ಎಚ್.ಡಿ.ರೇವಣ್ಣಗೆ ಮತ್ತೆ ಶಾಕ್ ನೀಡಿದ ಯಡಿಯೂರಪ್ಪ ಆದೇಶ
ಬೆಂಗಳೂರು, ಸೆಪ್ಟೆಂಬರ್ 16: ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಯಡಿಯೂರಪ್ಪ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ.
ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದ ಕೆಎಂಎಫ್ ಚುನಾವಣೆ ಮುಂದೂಡಿ ನಂತರ ಕೆಎಂಎಫ್ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಸಾಧಿಸುವಂತೆ ಮಾಡಿದ ಯಡಿಯೂರಪ್ಪ ಈಗ ಮತ್ತೊಂದು ದೊಡ್ಡ ಹೊಡೆತವನ್ನೇ ರೇವಣ್ಣಗೆ ನೀಡಿದ್ದಾರೆ.
ಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿ
ಲೋಕೋಪಯೋಗಿ ಸಚಿವರಾಗಿದ್ದಾಗ ರೇವಣ್ಣ ಅನುಮತಿ ನೀಡಿದ್ದ ಭಾರಿ ದೊಡ್ಡ ಟೆಂಡರ್ ಒಂದನ್ನು ಯಡಿಯೂರಪ್ಪ ಸರ್ಕಾರ ರದ್ದು ಮಾಡಿದೆ. ಆ ಮೂಲಕ ರೇವಣ್ಣ ಹಾಗೂ ಮೈತ್ರಿ ಸರ್ಕಾರಕ್ಕೂ ಟಾಂಗ್ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆ ಅಂಗ ಸಂಸ್ಥೆಯಾದ ಕರ್ನಾಟಕ ರಸ್ತೆ ನಿಗಮ ನಿಯಮಿತ (ಕೆಆರ್ಡಿಸಿಎಲ್) ಯ ಆಶ್ರಯದಲ್ಲಿ ನಿರ್ಮಾಣ ಮಾಡಲು ಇಚ್ಛಿಸಿದ್ದ 87.87 ಕಿ.ಮೀ ಉದ್ದ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿಯ ಟೆಂಡರ್ ಅನ್ನು ಯಡಿಯೂರಪ್ಪ ಸರ್ಕಾರ ರದ್ದು ಮಾಡಿದೆ.
ಬೃಹತ್ ಟೆಂಡರ್ ಇದಾಗಿದ್ದು, ಈಗಾಗಲೇ ಮೊದಲ ಹಂತದ ನಿರ್ಮಾಣ ಕಾರ್ಯದ 6855 ಕೋಟಿ ರೂಪಾಯಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನದ ಮೇಲೆ ಟೆಂಡರ್ ಅನ್ನು ರದ್ದು ಮಾಡಿ ಆದೇಶ ಹೊರಿಡಿಸಲಾಗಿದೆ.
ಸಿಎಂ ಕಚೇರಿಯಿಂದ ಹೊರಬಿದ್ದ ಏಕಾಏಕಿ ಆದೇಶ: ಏನಿದರ ಹಿಂದಿನ ಮರ್ಮ!
ಟೆಂಡರ್ನ ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ದೂರುಗಳ ಬಂದ ಹಿನ್ನೆಲೆಯಲ್ಲಿ ಟೆಂಡರ್ ರದ್ದು ಮಾಡಲಾಗಿದೆ. ಕಾಮಗಾರಿಯ ಮೊದಲ ಭಾಗವಾದ 21.54 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾರ್ಯಕ್ಕೆ ಮೈತ್ರಿ ಸರ್ಕಾರದ ಅವಧಿಯಲ್ಲಿಯೇ ಟೆಂಡರ್ ಕರೆಯಲಾಗಿತ್ತು.
ಯಡಿಯೂರಪ್ಪ ಮಂಡ್ಯದವರು, ಆದರೂ ಆ ಗಡಸ್ಸು ಇಲ್ಲ, ಗತ್ತೂ ಇಲ್ಲ
ಟೆಂಡರ್ ರದ್ದು ಮಾಡಿರುವುದಲ್ಲದೆ, ಕ್ರಿಯಾ ಯೋಜನೆ ಮತ್ತು ಕಾಮಗಾರಿಯ ಅಂದಾಜು ಮೊತ್ತದ ವರದಿಯನ್ನು ಮತ್ತೆ ತಯಾರಿಸಲು ಆದೇಶ ನೀಡಲಾಗಿದೆ. ವರದಿ ತಯಾರಿಸಿದ ನಂತರ ಟೆಂಡರ್ ಅನ್ನು ಮತ್ತೆ ಕರೆಯಲಾಗುತ್ತದೆ.