ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ಬಾಡಿಗೆ ಮನೆ ವಿವಾದ
ಬೆಂಗಳೂರು, ಜೂನ್ 09: ರಾಕಿಂಗ್ ಸ್ಟಾರ್ ಯಶ್ ಅವರ ಕತ್ರಿಗುಪ್ಪೆ ಬಾಡಿಗೆ ಮನೆ ವಿವಾದ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಮ್ಮೆ ಆರಂಭವಾಗಿದೆ. ಹೈಕೋರ್ಟ್ ಆದೇಶದಂತೆ ಅದೃಷ್ಟದ ಮನೆಯನ್ನು ಯಶ್ ತೊರೆದಿದ್ದಾರೆ. ಆದರೆ, ಮನೆ ತೊರೆಯುವ ವೇಳೆಯಲ್ಲಿ ಮನೆ,ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಯಶ್ ಅವರ ತಾಯಿ ಪುಷ್ಪ ಹಾಗೂ ಇನ್ನಿತರರ ವಿರುದ್ಧ ಪೊಲೀಸರಿಗೆ ಮನೆ ಮಾಲೀಕರು ದೂರು ನೀಡಿದ್ದಾರೆ.
ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಡಾ ಮುನಿಪ್ರಸಾದ್ ಅವರು ನಷ್ಟ ಪರಿಹಾರ ಕೋರಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹುಟ್ಟೂರಿನಲ್ಲಿ ತೋಟ, ಮನೆ ಖರೀದಿಸಿದ ಯಶ್, ರೈತ ಮಿತ್ರನಾಗುವತ್ತ!
ನಂತರ ಈ ಕುರಿತಂತೆ ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಲಾಗುವುದು ಎಂದು ಮುನಿಪ್ರಸಾದ್ ಪರ ವಕೀಲ ಎಂಟಿ ನಾಣಯ್ಯ ಹೇಳಿದ್ದಾರೆ. ಕೋರ್ಟ್ ಆದೇಶದಂತೆ ಯಶ್, ತಮ್ಮ ಪರ ವಕೀಲರ ಮೂಲಕ ಶುಕ್ರವಾರದಂದು ಬಾಡಿಗೆ ಮನೆಯ ಕೀ ಹಾಗೂ ಎರಡು ತಿಂಗಳು ಬಾಡಿಗೆ ಮೊತ್ತವನ್ನು ಡಿಡಿ ರೂಪದಲ್ಲಿ ನೀಡಿ ಮನೆ ಮಾಲೀಕರ ವಕೀಲರಿಗೆ ತಲುಪಿಸಿದ್ದರು.
ಯಶ್ ಅಲ್ಲದಿದ್ದರೆ, ಸ್ಲಂ ಭರತ್ ಗ್ಯಾಂಗ್ ಸ್ಕೆಚ್ ಹಾಕಿದ್ದು ಯಾರಿಗೆ?
ಮನೆ ಖಾಲಿ ಮಾಡುವ ವೇಳೆ ವಾರ್ಡ್ರೋಬ್, ಬಾಗಿಲು, ಕಮೋಡ್, ಕಿಚನ್ನಲ್ಲಿನಲ್ಲಿ ಅಳವಡಿಸಿದ್ದ ಕೆಲ ವಸ್ತುಗಳು, ಲೈಟಿಂಗ್ಸ್ ಸೇರಿ ಕೆಲ ವಸ್ತುಗಳನ್ನು ಒಡೆದು ಹಾಕಲಾಗಿದೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.
ಮನೆ ಮಾಲೀಕರ ಆರೋಪವೇನು?
ಶುಕ್ರವಾರದಂದು ಮನೆ ಕೀ ಸಿಕ್ಕ ಬಳಿಕ ನಮ್ಮ ಕಡೆ ವಕೀಲರ ಜೊತೆ ಮನೆ ನೋಡಲು ಹೋಗಿದ್ದೆವು. ಮನೆಯಲ್ಲಿ ವಾರ್ಡ್ರೋಬ್ ಬಾಗಿಲು ಮುರಿದಿದೆ, ಕಮೋಡ್ ಚೂರಾಗಿದೆ, ಅಡುಗೆ ಮನೆಯನಲ್ಲಿ ಕಿತ್ತು ಹಾಕಲಾಗಿದೆ. ಡಿಸೈನರ್ ಲೈಟಿಂಗ್ಸ್, ಸ್ವಿಚ್ ಬೋರ್ಡ್ ಸೇರಿ ಅನೇಕ ವಸ್ತುಗಳಿಗೆ ಭಾಗಶಃ ಹಾಗೂ ಸಂಪೂರ್ಣ ಹಾಳಾಗಿದೆ.ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಷ್ಟ ಪರಿಹಾರಕ್ಕಾಗಿ ಕೋರಿ ಯಶ್ ತಾಯಿ ಪುಷ್ಪ ಅವರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದೆವು, ತನಿಖೆ ಪ್ರಗತಿ ನೋಡಿಕೊಂಡು ಮುಂದಿನ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಮನೆ ಮಾಲೀಕ ಮುನಿಪ್ರಸಾದ್ ಹೇಳಿದ್ದಾರೆ.
2 ತಿಂಗಳ ಹಿಂದೆಯೇ ಮನೆ ಖಾಲಿ ಮಾಡಬೇಕಿತ್ತು
42ನೇ ಸಿಟಿ ಸಿವಿಎಲ್ ನ್ಯಾಯಾಲಯವು ಏಪ್ರಿಲ್ ತಿಂಗಳಿನಲ್ಲಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಮನೆ ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ನಟ ಯಶ್ ತಾಯಿಗೆ ನಿರ್ದೇಶಿಸಿತ್ತು. ಹಾಸನದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದರಿಂದ ಕಾಲಾವಕಾಶ ನೀಡಬೇಕು ಎಂದು ಯಶ್ ಅವರ ತಾಯಿ ಮನವಿ ಮಾಡಿದ್ದರು. ಹೀಗಾಗಿ, 23.27 ಲಕ್ಷ ರೂ. ಬಾಡಿಗೆ ಪಾವತಿಸಿ, ಮುಂದಿನ ಮೇ 31ರ ವರೆಗೆ ಇರಬಹುದಾಗಿತ್ತು. ಮೇ 31ರ ಬದಲು ಜೂನ್ 07 ಮನೆಯನ್ನು ತೊರೆದಿದ್ದರು.
ಮತ್ತೆ ಕಾನೂನು ಸಮರಕ್ಕೆ ಅಣಿಯಾಗುತ್ತಿದ್ದಾರೆ.
ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ. ಅಲ್ಲದೇ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದರೂ, ಬೀಗವನ್ನು ಹಾಕಿ ಬಾಡಿಗೆ ಮನೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಬನಶಂಕರಿ ಮೂರನೇ ಹಂತ ಕತ್ರಿಗುಪ್ಪೆಯಲ್ಲಿರುವ ಮನೆಯ ಮಾಲೀಕ ಮುನಿಪ್ರಸಾದ್ ಹಾಗೂ ಡಾ. ವನಜಾ ದಂಪತಿ ಅವರು ಯಶ್ ಕುಟುಂಬದ ವಿರುದ್ಧ ಆರೋಪ ಹೊರೆಸಿ, ಕೋರ್ಟ್ ಮೆಟ್ಟಿಲೇರಿದ್ದರು. ಮೇ 31ಕ್ಕೆ ಈ ವ್ಯಾಜ್ಯ ಇತ್ಯರ್ಥವಾಗುವ ಲಕ್ಷಣ ಕಂಡು ಬಂದಿತ್ತು. ಆದರೆ, ಮನೆ ಸ್ಥಿತಿ ಕಂಡು ಹೌಹಾರಿರುವ ಮಾಲೀಕರು, ಮತ್ತೆ ಕಾನೂನು ಸಮರಕ್ಕೆ ಅಣಿಯಾಗುತ್ತಿದ್ದಾರೆ.
ಅದೃಷ್ಟ ನಂಬಿಕೊಂಡವರ ಪ್ರತಿಷ್ಠೆ ಗಾಳಿಪಟವಾಯಿತು
ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ ಕತ್ರಿಗುಪ್ಪೆಯಲ್ಲಿರುವ ಮನೆ ನಂಬರ್ 757 ರಲ್ಲಿ 2010ರಿಂದ ನಟ ಯಶ್ ಬಾಡಿಗೆಗೆ ವಾಸವಾಗಿದ್ದರು. ಅಂದು ಮಾಡಿಕೊಂಡಿದ್ದ ಬಾಡಿಗೆ ಕರಾರಿನ ಪ್ರಕಾರ 40 ಸಾವಿರ ರೂ.ಗೆ ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಪಡೆದುಕೊಂಡಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ನಂತರ ಬಾಡಿಗೆ ನೀಡಿಲ್ಲ ಎಂದು ಮುನಿಪ್ರಸಾದ್ ಆರೋಪಿಸಿದ್ದರು. ಸಿವಿಎಲ್ ಕೋರ್ಟ್, ಹೈಕೋರ್ಟ್ ತನಕ ಪ್ರಕರಣ ತಲುಪಿ, ಯಶ್ ತಾಯಿ ವಿರುದ್ಧ ತೀರ್ಪು ಬಂದಿತ್ತು.