ಮದುವೆ ನೆಪದಲ್ಲಿ ಚಿನ್ನ ಮತ್ತು ಹಣ ಪಡೆದು ಮಹಿಳೆಯಿಂದ ಮಹಾ ದೋಖಾ !
ಬೆಂಗಳೂರು, ಅ. 27: ಮ್ಯಾಟ್ರಿಮೋನಿಯಲ್ಲಿ ಪರಿಚಿತವಾದ ಮಹಿಳೆಯೊಬ್ಬಳು ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ಪಡೆದುಕೊಂಡು ಕೈ ಕೊಟ್ಟಿದ್ದಾಳೆ. ಮದುವೆ ಬಗ್ಗೆ ಕನಸು ಕಾಣುತ್ತಾ ಭಾವಿ ಪತ್ನಿ ಹೆಸರಿನಲ್ಲಿ ಮನೆ ಖರೀದಿಸಲು ಹಣ ಪಾವತಿಸಿದ್ದ ವ್ಯಕ್ತಿ ಇದೀಗ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ರಘುನಾಥ್ ಮೋಸ ಹೋದ ವ್ಯಕ್ತಿ. ಸಿಂಧುನಾಯ್ಡು ಮೋಸ ಮಾಡಿದ ಮಹಿಳೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರಘುನಾಥ್ ಸೂರಿ ಎಂಬಾತನಿಗೆ ಮ್ಯಾಟ್ರಿಮೊನಿ ವೆಬ್ ತಾಣದಲ್ಲಿ ಸಿಂಧು ನಾಯ್ಡು ಎಂಬಾಕೆ ಪರಿಚಯವಾಗಿದ್ದಳು. ನನಗೆ ಡಿವೋರ್ಸ್ ಆಗಿದೆ. ನೀವು ಇಷ್ಟ ಪಟ್ಟರೆ ಮದುವೆಯಾಗುವುದಾಗಿ ಸಿಂಧು ನಾಯ್ಡು ಆಸೆ ಹುಟ್ಟಿಸಿದ್ದಳು. 2017 ರಲ್ಲಿ ಪರಿಚಯವಾಗಿದ್ದ ಸಿಂಧು ನಾಯ್ಡು ಜತೆ ರಘುನಾಥ್ ಸೂರಿ ನಿರಂತರ ಸಂಪರ್ಕದಲ್ಲಿದ್ದರು.
ದೂರುದಾರ ರಘುನಾಥ್ ತನ್ನ ಪತಿ ಎಂದು ಪಾಸ್ಪೋರ್ಟ್ಗೆ ಸಿಂಧು ನಾಯ್ಡು ಅರ್ಜಿ ಸಲ್ಲಿಸಿದ್ದಳು. ಇದನ್ನು ನೋಡಿ ಖುಷಿ ಪಟ್ಟಿದ್ದ ರಘುನಾಥ್ ಸೂರಿ ಆಕೆಯನ್ನು ಶಾಪಿಂಗ್ ಮಾಲ್ಗೆ ಕರೆದುಕೊಂಡು ಹೋಗಿ ಚಿನ್ನದ ಆಭರಣ ಕೊಡಿಸಿದ್ದ. ಮದುವೆಗೂ ಮುನ್ನ ಮನೆ ಖರೀದಿಸೋಣ ಎಂದು ಆಕೆ ಪ್ಲಾನ್ ರೂಪಿಸಿದ್ದಳು. ಆಕೆಯ ಮಾತು ನಂಬಿ ಎರಡು ಲಕ್ಷ ರೂ. ಮುಂಗಡ ಪಾವತಿಸಿ ಮನೆ ಖರೀದಿಯ ಸೇಲ್ ಡೀಡ್ ಮಾಡಿಸಿದ್ದ. ಇದಾದ ಬಳಿಕ ನಾಲ್ಕು ಲಕ್ಷ ರೂ. ಹಣವನ್ನು ಸಿಂಧು ನಾಯ್ಡು ಅವರ ಖಾತೆಗೆ ವರ್ಗಾವಣೆ ಮಾಡಿದ್ದ. ನೋಡಲು ಚೆನ್ನಾಗಿದ್ದ ಸಿಂಧು ನಾಯ್ಡು ಗಾಗಿ ಗಳಿಸಿದ್ದನ್ನು ವೆಚ್ಚ ಮಾಡುತ್ತಿದ್ದ.
ಇದೀಗ ತಾನು ಬೇರೊಬ್ಬರ ಜತೆ ಮದುವೆಯಾಗುತ್ತಿದ್ದೇನೆ ಎಂದು ರಘುನಾಥ್ಗೆ ಹೇಳಿ ಸಿಂಧು ನಾಯ್ಡು ಕೈಕೊಟ್ಟಿದ್ದಾಳೆ. ಹಣ, ಚಿನ್ನಾಭರಣ ಕೊಟ್ಟು ವರ್ಷಗಳಿಂದ ಸುತ್ತಾಡಿದ್ದ ರಘುನಾಥ್ ಸೂರಿ ತನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಸಿಂಧು ನಾಯ್ಡು ವಿರುದ್ಧ ಎಚ್ಎಸ್ಆರ್ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಐಎಎಸ್ ಕೋಚಿಂಗ್ ಹೆಸರಿನಲ್ಲಿ ಮೋಸ:
ಹೊಸ ಬೆಳಕು ಸಂಸ್ಥೆ ವಿರುದ್ಧ ದೂರು ದಾಖಲು: ಹೊಸ ಬೆಳಕು ಐಎಎಸ್ ತರಬೇತಿ ಸಂಸ್ಥೆ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಐಎಎಸ್ ತರಬೇತಿ ನೀಡುವುದಾಗಿ ಮೋಸ ಮಾಡಿದ್ದಾಗಿ ವಿದ್ಯಾರ್ಥಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬಸವೇಶ್ವರನಗರದಲ್ಲಿರುವ ಹೊಸ ಬೆಳಕು ಐಎಎಸ್ ಸಂಸ್ಥೆಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ತಿಳಿದುಕೊಂಡು ದರ್ಶನ್ ಎಂಬಾತ ದಾಖಲಾತಿ ಪಡೆದಿದ್ದ. ಪದವಿ ಜತೆಗೆ ಐಎಎಸ್, ಐಪಿಎಸ್, ಕೆಎಎಸ್, ಪಿಎಸ್ಐ ಆಗಲು ತರಬೇತಿ ನಿಡ್ತೇವೆ ಎಂದು ಪ್ರಚಾರ ಮಾಡಿದ್ದ ಹೊಸ ಬೆಳಕು ಶಿಕ್ಷಣ ಸಂಸ್ಥೆಗೆ ದರ್ಶನ್ ಎಂಬಾತ ಸೇರಿದ್ದ. ಹಾಸ್ಟಲ್ ಮತ್ತು ಶಿಕ್ಷಣಕ್ಕೆ ಅಂತ 1.90 ಲಕ್ಷ ರೂ. ಶುಲ್ಕವನ್ನು ಪಾವತಿಸುವಂತೆ ಸೂಚಿಸಿದ್ದರು. 56 ಸಾವಿರ ರೂ. ಹಣ ಪಾವತಿಸಿ ದರ್ಶನ್ ಹೊಸ ಬೆಳಕು ಸಂಸ್ಥೆಗೆ ದಾಖಲಾಗಿದ್ದ.
ನಾಲ್ಕು ದಿನದ ಹಿಂದೆ ಹೊಸ ಬೆಳಕು ಸಂಸ್ಥೆಗೆ ದಾಖಲಾಗಿದ್ದ ದರ್ಶನ್ ಎಂಬಾತನಿಗೆ ಗುಣಮಟ್ಟದ ಊಟವೂ ನೀಡಿಲ್ಲ. ರಾತ್ರಿ ಎಂಟು ಗಂಟೆ ಬಳಿಕ ವಿದ್ಯುತ್ ದೀಪವೂ ಉರಿಸಬಾರದು ಎಂದು ಸಿಬ್ಬಂದಿ ತಾಕೀತು ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲಿ ಜಾಹೀರಾತು ನೋಡಿ ಬಂದಿದ್ದ ವಿದ್ಯಾರ್ಥಿ ದರ್ಶನ್ ತನ್ನ ಹಣ ವಾಪಸು ನೀಡುವಂತೆ ಕೇಳಿದ್ದಾನೆ. ಟಿ.ಸಿ. ಜತೆಗೆ ಹಣ ವಾಪಸು ನೀಡುವಂತೆ ಕೇಳಿದ್ದಾನೆ. ದರ್ಶನ್ ಮನವಿ ತಿರಸ್ಕರಿಸಿದ್ದು, ಅಸಲಿ ದಾಖಲಾತಿಗಳನ್ನು ನೀಡಬೇಕಾದರೆ ಪೂರ್ಣ ಪ್ರಮಾಣದ ಶುಲ್ಕ ಪಾವತಿ ಮಾಡುವಂತೆ ಶಿಕ್ಷಣ ಸಂಸ್ಥೆ ಸೂಚಿಸಿದೆ. ಇದರಿಂದ ನೊಂದ ವಿದ್ಯಾರ್ಥಿ ದರ್ಶನ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಹೊಸ ಬೆಳಕು ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾನೆ.
Recommended Video
ಹೊಸ ಬೆಳಕು ಸಂಸ್ಥೆಯಲ್ಲಿ ಗುಣಮಟ್ಟ ತರಬೇತಿ ನೀಡುವ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ಜಾಹೀರಾತು ಹಾಕಲಾಗಿತ್ತು. ಅದನ್ನು ನಂಬಿಕೊಂಡು ಮೋಸ ಹೋಗಿದ್ದಾಗಿ ದೂರುದಾರ ದರ್ಶನ್ ಆರೋಪಿಸಿದ್ದಾನೆ. ದರ್ಶನ್ ದೂರು ಹಿನ್ನೆಲೆಯಲ್ಲಿ ಹೊಸಬೆಳಕು ಆಡಳಿತ ಮಂಡಳಿಯವರನ್ನು ಕರೆಸಿ ವಿಚಾರಣೆಗೆ ಒಳಪಡಿಸಲಾಗಿದೆ.