ಯಡಿಯೂರಪ್ಪ 'ರಾಜಾ ಹುಲಿ' ಅಲ್ಲ 'ರಾಜಾ ಇಲಿ': ಉಗ್ರಪ್ಪ
ಬೆಂಗಳೂರು, ಜನವರಿ 14: ಸಿಎಂ ಯಡಿಯೂರಪ್ಪ ರಾಜಾ ಹುಲಿ ಅಲ್ಲ ರಾಜಾ ಇಲಿ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
'ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಬಿಂಬಿಸಲಾಗುತ್ತದೆ ಆದರೆ ಹುಲಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡುವ ಅವಕಾಶವೇ ಸಿಕ್ಕಿಲ್ಲ. ಬೆಕ್ಕು ಬಂದಾಗ ಇಲಿ ಹೋಗಿ ಬಿಲ ಹುಡುಕುತ್ತದೆಯೋ ಹಾಗೆ ಯಡಿಯೂರಪ್ಪ ಸ್ಥಿತಿಯೂ ಹಾಗಿದೆ' ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಯಡಿಯೂರಪ್ಪ ಅವರಿಗೆ ಅಮಿತ್ ಶಾ ಧಮ್ಕಿ ಹಾಕಿದ್ದಾರಂತೆ. ಹತ್ತಾರು ಬಾರಿ ಪ್ರಯತ್ನ ಮಾಡಿದರೂ ಮೋದಿಯನ್ನು ಭೇಟಿ ಆಗುವ ಅವಕಾಶವನ್ನೇ ಯಡಿಯೂರಪ್ಪ ಅವರಿಗೆ ನೀಡಲಾಗುತ್ತಿಲ್ಲ' ಎಂದು ಹೇಳಿದರು.
ಬಿಜೆಪಿ ಸೇರಿದ್ದ ಅನರ್ಹ ಶಾಸಕರನ್ನು ಫಲಿತಾಂಶ ಬಂದ 24 ಗಂಟೆಯೊಳಗಾಗಿ ಅನರ್ಹರನ್ನು ಸಚಿವರನ್ನಾಗಿ ಮಾಡುವ ಭರವಸೆಯನ್ನು ಯಡಿಯೂರಪ್ಪ ಉಪಚುನಾವಣೆ ಸಮಯ ನೀಡಿದ್ದರು. ಉಪ ಚುನಾವಣೆಯಲ್ಲಿ ಗೆದ್ದ 12 ಮಂದಿ ಶಾಸಕರು ಹೊಸ ಸೂಟು-ಬೂಟು ಹೊಲೆಸಿಕೊಂಡು ಕಾಯುತ್ತಲೇ ಇದ್ದಾರೆ. 24 ಗಂಟೆಯಲ್ಲ 24 ದಿನ ಕಳೆದರೂ ಇನ್ನೂ ಸಚಿವರಾಗಿಲ್ಲ ಎಂದರು.
ಇಕ್ಕಟ್ಟಿನ ರಾಜಕೀಯದಿಂದ ಯಡಿಯೂರಪ್ಪ ಅವರಿಗೆ ಉಸಿರುಗಟ್ಟುವಂತಾಗಿದೆ. ಒತ್ತಡದ ರಾಜಕಾರಣದಿಂದ ಬೇಸತ್ತು ಯಡಿಯೂರಪ್ಪ ಅವರೇ ರಾಜೀನಾಮೆ ನೀಡಿದರೂ ಆಶ್ಚರ್ಯವಿಲ್ಲ ಎಂದು ಅವರು ಭವಿಷ್ಯ ನುಡಿದರು.
ಕೇಂದ್ರದ ನಾಯಕರ ಬಳಿ ಪರಿಹಾರ ಕೇಳುವ ಮತ್ತು ರಾಜಕೀಯ ವಿಷಯ ಕುರಿತು ಚರ್ಚಿಸುವ ಧೈರ್ಯ ಯಡಿಯೂರಪ್ಪ ಅವರಿಗೆ ಇಲ್ಲ. ಯಡಿಯೂರಪ್ಪಗೆ ಬದ್ಧತೆ, ಆತ್ಮಗೌರವ ಕಳೆದು ಹೋಗಿವೆ. 'ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆಗುತ್ತಿಲ್ಲ' ಎಂದು ಜನರ ಬಳಿ ಯಡಿಯೂರಪ್ಪ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
'ಈಗಲೂ ಕಾಲ ಮಿಂಚಿಲ್ಲ. ನಮ್ಮ ಪಕ್ಷ ಬಿಟ್ಟು ನಿಮ್ಮ ಪಕ್ಷ ಸೇರಿ ಉಪ ಚುನಾವಣೆಯಲ್ಲಿ ಗೆದ್ದವರನ್ನು ಮಂತ್ರಿಗಳನ್ನಾಗಿ ಮಾಡಿ, ಇಲ್ಲವೇ ಜನರ ಬಳಿ ಬೇಷರತ್ ಕ್ಷಮೆ ಕೇಳಿ' ಎಂದು ಉಗ್ರಪ್ಪ ಒತ್ತಾಯಿಸಿದರು.