ಗೆಳೆಯನ ನೆನೆದು ಭಾವುಕರಾದ ಸಿಎಂ ಯಡಿಯೂರಪ್ಪ
Recommended Video
ಬೆಂಗಳೂರು, ಸೆಪ್ಟೆಂಬರ್ 23: ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ಕುಮಾರ್ ಅವರ 60ನೇ ಜನ್ಮ ದಿನ ನಿಮಿತ್ತ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಯಡಿಯೂರಪ್ಪ ಗೆಳೆಯನ ನೆನೆದು ಭಾವುಕರಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಮತ್ತು ನಾನು ವೈಯಕ್ತಿಕವಾಗಿ ಇಷ್ಟು ಪ್ರಗತಿ ಸಾಧಿಸಲು ಅನಂತ್ಕುಮಾರ್ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು.
ಅನಂತ್ಕುಮಾರ್ ಅವರೊಂದಿಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡ ಯಡಿಯೂರಪ್ಪ, 'ಜನಸಂಘದ ಕಾಲದಿಂದಲೂ ನಾನು ಮತ್ತು ಅನಂತ್ಕುಮಾರ್ ರಾಜ್ಯದಲ್ಲಿ ಪಕ್ಷ ಕಟ್ಟಲು ಸಂಘಟನೆ ಮಾಡಿದ್ದೆವು' ಎಂದು ಹೇಳಿದರು.
'ಪ್ರತಿದಿನವೂ ಪ್ರವಾಸವನ್ನು ನಾವು ನಿಗದಿ ಮಾಡಿಕೊಳ್ಳುತ್ತಿದ್ದೆವು, ನಮಗೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರುಗಳು ಬೆಂಬಲ ನೀಡುತ್ತಿದ್ದರು, ಆ ದಿನಗಳಲ್ಲಿ ನನ್ನ ನೆಚ್ಚಿನ ಒಡನಾಡಿ ಅನಂತ್ಕುಮಾರ್ ಆಗಿದ್ದರು, ರಾಜ್ಯಕ್ಕೆ ಅವರ ಅವಶ್ಯಕತೆ ಇತ್ತು' ಎಂದು ಅವರು ಹೇಳಿದರು.
ಅನಂತ್ಕುಮಾರ್ ಅವರ ಹಲವು ವೈಶಿಷ್ಟ್ಯತೆಗಳನ್ನು ಹೇಳಿದ ಯಡಿಯೂರಪ್ಪ, 'ಅನಂತ್ಕುಮಾರ್ ಅವರ ನೆನಪಿನ ಶಕ್ತಿ ಅಗಾಧವಾಗಿತ್ತು, ಅವರು ಕೇವಲ ಐದು ನಿಮಿಷಗಳಲ್ಲಿ ನನಗೆ ಭಾಷಣ ತಯಾರು ಮಾಡಿಕೊಟ್ಟುಬಿಡುತ್ತಿದ್ದರು' ಎಂದು ಹೇಳಿದರು.
ಅನಂತ್ಕುಮಾರ್ ಅವರ ಬಹುಕಾಲದ ಗೆಳೆಯ ಸದಾನಂದಗೌಡ ಅವರೂ ಸಹ ಅನಂತ್ಕುಮಾರ್ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ.ನಡ್ಡಾ, ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇನ್ನೂ ಹಲವು ಬಿಜೆಪಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.