ರಾಜ್ಯಪ್ರಶಸ್ತಿ ವಿಜೇತ ಪೈಲ್ವಾನ್ ದಾಸಪ್ಪ (94) ಕಣ್ಮರೆ
ಬೆಂಗಳೂರು, ಫೆಬ್ರವರಿ. 24 : ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಕುಸ್ತಿ ಪೈಲ್ವಾನ್ ದಾಸಪ್ಪ ಅವರು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರಿಗೆ 94 ವರ್ಷ ವಯಸ್ಸಾಗಿದ್ದು ಪತ್ನಿ, ಓರ್ವ ಪುತ್ರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾಸಪ್ಪನವರ ಪಾರ್ಥಿವ ಶರೀರವನ್ನು ಶನಿವಾರ ಬೆಳಿಗ್ಗೆ 8ರಿಂದ 11 ಗಂಟೆವರೆಗೆ ರಾಣಾಸಿಂಗ್ ಪೇಟೆ ಗರಡಿ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಬಳಿಕ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ಕೆ.ಆರ್ ಪುರ ಸಮೀಪದ ದೊಡ್ಡಗುಬ್ಬಿಯಲ್ಲಿ ನಡೆಯಲಿದೆ.
ಸುಮಾರು ವರ್ಷಗಳಿಂದ ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದ ದಾಸಪ್ಪನವರ ಸೇವೆಯನ್ನು ಗುರುತಿಸಿ 2016ರಲ್ಲಿ ಪ್ರಕೃತಿ ಸೇವಾ ಪ್ರತಿಷ್ಠಾನದಿಂದ ಸನ್ಮಾನಿಸಲಾಗಿತ್ತು.
ಶಾಸಕರು ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ವಿ ದೇವರಾಜ್, ಶಾಸಕ ಜಮೀರ್ ಅಹಮದ್ ಖಾನ್, ಕಾರ್ಪೊರೇಟರ್ ಮುಮ್ತಾಜ್ ಬೇಗ್, ಮಾಜಿ ಕಾರ್ಪೊರೇಟರುಗಳಾದ ಸಂಪಂಗಿ ರಾಜು, ಎಸ್.ಶಿವಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಕುಸ್ತಿ ಗರಡಿ ಮನೆಗಳಲ್ಲಿ ಅಪಾರ ಸಾಧನೆಗೈದಿರುವ ದಾಸಪ್ಪನವರು ರಾಜ್ಯಾದ್ಯಂತ ಸಾವಿರಾರು ಕುಸ್ತಿ ಪಟುಗಳಿಗೆ ತರಬೇತಿ ನೀಡಿ ಅಪಾರ ಶಿಷ್ಯರನ್ನು ಮತ್ತು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ಬಾಗಲಕೋಟೆಯಲ್ಲಿ ಇವರ ಶಿಷ್ಯರು ಅಪಾರ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ತಮಗೆ ನೀಡಿದ್ದ ನಿವೇಶನವನ್ನು ಮಾರಿ ಬಂದ ಹಣವನ್ನು ಸಾಕು ಮಗನ ಜೀವನಕ್ಕಾಗಿ ಕೊಟ್ಟು ತಾವು ಬಾಡಿಗೆ ಮನೆಯಲ್ಲಿಯೇ ವಾಸಿಸಸುತ್ತಿದ್ದರು.
ತಮ್ಮ ಜೀವಿತಾವಧಿಯಲ್ಲಿ ಕುಸ್ತಿ ಕಲಿಯುವವರಿಗಾಗಿ ಗರಡಿ ಮನೆಯೊಂದನ್ನು ಸ್ಥಾಪಿಸಬೇಕೆಂಬ ಮಹದಾಶಯ ಇವರದಾಗಿತ್ತು.
ಅದಕ್ಕಾಗಿ ನಿವೇಶನ ಕೊಡುವ ಸರ್ಕಾರದ ಭರವಸೆ ಭರವಸೆಯಾಗಿಯೇ ಉಳಿಯಿತು. ಮೊದಲು ಕಂಠೀರವ ಕ್ರೀಡಾಂಗಣದಲ್ಲಿ ಜಾಗ ಕೊಡುವದಾಗಿ ಹೇಳಿದ್ದ ಸರ್ಕಾರ ಈಗ ಜಕ್ಕರಾಯನಕೆರೆಯಲ್ಲಿ ಕೊಡುವುದಾಗಿ ಹೇಳುತ್ತಿದೆ.