ಈಜಿಪುರ-ಕೇಂದ್ರೀಯ ಸದನ ಜಂಕ್ಷನ್ ಫ್ಲೈಓವರ್ ನಿರ್ಮಾಣ ಆರಂಭ
ಬೆಂಗಳೂರು, ಡಿಸೆಂಬರ್ 15: ಈಜಿಪುರ ರಸ್ತೆ ಒಳವರ್ತುಲ ಜಂಕ್ಷನ್ ನಿಂದ ಕೇಂದ್ರೀಯ ಸದನ ಜಂಕ್ಷನ್ ವರೆಗೆ 'ಫ್ಲೈ ಓವರ್' ನಿರ್ಮಾಣ ಆರಂಭವಾಗಿದೆ. ಸದ್ಯ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ.
ಈ ಮೇಲ್ಸೇತುವೆ ನಿರ್ಮಾಣಕ್ಕೆ ಜುಲೈ 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಕಾಮಗಾರಿ ಆರಂಭಿಸಲಾಗಿದೆ.
ಈಜಿಪುರ-ಕೇಂದ್ರೀಯ ಸದನ ಜಂಕ್ಷನ್ ಫ್ಲೈಓವರ್ ನಿರ್ಮಾಣಕ್ಕೆ ಚಾಲನೆ
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ 2.4 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ರೂ. 203.20 ಕೋಟಿ ವೆಚ್ಚದಲ್ಲಿ ಮೆ.ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇದರ ನಿರ್ಮಾಣ ಮಾಡಲಿದೆ.
ಮೇಲು ಸೇತುವೆ ಲಾಭಗಳು
ಈ ಮೇಲು ಸೇತುವೆ ನಿರ್ಮಾಣದಿಂದ ಇಲ್ಲಿನ ಮೂರು ವೃತ್ತಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಈಜಿಪುರ ರಸ್ತೆ ಒಳವರ್ತುಲ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಹಾಗೂ ಕೇಂದ್ರೀಯ ಸದನ ಜಂಕ್ಷನ್ ಗಳಲ್ಲಿ ಟ್ರಾಫಿಕ್ ದೊಟ್ಟ ಮಟ್ಟಕ್ಕೆ ತಗ್ಗಲಿದೆ. ಜತೆಗೆ ಇನ್ನೂ ನಾಲ್ಕು ಸಣ್ಣ ಜಂಕ್ಷನ್ ಗಳಲ್ಲೂ ವಾಹನದಟ್ಟಣೆ ಕಡಿಮೆಯಾಗಲಿದೆ.
ಕೋನಪ್ಪನ ಅಗ್ರಹಾರದ ಬಳಿ ಮೇಲ್ಸೇತುವೆಯಲ್ಲಿ ಬಾಯಿಬಿಟ್ಟ ಕಬ್ಬಿಣದ ಕೊಂಡಿ
ಪ್ರಯಾಣದ ಅವಧಿ ಉಳಿತಾಯ
ಇನ್ನು ಫ್ಲೈ ಓವರ್ ನಿರ್ಮಾಣವಾದರೆ ಪ್ರಯಾಣಿಕರು ಹೊಸೂರು ರಸ್ತೆಯಿಂದ ದೊಮ್ಮಲೂರಿಗೆ ನೇರವಾಗಿ ಮೇಲ್ಸೇತುವೆ ಮೂಲಕ ಪ್ರಯಾಣಿಸಬಹುದಾಗಿದೆ. ಇದರಿಂದ ಸುಮಾರು 30 ನಿಮಿಷಗಳಷ್ಟು ಪ್ರಯಾಣದ ಅವಧಿ ಪ್ರಯಾಣಿಕರಿಗೆ ಉಳಿತಾಯವಾಗಲಿದೆ.
ಮಣ್ಣಿನ ಪರೀಕ್ಷೆಗೆ ಚಾಲನೆ
ಮೇಲ್ಸೇತುವೆಗಾಗಿ ಒಟ್ಟು 62 ಕಂಬಗಳನ್ನು ನಿರ್ಮಿಸಲಾಗುತ್ತದೆ. ಇದಕ್ಕಾಗಿ ಕೇಂದ್ರೀಯ ಸದನ ಜಂಕ್ಷನ್ ಹಾಗೂ ಈಜೀಪುರ ಮುಖ್ಯರಸ್ತೆಯಲ್ಲಿ 20 ಮೀಟರ್ ಆಳದವರೆಗೆ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. ತಿಂಗಳಲ್ಲಿ ಈ ಪರೀಕ್ಷೆ ಮುಗಿಯಲಿದ್ದು, ಕಂಬಗಳ ನಿರ್ಮಾಣ ಆರಮಭವಾಗಲಿದೆ.
ರ್ಯಾಂಪ್ಗಳು ಹೀಗಿರಲಿವೆ
ಸೇತುವೆಯಲ್ಲಿ ಒಟ್ಟು 4 ರ್ಯಾಂಪ್ ನಿರ್ಮಿಸಲಾಗುತ್ತದೆ. ಇದರಲ್ಲಿ ಹೊಸೂರು ರಸ್ತೆಯ ಕಡೆಗೆ 192.46 ಮೀ. ಉದ್ದದ ರ್ಯಾಂಪ್, ದೊಮ್ಮಲೂರು ಕಡೆಗೆ 118.62 ಮೀ., ಮಡಿವಾಳದ ಕಡೆಗೆ 169.21 ಮೀ., ಕೇಂದ್ರೀಯ ಸದನದ ಬಳಿ ಹೊಸೂರು ರಸ್ತೆಯಿಂದ ಮೇಲ್ಸೇತುವೆ ಕಡೆಗೆ 164.74 ಮೀಟರ್ ಉದ್ದದ ರ್ಯಾಂಪ್ ನಿರ್ಮಿಸಲಾಗುತ್ತದೆ.
2020ರ ಜನವರಿ 23ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಷರತ್ತನ್ನು ವಿಧಿಸಲಾಗಿದೆ.