ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ: ಕಾರ್ಯಾಗಾರ
ಬೆಂಗಳೂರು, ಜನವರಿ 24: ಕರ್ನಾಟಕ ಮಾಹಿತಿ ಆಯೋಗವು ಇದೇ ಮೊದಲ ಬಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತು ಒಂದು ದಿನ ಕಾರ್ಯಾಗಾರವನ್ನು ಫೆಬ್ರವರಿ 2ರಂದು ಆಯೋಜಿಸಿದೆ.
ಕಾರ್ಯಾಗಾರವು ವಿಧಾನಸೌಧದ ಮೂರನೇ ಮಹಡಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಉದ್ಘಾಟಿಸಲಿದ್ದಾರೆ.
ಆರ್ ಟಿಐ ಎಂದರೇನು? ಹೇಗೆ ಅರ್ಜಿ ಸಲ್ಲಿಸುವುದು?
ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಾಗಾರದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾಯುಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ದೀಕ್ಷಿತ್ ಕೃಷ್ಣ ಶ್ರೀಪಾದ್ ಅವರೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಗೆ ಸಂಬಂಧಿಸಿದ ಕಾಯಿದೆ ಮತ್ತು ನಿಯಮಾವಳಿಗಳು ಮಾತ್ರವಲ್ಲದೆ, ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನಾಯಾಲಯಗಳು ನೀಡಿರುವ ತೀರ್ಪುಗಳನ್ನು ಒಳಗೊಂಡ ಬೆಳಕಿನೆಡೆಗೆ ಕೈಪಿಡಿ ಬಿಡುಗಡೆ ಈ ಕಾರ್ಯಕ್ರಮದ ವಿಶೇಷತೆಗಳಲ್ಲೊಂದಾಗಿದೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ವಿಷಯಕ್ಕೆ ಸಂಬಂಧಿಸಿದ ಆನ್ಲೈನ್ ಪೋರ್ಟಲ್ಗೆ ಚಾಲನೆ ದೊರೆಯಲಿದೆ.
ಭೂಪಾಲ್ನ ನ್ಯಾಷನಲ್ ಲಾ ಇನ್ಸ್ಸ್ಟಿಟ್ಯೂಟ್ ಯೂನಿವರ್ಸಿಟಿಯ ಕುಲಪತಿ ಡಾ ವಿ. ವಿಜಯ ಕುಮಾರ್ ಅವರು ಮಾಹಿತಿ ಹಕ್ಕು ಕಾಯಿದೆ - 2005 ರಂತೆ ಮಾಹಿತಿ ಆಯುಕ್ತರ ವಿವೇಚನಾಧಿಕಾರ ಕುರಿತ ಅಧಿವೇಶನದ ಅಧ್ಯಕ್ಷತೆವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ದೀಕ್ಷಿತ್ ಕೃಷ್ಣ ಶ್ರೀಪಾದ್ಅವರು ಆಶಯ ಭಾಷಣ ಮಾಡಲಿದ್ದಾರೆ.
ಮೂಲಭೂತ ಹಕ್ಕುಗಳನ್ನು ಸಾಕಾರಗೊಳಿಸಲು ಮಾಹಿತಿ ಹಕ್ಕು ಕಾಯಿದೆ ಒಂದು ಸಾಧನ ಹಾಗೂ ಮಾಹಿತಿ ಹಕ್ಕಿನ ಮಹತ್ವ ಕುರಿತ ಎರಡನೇ ಅಧಿವೇಶನದಲ್ಲಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೂ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಾಜಿ ಹಂಗಾಮಿ ಅಧ್ಯಕ್ಷರೂ ಆದ ನ್ಯಾಯುಮೂರ್ತಿ ಶಿವರಾಜ್ ಪಾಟೀಲ್ ಅವರು ಮುಖ್ಯ ಅತಿಥಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಆಯೋಗದ ಮಾಜಿ ಆಯುಕ್ತರೂ ಆದ ಬೆನೆಟ್ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಡಾ ಏ. ಶ್ರೀಧರ್ ಆಚಾರ್ಯುಲು ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.