ಕುರುಬ ಸಮುದಾಯದ ಕ್ಷಮೆ ಯಾಚಿಸಿದ ಯಡಿಯೂರಪ್ಪ
Recommended Video
ಬೆಂಗಳೂರು, ನವೆಂಬರ್ 20: ಸಚಿವ ಮಾಧುಸ್ವಾಮಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರುಬ ಸಮುದಾಯದ ಕ್ಷಮೆ ಯಾಚಿಸಿದ್ದಾರೆ.
ಹುಳಿಯಾರ್ ಸರ್ಕಲ್ಗೆ ಕನಕದಾಸರ ಹೆಸರಿಡಲು ನಮದೇನು ತಕರಾರಿಲ್ಲ, ಮಾಧುಸ್ವಾಮಿಗೂ ಯಾವುದೇ ತಕರಾರು ಇಲ್ಲ. ಮಾಧುಸ್ವಾಮಿ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸ್ವಾಮೀಜಿಗೆ ಏಕವಚನ ಬಳಕೆ; ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ
ಇನ್ನೊಂದೆಡೆ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಅವರು ನೀವು ಕಾಂಗ್ರೆಸ್ನಲ್ಲಿ ಒಂಟಿಯಾಗಿದ್ದೀರ ಎನ್ನುವುದನ್ನು ಮರೆಯಬೇಡಿ. ಎಲ್ಲರ ಸಹಕಾರ ನಮಗೆ ಇರುವುದರಿಂದ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಕನಕದಾಸರ ಬಗ್ಗೆ ಗೊಂದಲ ಬೇಡ
ಕನಕದಾಸರ ಹೆಸರನ್ನು ಇಡಲು ಮಾಧುಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ, ಕನಕದಾಸರ ಬಗ್ಗೆ ಗೊಂದಲ ಬೇಡ. ಈ ಬಗ್ಗೆ ವಿವಾದ ಸೃಷ್ಟಿ ಮಾಡುವುದು ಬೇಡ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಸ್ವಾಮೀಜಿಯವರ ಮೇಲೆ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಧುಸ್ವಾಮಿಯವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ವಿವಾದ ಉದ್ಭವಿಸಿದೆ.
ಈ ಕುರಿತು ಚರ್ಚೆ ನಡೆಸಲು ಈಚೆಗೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶಾಂತಿಸಭೆ ಆಯೋಜಿಸಲಾಗಿತ್ತು. ಆದರೆ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಅದೇ ಸಭೆಯಲ್ಲಿ ವೃತ್ತಕ್ಕೆ ಕನಕದಾಸರ ಹೆಸರಿಡಬೇಕು ಇಲ್ಲದಿದ್ದರೆ ನಾವು ಹೋರಾಟಮಾಡುತ್ತೇವೆ, ಇಷ್ಟು ದಿನ ಕನಕವೃತ್ತ ಎಂದಿದ್ದ ಸ್ಥಳಕ್ಕೆ ಶಿವಕುಮಾರಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅದಕ್ಕೆ ಮಾಧುಸ್ವಾಮಿ ಸಿಟ್ಟಾಗಿ ನೀವು ಧಮ್ಕಿ ಹಾಕುತ್ತೀರಾ, ನಾನು ಹೋರಾಟಗಾರನೇ , ಕಾನೂನು ಬಿಟ್ಟು ಹೋಗುವುದಿಲ್ಲ, ಕಾನೂನಿಗೆ ಆದ್ಯತೆ ನೀಡುವೆ , ಇದು ನನ್ನ ಹೋರಾಟ ಎಂದು ಹೇಳಿದ್ದರು. ಇದಕ್ಕೆ ಮಾಧುಸ್ವಾಮಿ ಮೇಲೆ ಆಕ್ರೋಶ ಉಂಟಾಗಿತ್ತು.
ಅವರನ್ನು ಅನರ್ಹರೆನ್ನಲು ಇವರ್ಯಾರು?
ನಾವು 15ಕ್ಕೆ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ, ಸುಪ್ರೀಂಕೋರ್ಟೇ ಚುನಾವಣೆಗೆ ನಿಲ್ಲಬಹುದು ಎಂದು ಹೇಳಿದೆ. ಈಗ ಅವರನ್ನು ಅನರ್ಹರೆನ್ನಲು ಇವರು ಯಾರು? ಅನರ್ಹರೋ ಅಥವಾ ಅರ್ಹರೋ ಎನ್ನುವುದನ್ನು ರಾಜ್ಯದ ಜನರು ತೀರ್ಮಾನ ಮಾಡುತ್ತಾರೆ. ಲೋಕಸಭೆಯಲ್ಲಿ ನೀವು ಮಾಡಿದ್ದೇನು ನಿಮ್ಮ ಯೋಗ್ಯತೆಗೆ ಒಂದು ಸೀಟು ಗೆಲ್ಲಲು ಸಾಧ್ವಾಗಲಿಲ್ಲ. ಲೋಕಸಭೆಯಲ್ಲಿ ಅಧಿಕೃತವಾಗಿ ವಿರೋಧಪಕ್ಷದ ಸ್ಥಾನ ಆಗಿಲ್ಲ ಎಂದರು.
ಸುಮಲತಾ ಜೊತೆ ನಾನು ಮಾತನಾಡಿದ್ದೇನೆ
ಮಂಡ್ಯದಲ್ಲಿ ಸಂಸದೆ ಸುಮಲತಾ ಜೊತೆ ನಾನು ಮಾತನಾಡಿದ್ದೇನೆ. ಹಿಂದಿನ ಚುನಾವಣೆ ವೇಳೆ ಅವರಿಗೆ ನಾವು ಸಹಕಾರ ಕೊಟ್ಟಿದ್ದೆವು. ಕೆಆರ್ ಪೇಟೆ ಕಾರ್ಯಕರ್ತರ ಸಭೆಯಲ್ಲಿ ಅವರು ಬಂದು ಕುಳಿತಿದ್ದರು. ಮತ್ತೊಮ್ಮೆ ಅವರ ಜೊತೆ ಮಾತನಾಡುತ್ತೇನೆ. ಅವರ ಸಹಕಾರ ನಮಗೆ ಸಿಗುತ್ತದೆ ಎನ್ನುವ ಭರವಸೆ ನಮಗಿದೆ ಎಂದು ಹೇಳಿದರು.