ಸಿದ್ದರಾಮಯ್ಯ, ರಮೇಶ್ ಕುಮಾರ್ ಷಡ್ಯಂತ್ರಕ್ಕೆ ತಕ್ಕ ತೀರ್ಪು: ಯಡಿಯೂರಪ್ಪ
ಬೆಂಗಳೂರು, ನವೆಂಬರ್ 13: ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ ಜೊತೆ ಸೇರಿ ಮಾಡಿದ್ದ ಷಡ್ಯಂತ್ರಕ್ಕೆ ಸುಪ್ರೀಂಕೋರ್ಟ್ ತಕ್ಕ ತೀರ್ಪು ಕೊಟ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ತಿಳಿಸಿದ್ದಾರೆ.
ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಮಾತನಾಡಿರುವ ಅವರು, ಅನರ್ಹ ಶಾಸಕರ ತೀರ್ಪಿಗೆ ಇಡೀ ದೇಶವೇ ಕಾಯುತ್ತಿತ್ತು. ಸಿದ್ದರಾಮಯ್ಯ, ರಮೇಶ್ ಕುಮಾರ್ ಷಡ್ಯಂತ್ರಕ್ಕೆ ತಕ್ಕ ತೀರ್ಪು ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇವತ್ತು ಕೋರ್ ಕಮಿಟಿ ಸಭೆ ಇದೆ. ಟಿಕೆಟ್ ಯಾರಿಗೆ ನೀಡಬೇಕು ಎಂದು ಚರ್ಚೆ ಮಾಡುತ್ತೇವೆ , ಹಾಗೆಯೇ ರಾಷ್ಟ್ರೀಯ ನಾಯಕರ ಬಗ್ಗೆಯೂ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.
ಇಂದು ಸಂಜೆ ಅನರ್ಹ ಶಾಸಕರು ಬೆಂಗಳೂರಿಗೆ ಬರುತ್ತಾರೆ, ಅವರ ಜೊತೆಗೂ ಕುಳಿತು ಮಾತನಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
17 ಮಂದಿ ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಅನರ್ಹತೆ ಮುಂದುವರೆದಿದ್ದರೂ, ಸ್ಪೀಕರ್ಗೆ ಅನರ್ಹತೆ ಅವಧಿ ನಿಗದಿ ಮಾಡುವ ಅಧಿಕಾರ ಇಲ್ಲ ಎಂದಿರುವ ಕೋರ್ಟ್ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ.