ವಿಧಾನಸೌಧ ಪೊಲೀಸರಿಗೆ ಚಿನ್ನದ ಸರ ವಾಪಾಸ್ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಪ್ತ ಸಹಾಯಕ!
ಬೆಂಗಳೂರು, ಮಾ. 10: ಮಹತ್ವದ ಬೆಳವಣಿಗೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಸಹಾಯಕ ಚಿನ್ನದ ಸರವನ್ನು ವಾಪಾಸ್ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದು ಚಿನ್ನದ ಸರ ವಾಪಾಸ್ ಕೊಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಯ ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸ್ವಭಾವದವರು. ತಮ್ಮ ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳುವ ನೇರ ವ್ಯಕ್ತಿತ್ವದ ರಾಜಕಾರಣಿ. ಇತ್ತೀಚೆಗೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಜೊತೆಗೆ ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೇಲೂ ವಾಗ್ದಾಳಿ ನಡೆಸಿದ್ದರು. ಅದು ಬೇರೆ ವಿಚಾರ.
ಹೀಗಿದ್ದಾಗ ಶಾಸಕರೊಂದಿಗೆ ಇದ್ದುದರಿಂದ ಎರಡು ದಿನ ತಡವಾಗಿ ಚಿನ್ನದ ಸರ ವಾಪಾಸ್ ಕೊಟ್ಟಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಸಹಾಯಕ ಹೇಳಿದ್ದಾರೆ. ಅಷ್ಟಕ್ಕೂ ಅವರು ಚಿನ್ನದ ಸರವನ್ನು ಯಾಕೆ ವಾಪಾಸ್ ಮಾಡಿದ್ದಾರೆ?
'ಚಿನ್ನದ ಸರ'ದೊಂದಿಗೆ ಲಿಖಿತ ಪತ್ರ
ಸುಮಾರು ಒಂದೂವರೆ ಲಕ್ಷ ರೂಪಾಯಿಗಳ ಮೌಲ್ಯದ ಚಿನ್ನದ ಸರವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಸಹಾಯಕ ಸದಾಶಿವ ತೇರದಾಳ್ ಅವರು ವಿಧಾನಸೌಧದ ಪೊಲೀಸರಿಗೆ ಹಿಂದಿರುಗಿದ್ದಾರೆ. ಈ ಬಗ್ಗೆ ಲಿಖಿತ ಪತ್ರವನ್ನೂ ಕೊಟ್ಟಿದ್ದಾರೆ. ನಾನು ಬೇರೆ ಕೆಲಸ ನಿಮಿತ್ತ ಶಾಸಕರ ಬೆಂಗಳೂರಿನಿಂದ ಹೊರಗಡೆ ಇದ್ದೆ. ಆದ್ದರಿಂದ ಇಂದು (ಮಾರ್ಚ್ 8) ಬೆಳಗ್ಗೆ ನಿಮ್ಮ ಪೊಲೀಸ್ ಠಾಣೆಯಲ್ಲಿ ಒಪ್ಪಿಸಿದ್ದೇನೆಂದು ಚಿನ್ನದ ಸರದೊಂದಿಗೆ ವಿಧಾನಸೌಧದ ಪೊಲೀಸರಿಗೆ ಕೊಟ್ಟಿರುವ ಲಿಖಿತ ಪತ್ರದಲ್ಲಿ ಕಾರಣ ಕೊಟ್ಟಿದ್ದಾರೆ.
ಯತ್ನಾಳ್ ಪಿಎಗೆ ಚಿನ್ನದ ಸರ ಕೊಟ್ಟಿದ್ಯಾರು?
ಅಷ್ಟಕ್ಕೂ ಆ ಚಿನ್ನದ ಸರವನ್ನು ಅವರು ಬೇರೆ ಯಾರಿಂದಲೂ ಪಡೆದಿರಲಿಲ್ಲ. ಆ ಸರ ಅವರಿಗೆ ವಿಧಾನಸೌಧದಲ್ಲಿ ಸಿಕ್ಕಿತ್ತು. ಬಜೆಟ್ ಮಂಡನೆ ಮರುದಿನ ಅಂದರೆ ಮಾರ್ಚ್ 5 ರಂದು ಬೆಳಗ್ಗೆ ವಿಧಾನಸೌಧದ ಉತ್ತರ ದ್ವಾರದಿಂದ ಪ್ರವೇಶಿಸುತ್ತಿರುವಾಗ ಆ ಚಿನ್ನದ ಸರ ನನಗೆ ಸಿಕ್ಕಿತ್ತು. ಆದರೆ ಅದಾದ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ನಾನು ವಿಧಾನಸೌಧದಿಂದ ಹೊರಗೆ ತೆರಳಿದ್ದೆ ಎಂದು ಶಾಸಕರ ಪಿಎ ಸದಾಶಿವ ತೇರದಾಳ್ ವಿವರಿಸಿದ್ದಾರೆ.
ನಾನು ಶಾಸಕರ ಆಪ್ತ ಸಹಾಯಕ
ನಾನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ವಿಧಾನಸೌಧದಲ್ಲಿ ಆಕಸ್ಮಿಕವಾಗಿ ಸಿಕ್ಕಿರುವ ಚಿನ್ನದ ಸರವನ್ನು ನಿಮಗೆ ಒಪ್ಪಿಸಿದ್ದೇನೆ. ಅದು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಮಾಡಿ ಒಪ್ಪಿಸಿ ಎಂದು ಸದಾಶಿವ ತೇರದಾಳ್ ಮನವಿ ಮಾಡಿದ್ದಾರೆ.
Recommended Video
ಪ್ರಾಮಾಣಿಕತೆ ಮೆರೆದ ಪಿಎ ಸದಾಶಿವ ತೇರದಾಳ್
ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡರೂ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಾಮಾಣಿಕ ರಾಜಕಾರಣಿ. ಇದೀಗ ದೊಡ್ಡ ಮೌಲ್ಯದ ಚಿನ್ನದ ಸರವನ್ನು ಹಿಂದಿರುಗಿಸಿದ್ದಕ್ಕೆ ಅವರ ಆಪ್ತ ಸಹಾಯಕರ ಕಾರ್ಯವನ್ನು ವಿಧಾನಸೌಧದಲ್ಲಿ ಎಲ್ಲರೂ ಕೊಂಡಾಡಿದ್ದಾರೆ. ಇದೀಗ ಚಿನ್ನದ ಸರ ಕಳೆದುಕೊಂಡವನ್ನು ಪತ್ತೆ ಮಾಡಿ ಅವರಿಗೆ ಕೊಡುವ ಕೆಲಸವನ್ನು ವಿಧಾನಸೌಧದ ಪೊಲೀಸರು ಆರಂಭಿಸಿದ್ದಾರೆ.
ಕಳೆದ ಮಾರ್ಚ್ 5 ರಂದು ವಿಧಾನಸೌಧದಲ್ಲಿ ಚಿನ್ನದ ಸರ ಕಳೆದುಕೊಂಡವರು ಎಂಎಸ್ ಬಿಲ್ಡಿಂಗ್ ಕೆಳ ಮಹಿಡಿಯಲ್ಲಿನ ವಿಧಾನಸೌಧದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.