ಮತ್ತಿಳಿಸಲು ಪಾದಯಾತ್ರೆಯಲ್ಲಿ ಬಂದ ಮಹಿಳೆಯರಿಗೆ ವಿಧಾನಸೌಧದ ಬಾಗಿಲು ಬಂದ್
ಬೆಂಗಳೂರು, ಜನವರಿ 30: ಸಂಪೂರ್ಣ ಮದ್ಯ ನಿಷೇಧ ಮಾಡಿ ಹೆಣ್ಣು ಮಕ್ಕಳ ಬಾಳು ಹಸನು ಮಾಡಬೇಕೆಂದು ಒತ್ತಾಯಿಸಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದ ಸಹಸ್ರಾರು ಮಹಿಳೆಯರನ್ನು ವಿಧಾನಸೌಧೊಳಕ್ಕೆ ಬಿಟ್ಟುಕೊಳ್ಳಲಿಲ್ಲ ಸರ್ಕಾರ.
ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟಿಸಿದ ಮಹಿಳೆಯರ ಪಾಡು ಚಿತ್ರಗಳಲ್ಲಿ
ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ತಮ್ಮ ಮನವಿ ಸಲ್ಲಿಸಲು ಬಂದಿದ್ದ ಮಹಿಳೆಯರನ್ನು ಪೊಲೀಸ್ ಬಲ ಬಳಸಿ ಫ್ರೀಡಂ ಪಾರ್ಕ್ ಬಳಿಯೇ ತಡೆದ ಸರ್ಕಾರ, ಅಲ್ಲಿಂದಲೇ ಅವರನ್ನು ವಶಕ್ಕೆ ಪಡೆದು ಪ್ರತಿಭಟನೆಯನ್ನು ಇಂದಿನ ಮಟ್ಟಿಗೆ ಹತ್ತಿಕ್ಕಿತು.
ಮದ್ಯ ನಿಷೇಧ: ಮಲ್ಲೇಶ್ವರದಿಂದ ವಿಧಾನಸೌಧದತ್ತ ಹೊರಟ ಪ್ರತಿಭಟನಾ ಮೆರವಣಿಗೆ
ಬಿಸಿಲು, ಚಳಿಗೆ ಮೈಯೊಡ್ಡಿ ಬಂದಿದ್ದ ಸರಿಸುಮಾರು ಮೂರು ಸಾವಿರ ಮಂದಿ ಮಹಿಳೆಯರು ಸರ್ಕಾರಕ್ಕೆ ತಮ್ಮ ದನಿ ಕೇಳಿಸಿಯೇ ತೀರುತ್ತೇವೆಂಬ ಹುರುಪಿನಲ್ಲಿದ್ದರು. ಸತತ 12 ದಿನ ನಡೆದಿದ್ದರೂ ಅವರ ದೇಹಕ್ಕೆ ದಣಿವಿರಲಿಲ್ಲ, ದನಿ ಕಸುವು ಕಳೆದುಕೊಂಡಿರಲಿಲ್ಲ. ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿಯೇ ಕೂಗಿದರು.
ಮನವಿ ತಲುಪಿಸುತ್ತೇವೆ ಎಂದ ಸಚಿವರು
ಸರ್ಕಾರದ ಪ್ರತಿನಿಧಿಯಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರು ತಡವಾಗಿಯಾದರೂ ಬಂದರು. ಆದರೆ, 'ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುತ್ತೇನೆ' ಎಂಬ ಚರ್ವಿತ-ಚವರ್ಣ ಮಾತು ಬಿಟ್ಟರೆ ಮತ್ತೇನೂ ಮಹತ್ತರವಾದ ಭರವಸೆ ನೀಡಲೇ ಇಲ್ಲ.
ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರಿಂದ ವಿಧಾನಸೌಧ ಮುತ್ತಿಗೆ ಇಂದು
'ನಾವು ಮನವಿ ಕೊಡಲು ಬಂದಿಲ್ಲ'
ಸಚಿವರ ಬರುತ್ತಾರೆಂದು ಬಹು ಸಮಯದಿಂದ ಕಾದಿದ್ದ ಮಹಿಳೆಯರು ಸಚಿವರ ಅಮೌಲ್ಯ ಮಾತುಗಳನ್ನು ಕೇಳಿ ಸಂಯಮ ಕಳೆದುಕೊಂಡರು. ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮಹಿಳೆಯೊಬ್ಬರು 'ನಾವು ಮನವಿ ಕೊಡಲು ಅಲ್ಲ ಬಂದಿದ್ದು, ಹಕ್ಕೊತ್ತಾಯ ಮಾಡಲು' ಹೋಗಿ ನಿಮ್ಮ ಸಿಎಂ ಗೆ ಹೇಳಿ ಎಂದು ಸಚಿವರಿಗೆ ತಪರಾಕಿ ಹಾಕಿದರು.
ಹಾಗಿ ಬಂದು ಹೀಗೆ ಹೋದ ಸಚಿವರು
ಮಹಿಳೆಯರ ಸಿಟ್ಟು ಗಮನಿಸಿದ ಸಚಿವರು ಹೆಚ್ಚು ಕಾಲ ನಿಲ್ಲದೆ ಅಲ್ಲಿಂದ ವಾಪಸ್ ತೆರಳಿದರು. ನಂತರದ್ದು ಕಾರ್ಯವನ್ನು ಸರ್ಕಾರದ ಪರವಾಗಿ ಪೊಲೀಸರು ಪೂರ್ಣಗೊಳಿಸಿದರು. ಪ್ರತಿಭಟನೆಯ ಮುಂದಾಳತ್ವದಲ್ಲಿದ್ದ ಎಲ್ಲರನ್ನೂ ಪೊಲೀಸರು ಮೊದಲೇ ತರಿಸಿ ನಿಲ್ಲಿಸಿದ್ದ ಬಸ್ಸುಗಳಿಗೆ ತುಂಬುಸಿಕೊಂಡು ಕರೆದುಕೊಂಡು ಹೋದರು. ಅಲ್ಲಿಗೆ ಪ್ರತಿಭಟನೆಯನ್ನು ಇಂದಿನ ಮಟ್ಟಿಗೆ ಹತ್ತಿಕ್ಕಲಾಯಿತು.
ಹಲವು ಹೋರಾಟಗಾರರು ಭಾಗಿ
ಮಹಿಳೆಯರಿಗೆ ಬೆನ್ನೆಲುಬಾಗಿ ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಕಾಂಗ್ರೆಸ್ ಹಿರಿಯ ನಾಯಕಿ ಪ್ರಮಿಳಾ ನೇಸರ್ಗಿ, ಮೋಟಮ್ಮ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಹೆಗ್ಗೋಡು ಪ್ರಸನ್ನ, ಹೋರಾಟಗಾರ ಅಭಯ್, ಮಂಗಳಾ ಭಟ್ ಇನ್ನೂ ಹಲವರು ಇದ್ದರು.