ಮಾರ್ಗದ ರೈಲು ಕನಕಪುರ ರಸ್ತೆಯ ಅಂಜನಾಪುರ ತನಕ ಸಂಚಾರ ನಡೆಸಲಿದೆ. ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣಗಳು ಮಾರ್ಗದಲ್ಲಿವೆ.