ಬೆಂಗಳೂರು; ಅಂಬ್ಯುಲೆನ್ಸ್ನಲ್ಲಿ ಹೋದ ಮಹಿಳೆ ಇನ್ನೂ ಸಿಕ್ಕಿಲ್ಲ!
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರಿನ ಬೊಮ್ಮನಹಳ್ಳಿಯಿಂದ ಮಹಿಳೆ ನಾಪತ್ತೆಯಾಗಿ ಎರಡು ವಾರ ಕಳೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಕೆಯನ್ನು ಇನ್ನೂ ಪತ್ತೆ ಹಚ್ಚಲು ಆಗಿಲ್ಲ. ಅಂಬ್ಯುಲೆನ್ಸ್ನಲ್ಲಿ ಮನೆಯಿಂದ ಹೋಗಿದ್ದ ಆಕೆ ದೆಹಲಿಯಲ್ಲಿದ್ದಾಳೆ ಎಂಬ ಮಾಹಿತಿ ಮಾತ್ರ ಸಿಕ್ಕಿದೆ.
ಮಹಿಳೆಯ ಸಂಬಂಧಿಕರು ತನಿಖೆ ಪ್ರಗತಿ ಬಗ್ಗೆ ಪ್ರತಿದಿನ ಪೊಲೀಸರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕುಟುಂಬದವರೇ ದೆಹಲಿಗೆ ತೆರಳಿ ಆಕೆಯನ್ನು ಹುಡುಕಲು ತೀರ್ಮಾನಿಸಿದ್ದಾರೆ. ಆಕೆ ಬೆಂಗಳೂರಿಗೆ ಯಾಕೆ ವಾಪಸ್ ಆಗುತ್ತಿಲ್ಲ ಎಂಬುದು ಪ್ರಶ್ನೆ. ಪ್ರಕರಣದ ಬಗ್ಗೆ ಪೊಲೀಸರ ತನಿಖೆ ಮುಂದುವರೆದಿದೆ.
Fact Check; ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಬಳಿಕ ಮಹಿಳೆ ನಾಪತ್ತೆ
ಸೆಪ್ಟೆಂಬರ್ 4ರಂದು ಮಹಿಳೆಗೆ ಕೋವಿಡ್ ಸೋಂಕು ತಗುಲಿದೆ ಎಂದು ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಪಿಪಿಇ ಕಿಟ್ ಧರಿಸಿದ್ದ ಮೂವರು ಅಂಬ್ಯುಲೆನ್ಸ್ನಲ್ಲಿ ಬಂದು ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ಆದರೆ, ಹತ್ತಿರದ ಯಾವುದೇ ಆಸ್ಪತ್ರೆಗೆ ಆಕೆಯನ್ನು ದಾಖಲು ಮಾಡಿರಲಿಲ್ಲ.
ಬೆಂಗಳೂರಲ್ಲಿ ಅಂಬ್ಯುಲೆನ್ಸ್ ಹತ್ತಿದ ಯುವತಿ ದೆಹಲಿಯಲ್ಲಿ ಪತ್ತೆ!
ಇದರಿಂದಾಗಿ ಬಿಬಿಎಂಪಿ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗಿತ್ತು. ಅಧಿಕಾರಿಗಳು ನಾವು ಕೋವಿಡ್ ಟೆಸ್ಟ್ ಮಾಡಿಲ್ಲ, ಮಹಿಳೆಯನ್ನು ಕರೆದುಕೊಂಡು ಹೋಗಿದ್ದು ನಮ್ಮ ಸಿಬ್ಬಂದಿಯಲ್ಲ ಎಂದು ಹೇಳಿದ್ದರು. ಇದರಿಂದಾಗಿ ಕುಟುಂಬದವರು ಮತ್ತಷ್ಟು ಆತಂಕಗೊಂಡರು.
ಸೆಪ್ಟೆಂಬರ್ 4ರಂದೇ ಮಹಿಳೆ ನಾಪತ್ತೆಯಾದ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಪತಿ ದೂರು ನೀಡಿದ್ದರು. ಎಫ್ಐಆರ್ ಸಹ ದಾಖಲಾಗಿದೆ. ಮನೆಯಿಂದ ಯೋಜನೆ ರೂಪಿಸಿಯೇ ಸ್ನೇಹಿತರ ಸಹಾಯದಿಂದ ಮಹಿಳೆ ನಾಪತ್ತೆಯಾಗಿದ್ದಾಳೆ. ಆದರೆ, ಇದುವರೆಗೂ ಆಕೆಯ ಪತ್ತೆಯಾಗಿಲ್ಲ.
ಸೆಪ್ಟೆಂಬರ್ 8ರಂದು ಪೊಲೀಸರಿಗೆ ಕರೆ ಮಾಡಿದ್ದ ಮಹಿಳೆ ನಾನು ದೆಹಲಿಯಲ್ಲಿದ್ದೇನೆ. ಕುಟುಂಬ ಕಲಹದ ಕಾರಣ ಮನೆ ಬಿಟ್ಟು ಬಂದಿದ್ದೇನೆ. ಶೀಘ್ರದಲ್ಲೇ ಮನೆಗೆ ಬರುತ್ತೇನೆ ಎಂದು ಹೇಳಿದ್ದಳು. ದೆಹಲಿಯ ಗೋವಿಂದಪುರಿ ಪ್ರದೇಶದಿಂದ ಪೊಲೀಸರಿಗೆ ಕರೆ ಬಂದಿತ್ತು. ಆದರೆ, ಕುಟುಂಬದವರ ಜೊತೆ ಇಲ್ಲಿಯ ತನಕ ಆಕೆ ಮಾತನಾಡಿಲ್ಲ, ಮನೆಗೆ ವಾಪಸ್ ಆಗಿಲ್ಲ.
ಪತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ: ಬೊಮ್ಮನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ರವಿಶಂಕರ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅವರ ಬಳಿ ಪೋನ್ನಲ್ಲಿ ಮಾತನಾಡಿದ್ದ ಮಹಿಳೆ ಪತಿಯ ಬಗ್ಗೆ ಆರೋಪ ಮಾಡಿದ್ದಳು. ಅವರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದಳು.
fact-check: ಬಿಬಿಎಂಪಿಗೆ ಸಂಬಂಧವಿಲ್ಲ ಪ್ರಕರಣದ ಕುರಿತು fact check ನಡೆಸಿದ್ದ ಬೆಂಗಳೂರು ಪೊಲೀಸರು ಮಹಿಳೆ ಅಂಬ್ಯುಲೆನ್ಸ್ನಲ್ಲಿ ನಾಪತ್ತೆಯಾಗಿರುವುದಕ್ಕೂ ಬಿಬಿಎಂಪಿಗೂ ಸಂಬಂಧವಿಲ್ಲ. ಆಕೆ ಸ್ನೇಹಿತರ ಸಹಾಯದಿಂದ ಮನೆಯಿಂದ ಹೊರ ಹೋಗಿದ್ದಾಳೆ. ಆಕೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಿದ್ದರು.
ಮನೆಗೆ ಬರುತ್ತೇನೆ ಅಂದಿದ್ದಳು: ಪೊಲೀಸರ ಜೊತೆ ಮಾತನಾಡಿದ್ದ ಮಹಿಳೆ ತಾನು ಶೀಘ್ರದಲ್ಲಿಯೇ ವಾಪಸ್ ಬರುತ್ತೇನೆ. ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಳು. ಆದರೆ, ಇದುವರೆಗೂ ಆಕೆ ವಾಪಸ್ ಬಂದಿಲ್ಲ. ಬೊಮ್ಮನಹಳ್ಳಿ ಪೊಲೀಸರು ದೆಹಲಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಆಕೆ ಪತ್ತೆಯಾದರೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ.
Recommended Video
ಮಹಿಳೆಯ ಕುಟುಂಬದವರು ಬಿಹಾರ ಮೂಲದ ಇಬ್ಬರ ವಿಚಾರಣೆ ನಡೆಸಿ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಧ್ವನಿಯನ್ನು ಅವರು ಗುರುತಿಸಿದ್ದಾರೆ. ಸೆಪ್ಟೆಂಬರ್ 8ರಂದು ಕರೆ ಮಾಡುವಂತೆ ಆಕೆಯ ಮೇಲೆ ಒತ್ತಡ ಹಾಕಲಾಗಿತ್ತೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.