ನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು
ಬೆಂಗಳೂರು, ಜೂನ್ 13: ಬಾಡಿಗೆ ಮನೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಯಶ್ ಹಾಗೂ ಅವರ ತಾಯಿ ಪುಷ್ಪಾ ವಿರುದ್ಧ ಗಿರಿನಗರ ಠಾಣೆ ಪೊಲೀಸರು ಎಫ್ಐಅರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹೈಕೋರ್ಟ್ ಆದೇಶದಂತೆ ಮನೆ ಖಾಲಿ ಮಾಡುವ ವೇಳೆ ಮನೆಯ ಅನೇಕ ವಸ್ತುಗಳಿಗೆ ಹಾನಿಯುಂಟು ಮಾಡಿದ್ದಾರೆ ಎಂದು ನಟ ಯಶ್ ಹಾಗೂ ತಾಯಿ ಪುಷ್ಪಾ ವಿರುದ್ಧ ಮನೆ ಮಾಲೀಕರಾದ ಡಾ.ವನಜಾ ಹಾಗೂ ಮುನಿಪ್ರಸಾದ್ ಅವರು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಯಶ್ ಹಾಗೂ ಅವರ ತಾಯಿ ವಿರುದ್ಧ ಐಪಿಸಿ ಕಲಂ 427 ಅಡಿಯಂತೆ ಎಫ್ ಐ ಆರ್ ಹಾಕಿದ್ದಾರೆ.
ಹುಟ್ಟೂರಿನಲ್ಲಿ ತೋಟ, ಮನೆ ಖರೀದಿಸಿದ ಯಶ್, ರೈತ ಮಿತ್ರನಾಗುವತ್ತ!
ರಾಕಿಂಗ್ ಸ್ಟಾರ್ ಯಶ್ ಅವರ ಕತ್ರಿಗುಪ್ಪೆ ಬಾಡಿಗೆ ಮನೆ ವಿವಾದ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಮ್ಮೆ ಆರಂಭವಾಗಿದೆ.ಮನೆ ಖಾಲಿ ಮಾಡುವ ಸಂದರ್ಭ ಯಶ್ ಹಾನಿ ಮಾಡಿದ್ದ ಮನೆಯ ವಸ್ತುಗಳನ್ನು ರಿಪೇರಿ ಮಾಡಲು ತಗುಲುವ ವೆಚ್ಚ ಪರಿಗಣಿಸಿ ಮನೆ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ.
ಡಾ. ವನಜಾ ಕೊಟ್ಟಿರುವ ದೂರಿನಲ್ಲಿ ಏನಿದೆ?
2010ರ ಅಗಸ್ಟ್ 11ರಂದು ಬನಶಂಕರಿ 3ನೇ ಹಂತದ ಮನೆಯನ್ನು ಪುಷ್ಪಾಗೆ ಬಾಡಿಗೆಗೆ ನೀಡಿದ್ದೆವು. ಬಾಡಿಗೆ ನೀಡದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. 7 ವರ್ಷ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಮನೆ ಖಾಲಿ ಮಾಡುವಂತೆ ಪುಷ್ಪಾಗೆ ಆದೇಶ ನೀಡಿತ್ತು. ಆದರೆ, ಮನೆ ಖಾಲಿ ಮಾಡುವಾಗ ಎಲೆಕ್ಟ್ರಿಕಲ್ ಬಲ್ಬ್ಗಳು, ಅಲಂಕಾರಿಕ ದೀಪಗಳು, ಫ್ಯಾನ್ಗಳು, ಒಳಗಿನ ಬಾಗಿಲುಗಳು, ಶೆಟರ್, ಪೂಜೆ ಕೊಠಡಿ ಬಾಗಿಲು, ಬಾತ್ರೂಮ್ ಬಾಗಿಲುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿದ್ದಾರೆ. ವಾಷ್ ಬೆಸಿನ್ ಮತ್ತು ಕಮೋಡ್ಗಳನ್ನು ಉದ್ದೇಶಪೂರ್ವಕವಾಗಿ ಒಡೆದು ನಾಶಪಡಿಸಿದ್ದಾರೆ. ಇವೆಲ್ಲದರ ಮೌಲ್ಯ ಅಂದಾಜು 28 ಲಕ್ಷ ರೂ. ಎಂದು ತಿಳಿಸಲಾಗಿದೆ.
ಕಾನೂನು ಹೋರಾಟ ಮುಂದುವರೆಯಲಿದೆ
ಶುಕ್ರವಾರದಂದು ಮನೆ ಕೀ ಸಿಕ್ಕ ಬಳಿಕ ನಮ್ಮ ಕಡೆ ವಕೀಲರ ಜೊತೆ ಮನೆ ನೋಡಲು ಹೋಗಿದ್ದೆವು. ಮನೆಯಲ್ಲಿ ವಾರ್ಡ್ರೋಬ್ ಬಾಗಿಲು ಮುರಿದಿದೆ, ಕಮೋಡ್ ಚೂರಾಗಿದೆ, ಅಡುಗೆ ಮನೆಯನಲ್ಲಿ ಕಿತ್ತು ಹಾಕಲಾಗಿದೆ. ಡಿಸೈನರ್ ಲೈಟಿಂಗ್ಸ್, ಸ್ವಿಚ್ ಬೋರ್ಡ್ ಸೇರಿ ಅನೇಕ ವಸ್ತುಗಳಿಗೆ ಭಾಗಶಃ ಹಾಗೂ ಸಂಪೂರ್ಣ ಹಾಳಾಗಿದೆ.ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಷ್ಟ ಪರಿಹಾರಕ್ಕಾಗಿ ಕೋರಿ ಯಶ್ ತಾಯಿ ಪುಷ್ಪ ಅವರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದೆವು, ತನಿಖೆ ಪ್ರಗತಿ ನೋಡಿಕೊಂಡು ಮುಂದಿನ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಮನೆ ಮಾಲೀಕ ಮುನಿಪ್ರಸಾದ್ ಹೇಳಿದ್ದಾರೆ.
ಯಶ್ ಅದೃಷ್ಟದ ಮನೆ
ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ ಕತ್ರಿಗುಪ್ಪೆಯಲ್ಲಿರುವ ಮನೆ ನಂಬರ್ 757 ರಲ್ಲಿ 2010ರಿಂದ ನಟ ಯಶ್ ಬಾಡಿಗೆಗೆ ವಾಸವಾಗಿದ್ದರು. ಅಂದು ಮಾಡಿಕೊಂಡಿದ್ದ ಬಾಡಿಗೆ ಕರಾರಿನ ಪ್ರಕಾರ 40 ಸಾವಿರ ರೂ.ಗೆ ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಪಡೆದುಕೊಂಡಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ನಂತರ ಬಾಡಿಗೆ ನೀಡಿಲ್ಲ ಎಂದು ಮುನಿಪ್ರಸಾದ್ ಆರೋಪಿಸಿದ್ದರು. ಸಿವಿಎಲ್ ಕೋರ್ಟ್, ಹೈಕೋರ್ಟ್ ತನಕ ಪ್ರಕರಣ ತಲುಪಿ, ಯಶ್ ತಾಯಿ ವಿರುದ್ಧ ತೀರ್ಪು ಬಂದಿತ್ತು.
ಕೋರ್ಟ್ ವಿಚಾರಣೆಯಲ್ಲೂ ಹಿನ್ನಡೆಯಾಗಿತ್ತು
42ನೇ ಸಿಟಿ ಸಿವಿಎಲ್ ನ್ಯಾಯಾಲಯವು ಏಪ್ರಿಲ್ ತಿಂಗಳಿನಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಮನೆ ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ನಟ ಯಶ್ ತಾಯಿಗೆ ನಿರ್ದೇಶಿಸಿತ್ತು. ಹಾಸನದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದರಿಂದ ಕಾಲಾವಕಾಶ ನೀಡಬೇಕು ಎಂದು ಯಶ್ ಅವರ ತಾಯಿ ಮನವಿ ಮಾಡಿದ್ದರು. ಹೀಗಾಗಿ, 23.27 ಲಕ್ಷ ರೂ. ಬಾಡಿಗೆ ಪಾವತಿಸಿ, ಮೇ 31ರ ವರೆಗೆ ಇರಬಹುದಾಗಿತ್ತು. ಮೇ 31ರ ಬದಲು ಜೂನ್ 07 ಮನೆಯನ್ನು ತೊರೆದಿದ್ದರು.