ಕೊರೊನಾ ಭೀತಿ: ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ ಲಾ ಬಂದ್
ಬೆಂಗಳೂರು, ಮಾರ್ಚ್ 16: ಕರ್ನಾಟಕದಲ್ಲಿ ಕೊರೊನಾ ಭೀತಿ ಆವರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜು ಬಂದ್ ಮಾಡಿದ ಸರ್ಕಾರ, ನಂತರ ಇಡೀ ರಾಜ್ಯದ ಜನಸಂದಣಿಯನ್ನು ಡಿಸ್ಪರ್ಸ್ ಎಂದು ಕರೆ ನೀಡಿದೆ. ಸಾರ್ವಜನಿಕ ಈಜುಕೊಳ ಬಳಕೆಗೆ ನಿರ್ಬಂಧ ಹೇರಿದ್ದ ಸರ್ಕಾರ ಈಗ ಖಾಸಗಿ ಅಪಾರ್ಟ್ಮೆಂಟ್ ಗೂ ಅದೇಶ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಡೆಸುವ ವಂಡರ್ ಲಾ ಸಂಸ್ಥೆ ತನ್ನ ಪಾರ್ಕ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುತ್ತಿರುವುದಾಗಿ ಸೋಮವಾರ ಪ್ರಕಟಿಸಿದೆ.
"ಕೋವಿಡ್19 ಭೀತಿ ಹೆಚ್ಚಾಗಿರುವುದರಿಂದ, ಮಾರ್ಚ್ 14ರಿಂದ ಮಾರ್ಚ್ 20ರ ತನಕ ಅಮ್ಯೂಸ್ಮೆಂಟ್ ಪಾರ್ಕ್ ಗಳನ್ನು ಬಂದ್ ಮಾಡಲು ವಂಡರ್ ಲಾ ನಿರ್ಧರಿಸಿದೆ. ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಕೋವಿಡ್19 ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಂಡರ್ ಲಾ ಪ್ರಕಟಣೆಯಲ್ಲಿ ಹೇಳಿದೆ.
ಕೋವಿಡ್19ಗೆ ಲಸಿಕೆ: ಯುರೋಪ್ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗ
ಈಜುಕೊಳ ಬಳಕೆ ಕುರಿತಂತೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಟ್ವೀಟ್ ಮಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಸಾರ್ವನಿಕ ಸ್ವಿಮ್ಮಿಂಗ್ ಪೂಲ್ ಗಳನ್ನು ಬಂದ್ ಮಾಡಲಾಗಿದೆ. ತಕ್ಷಣದಿಂದ ಈ ಆದೇಶ ಜಾರಿಗೆ ಬರಲಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ ಕೊರೊನಾವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಪಾರ್ಟ್ಮೆಂಟ್ ಈಜುಕೊಳಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತಿಳಿಸಲಾಗಿದೆ. ರಜೆ ದಿನಗಳಲ್ಲಿ ಮಕ್ಕಳು ಈಜುಕೊಳ ಬಳಸುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 25 ಕಿ.ಮೀ. ದೂರದಲ್ಲಿರುವ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ಆಗಿದ್ದು, ಖಾಸಗಿ ಸಂಸ್ಥೆಯಿಂದ ನಿರ್ಮಿಸಲಾದ ಆಧುನಿಕ ಪ್ರವಾಸಿ ತಾಣವಾಗಿದೆ. ಇಲ್ಲಿ ವಿವಿಧ ಬಗೆಯ ಮನರಂಜನೆಯ ಆಟಿಕೆಗಳನ್ನು ವ್ಯವಸ್ಥೆಗೊಳಿಸಿದ್ದು, ಇಡೀ ದಿನ ಪ್ರವಾಸಿಗರಿಗೆ ಮುದವನ್ನು ನೀಡುತ್ತದೆ. ಈ ಅಮ್ಯೂಸ್ಮೆಂಟ್ ಪಾರ್ಕ್ಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಆಹಾರ, ವಸತಿ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆಯನ್ನು ನೀಡಲಾಗಿದೆ.