ಕರ್ನಾಟಕದಲ್ಲಿ ಮುಂದಿನ 3 ವರ್ಷಗಳಲ್ಲಿ ಮಲೇರಿಯಾ ಮುಕ್ತ
ಬೆಂಗಳೂರು, ಏಪ್ರಿಲ್ 25 : ಇಂದು ವಿಶ್ವ ಮಲೇರಿಯಾ ದಿನ. ಈ ಹಿನ್ನಲೆ, ಕರ್ನಾಟಕವು ಮುಂದಿನ ಮೂರು ವರ್ಷಗಳಲ್ಲಿ ಮಲೇರಿಯಾದಿಂದ ಮುಕ್ತವಾಗಲಿದೆ. ಪ್ರತಿವರ್ಷ ಮಾರಾಣಾಂತಿಕ ಮಲೇರಿಯಾ ಕಾಯಿಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಇನ್ನು ಕೇಲವೇ ವರ್ಷಗಳಲ್ಲಿ ಮಲೇರಿಯಾ ಕಾಯಿಲೆ ಸಂಪೂರ್ಣ ತೊಡೆದು ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ.
ರಾಜ್ಯದಲ್ಲಿ ಕಳೆದ ವರ್ಷ ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷದ ಫೆಬ್ರವರಿಯಲ್ಲಿ 13 ಮಲೆರಿಯಾ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಮಲೇರಿಯಾ ಹರಡುವಿಕೆ ಕಡಿಮೆಯಾಗುತ್ತಿದ್ದು, ಕರ್ನಾಟಕದ ಪ್ರಸ್ತುತ ಪರಿಸ್ಥಿತಿ ಉತ್ತೇಜನಕಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದ ಜಂಟಿ ನಿರ್ದೇಶಕ ಡಾ. ರಮೇಶ. ಕೆ ಕೌಲಗೋಡು ಹೇಳಿದ್ದಾರೆ.
ಬೇಸಿಗೆಯಲ್ಲಿ ಎಚ್ಚರ ತಪ್ಪಿದರೆ ಮಲೇರಿಯಾ ಬರಬಹುದು!
''ರಾಜ್ಯ ಸರ್ಕಾರವು ರೋಗದ ನಿವಾರಣೆ, ಚಿಕಿತ್ಸೆಯನ್ನ ಪೂರ್ಣ ಪ್ರಮಾಣದಲ್ಲಿ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ನಿರ್ಮೂಲನ ಸ್ಥಿತಿಯನ್ನು ಸಾಧಿಸಲು ಸಕಲ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಿಗದಿತ ಗುರಿಯನ್ನು ಸಾಧಿಸಲು ಆರೋಗ್ಯ ಇಲಾಖೆ ಕೂಡ ಶ್ರಮವಹಿಸುತ್ತಿದೆ,'' ಎಂದು ರಮೇಶ್ . ಕೆ ಕೌಲಗೋಡು ಹೇಳಿದ್ದಾರೆ.
"ಮಳೆಗಾಲದಲ್ಲಿ ಮಲೇರಿಯಾ ಪ್ರರಣಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಈ ಮಲೇರಿಯಾ ಪ್ರಕರಣಗಳು ಕಂಡು ಬರುತ್ತದೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡು ಬರುವುದು ಕಡಿಮೆ. ಆದ್ರೆ ಜನರು ಮೈ ಮರೆಯುವಂತಿಲ್ಲ, ಮಲೇರಿಯಾ ಹರಡದಂತೆ ಮುಂಜಾಗೃತೆ ವಹಿಸಬೇಕಾಗುತ್ತದೆ, ಮನೆಗಳ ಬಳಿ ನೀರು ನಿಲ್ಲುವುದು, ಸ್ವಚ್ಚತೆ ಇಲ್ಲದಿರುವ ಕಡೆ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗದಂತೆ ಮುಂಜಾಗೃತೆ ವಹಿಸಬೇಕಾಗುತ್ತದೆ," ಎಂದು ಆಸ್ಟರ್ ಆರ್.ವಿ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಲಹೆಗಾರ ಡಾ. ಎಸ್ ಎನ್ ಅರವಿಂದ್ ತಿಳಿಸಿದ್ದಾರೆ.
"ಹೆಚ್ಚಿನ ಜನರಿಗೆ ಮಲೇರಿಯಾ ರೋಗ ಲಕ್ಷಣಗಳ ಬಗ್ಗೆ ಅರಿವು ಇರುವುದಿಲ್ಲ. ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವ ಸಾಧ್ಯತೆ ಇರುತ್ತದೆ. ಕರಾವಳಿ ಪ್ರದೇಶಗಳಲ್ಲಿ ಮಲೇರಿಯಾ ಸ್ಥಳೀಯ ರೋಗವಾಗಿರುವುದರಿಂದ ಹೆಚ್ಚಿನ ಜನರು ಚಿಕಿತ್ಸೆ ತೆಗದುಕೊಳ್ಳದೇ ಮನೆಯಲ್ಲೇ ಔಷಧಿ ಮಾಡಿಕೊಂಡು ರೋಗದಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ರೋಗದ ಲಕ್ಷಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗಿಯು ತ್ರೀವತರವಾದ ಜ್ವರ, ಶೀತವನ್ನು ಹೊಂದಿದ್ದರೆ, ಹಾಗೂ ಆ ವ್ಯಕ್ತಿ ಕರಾವಳಿ ಪ್ರದೇಶಗಳಿಗೇನಾದರೂ ಪ್ರಯಾಣಿಸಿದ್ದರೆ ಅಗತ್ಯವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮಲೇರಿಯಾ ರೋಗಕ್ಕೆ ಒಳಗಾದ ವ್ಯಕ್ತಿಯ ಲೀವರ್, ರಕ್ತದ ವ್ಯವಸ್ಥೆ, ಹಿಮೋಗ್ಲೋಬಿನ್ ಕೊರತೆ, ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಸೇರಿದಂತೆ ಇನ್ನಿತರ ಬಹು ಅಂಗಾಗಗಳ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ," ಎಂದು ಡಾ. ಮನೋಹರ್ ಹೇಳಿದ್ದಾರೆ.
Recommended Video