ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರಿಂದ ವಿಧಾನಸೌಧ ಮುತ್ತಿಗೆ ಇಂದು
ಬೆಂಗಳೂರು, ಜನವರಿ 30: ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿ, ಜನವರಿ ಹತ್ತೊಂಬತ್ತನೇ ತಾರೀಕು ಚಿತ್ರದುರ್ಗದಿಂದ ತೆರಳಿದ್ದ ಮಹಿಳೆಯರು ಮಂಗಳವಾರ ಬೆಂಗಳೂರು ಪ್ರವೇಶ ಮಾಡಿದ್ದಾರೆ. ಪೀಣ್ಯ, ಯಶವಂತಪುರ ಮಾರ್ಗವಾಗಿ ಮಲ್ಲೇಶ್ವರ ಪಿಯು ಬೋರ್ಡ್ ಮೈದಾನದಕ್ಕೆ ಬಂದು, ಅಲ್ಲೇ ಉಳಿದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ಸರಕಾರದ ಬೊಕ್ಕಸ ತುಂಬಲು ಇದೇನಾ ರಾಜಮಾರ್ಗ?
ಪಾದಯಾತ್ರೆಯಲ್ಲಿ ಬಂದಿರುವ ಈ ಮಹಿಳೆಯರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಬೆಳಗ್ಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಈಗಾಗಲೇ ತಿಳಿಸಿದ್ದಾರೆ. ಹತ್ತಿರ ಹತ್ತಿರ ಒಂದು ಕಿ.ಮೀ.ನಷ್ಟು ಉದ್ದಕ್ಕೂ ಇದ್ದ ಮಹಿಳೆಯರು ಎರಡು ಸಾಲಿನಲ್ಲಿ ನಡೆದು ಬಂದಿದ್ದಾರೆ. ಇನ್ನು ಇದೇ ಪಾದಯಾತ್ರೆ ವೇಳೆ ಮಹಿಳೆಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮಂಗಳವಾರ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಈ ಹೋರಾಟಗಾರ್ತಿಯರನ್ನು ಸ್ವಾತಂತ್ರ್ಯ ಉದ್ಯಾನ ಅಥವಾ ಆನಂದ್ ರಾವ್ ಸರ್ಕಲ್ ಹತ್ತಿರವೇ ತಡೆದು ನಿಲ್ಲಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಇದೇ ವೇಳೆ ಪಾದಯಾತ್ರೆಯಲ್ಲಿ ಈ ಮಹಿಳೆಯರು ಸಾಗಿಬರುವ ಹಾದಿಯುದ್ದಕ್ಕೂ ಸಂಚಾರ ದಟ್ಟಣೆ ಏರ್ಪಡುವ ಅವಕಾಶಗಳು ಸಹ ಇವೆ. ಆದ್ದರಿಂದ ಪೊಲೀಸರು ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದಾರೆ.