ಸಿರ್ಸಿ ವೃತ್ತ ಫ್ಲೈಓವರ್, 2ನೇ ಹಂತದ ಕಾಮಗಾರಿ: ವಾಹನ ಸವಾರರು ಹೈರಾಣು
ಬೆಂಗಳೂರು, ಜನವರಿ 10: ಸಿರ್ಸಿ ವೃತ್ತದ ಮೇಲ್ಸೇತುವೆಯ ಎರಡನೇ ಹಂತದ ಕಾಮಗಾರಿ ಆರಂಭವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ರೂ ಟೆಂಡರ್ ನೀಡಿದ್ದ ಬಿಬಿಎಂಪಿ , 2018ರ ಡಿಸೆಂಬರ್ನಲ್ಲಿ ಪುರಭವನದ ಮುಂಭಾಗದಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಒಂದು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಿ ಮಾರ್ಚ್ ವೇಳೆಗೆ ಮುಗಿಸಲಾಗಿತ್ತು.
ಫ್ಲೈಓವರ್ನಲ್ಲಿ ಒಂದು ಮಾರ್ಗ ಬಂದ್
ಟೌನ್ಹಾಲ್ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಒಂದು ಮಾರ್ಗವನ್ನು ಕಳೆದ ಮಾರ್ಚ್ ನಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಮತ್ತೊಂದು ಮಾರ್ಗದ ಡಾಂಬರೀಕರಣ ಕಾಮಗಾರಿಯನ್ನು ಮುಗಿಸಿತ್ತು.
ಜನವರಿ 8ರಿಂದ ಎರಡನೇ ಹಂತದ ಕಾಮಗಾರಿ ಆರಂಭ
ಬುಧವಾರ ರಾತ್ರಿಯಿಂದ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಕೆಆರ್ ಮಾರುಕಟ್ಟೆಗೆ ಇಳಿಯುವ ಡೌನ್ ರಾಂಪ್ ನಿಂದ ಪುರಭವನ ಬಳಿಕ ಎನ್ಆರ್ ರಸ್ತೆಯವರೆಗೆ ಆರಂಭಿಸಲಾಗಿದೆ. ಕಾಮಗಾರಿಯಿಂದ ಚಾಮರಾಜಪೇಟೆ, ಕೆಆರ್ ಮಾರುಕಟ್ಟೆ, ಚಿಕ್ಕಪೇಟೆ ಸೇರಿದಂತೆ ಸಿರ್ಸಿ ಮೇಲ್ಸೇತುವೆಗೆ ಹೊಂದಿಕೊಂಡಿರುವ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ.
ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿ ಕಾಮಗಾರಿ ಇಂದಿನಿಂದ ಆರಂಭ
ಎರಡೂ ಮಾರ್ಗದಲ್ಲಿ ವಾಹನ ದಟ್ಟಣೆ
ಪುರಭವನದ ಕಡೆಯಿಂದ ಹೋಗುವ ಮತ್ತು ಪುರಭವನಕ್ಕೆ ಬರುವ ಎರಡೂ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಕಾಮಗಾರಿ ಮುಗಿಯುವುದಕ್ಕೆ ಇನ್ನೂ 15 ರಿಂದ 20 ದಿನ ಬೇಕಾಗಲಿದೆ. ಅಲ್ಲಿಯವರೆಗೆ ವಾಹನ ಸವಾರರು ಬದಲಿ ಮಾರ್ಗ ಹುಡುಕಿಕೊಳ್ಳುವುದು ಉತ್ತಮವಾಗಿದೆ.
ಹಗಲು-ರಾತ್ರಿ ಎರಡೂ ಅವಧಿಯಲ್ಲೂ ಕಾಮಗಾರಿ
ಹಗಲು ರಾತ್ರಿ ಎರಡೂ ಅವಧಿಯಲ್ಲಿಯೂ ಕಾಮಗಾರಿ ನಡೆಸಲಾಗುತ್ತಿದೆ. ಸಂಚಾರಿ ಪೊಲೀಸರು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ನಿಗದಿತ ಕಾಲಾವಧಿ ಒಳಗೆ ಕಾಮಗಾರಿ ಮುಗಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಎಂಜಿನಿಯರ್ ಸುರೇಶ್ ಮಾಹಿತಿ ನೀಡಿದ್ದಾರೆ .