ಕೊರೊನಾ ಯೋಧರಿಗೆ ಲಸಿಕೆ ವಿತರಿಸಿದ ಸಿಎಂ ಯಡಿಯೂರಪ್ಪ!
ಬೆಂಗಳೂರು, ಜ. 16: ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ಗೆ ಕೊನೆಗೂ ಲಸಿಕೆ ಬಂದಿದೆ. ಇಡೀ ದೇಶಾದ್ಯಂತ ಇಂದು ಜನವರಿ 16 ರಂದು ಲಸಿಕೆ ಹಾಕುವ ಅಭಿಯಾನ ಶುರುವಾಗಿದೆ. ದೇಶದ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Recommended Video
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ತಡೆಗಟ್ಟುವ ಲಸಿಕೆಯನ್ನು ಮೊದಲ ಬಾರಿಗೆ 10 ಕೋವಿಡ್ ಯೋಧರಿಗೆ ನೀಡಿದರು.
ಐತಿಹಾಸಿಕ ಕೊರೊನಾ ಲಸಿಕೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಾಲನೆ
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಅವಿರತವಾಗಿ ಶ್ರಮಿಸಿದ ಬೆಂಗಳೂರಿನ ನಾಗರತ್ನ ಕೆ (28 ವರ್ಷ), ಗಂಗಾಧರ್, ಡಾ. ಸುಶಾಂತ್ (35ವರ್ಷ), ಕೀರ್ತಿ (28 ವರ್ಷ), ಮಾಲಾ (30 ವರ್ಷ), ಲೋಕೇಶ್ ಜಿ (28 ವರ್ಷ), ವಿಷ್ಣುಪ್ರಿಯ (24ವರ್ಷ), ವರುಣ್ ಕುಮಾರ್ (26 ವರ್ಷ), ಡಾ. ಸಂದೇಶ್ ಕಂಡವಾಲಾ (32ವರ್ಷ), ಮನೋಜ್ ಬಿ.ಎಸ್ (23 ವರ್ಷ), ಜಯಂತಿ (32 ವರ್ಷ) ಅವರಿಗೆ ಲಸಿಕೆ ನೀಡಲಾಯಿತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ: ಕೆ. ಸುಧಾಕರ್ ಅವರು ಉಪಸ್ಥಿತರಿದ್ದರು. ಲಸಿಕೆ ಪಡೆದವರಿಗೆ ಹೂಗುಚ್ಛ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿನಂದಿಸಿದರು.