ಕೆಂಪಾಪುರದ ನಂದಿನಿ ಲಾಕ್ ಡೌನ್ ಪ್ಲಾನ್ ನಂಬಿ ಮೋಸ ಹೋದ ಜನರು !
ಬೆಂಗಳೂರು, ಜನವರಿ 04: ಐಟಿ ಕಂಪನಿಗಳಿಗೆ ಕಾಫಿ, ಟೀ, ಊಟ ಪೂರೈಸುವ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬಳು ನೂರಾರು ಜನರಿಂದ ಮುಂಗಡ ಹಣ ಪಡೆದು ಮೋಸ ಮಾಡಿದ್ದಾಳೆ. ತಪ್ಪಿಸಿಕೊಳ್ಳಲ ಯತ್ನಿಸಿದ ವಂಚಕಿ ಮಹಿಳೆಯನ್ನು ಸಾರ್ವಜನಿಕರೇ ಹಿಡಿದು ಅಮೃತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಂಚನೆ ಮಾಡಿದ ಮಹಿಳೆ ಹೆಸರು ನಂದಿನಿ. ಸದ್ಯ ಅಮೃತಹಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ.
ಕರೋನಾ ದಿಂದ ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದರು. ಲಾಕ್ ಡೌನ್ ನಿಂದ ಆದಾಯ ವಿಲ್ಲದೇ ಜನರು ಕಂಗಾಲಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕೆಂಪಾಪುರದ ನಂದಿನಿ ಲಾಕ್ ಡೌನ್ ಪ್ಲಾನ್ ರೂಪಿಸಿದ್ದರು. ಮಾನ್ಯತಾ ಟೆಕ್ ಪಾರ್ಕ್ ಮತ್ತು ಸುತ್ತಮುತ್ತ ಕಂಪನಿಗಳಿಗೆ ಊಟ ಮತ್ತು ಕಾಪಿ ತಿಂಡಿ ಪೂರೈಕೆ ಮಾಡುವ ಕೆಲಸ ಖಾಲಿಯಿದೆ. ಅಲ್ಲಿ ಕೆಲಸ ಮಾಡುವರಿಗೆ ಪ್ರತಿ ದಿನ ಕಾಫಿ, ಊಟ, ತಿಂಡ ಪೂರೈಕೆ ಮಾಡಿದರೆ ಪ್ರತಿ ತಿಂಗಳು ಹಣ ಬರಲಿದೆ ಎಂದು ಕೆಂಪಾಪುರದ ಜನರಿಗೆ ನಂಬಿಸಿದ್ದಳು.
ಕಷ್ಟಕಾಲದಲ್ಲಿ ಹಣ ಬರುತ್ತೆ ಎಂದು ನಂಬಿ ನೂರಾರು ಜನರು ನಂದಿನಿ ಮಾತು ನಂಬಿದ್ದರು. ಅಗತ್ಯ ಇರುವವರಿಗೆ ಖಾಯಂ ಉದ್ಯೋಗ ಕೊಡಿಸುತ್ತೀನಿ. ತಪ್ಪಿದಲ್ಲಿ ವ್ಯಾಪಾರ ಮಾಡುವರಿಗೆ ಐಟಿ ಕಂಪನಿಗಳಿಗೆ ಊಟ ತಿಂಡಿ ಪೂರೈಕೆ ಮಾಡುವ ವ್ಯಾಪಾರ ಕೊಡ್ತೀನಿ ಎಂದು ಭರವಸೆ ಮೂಡಿಸಿದ್ದಳು. ಆದರೆ ಈ ವ್ಯಾಪಾರ ಬೇಕಾದರೆ, ಒಂದು ಲಕ್ಷ ರೂಪಾಯಿ ಮುಂಗಡ ಹಣ ಡೆಪಾಸಿಟ್ ಮಾಡಬೇಕು ಎಂದು ಹೇಳಿದ್ದಳು.
Recommended Video
ಕೆಲ ಕಂಪನಿಗಳಿಗೆ ಕಾಫಿ ಟೀ ಪೂರೈಕೆ ಮಾಡುತ್ತಿದ್ದ ನಂದಿನಿ ಮಾತು ನಂಬಿ ನೂರಾರು ಜನರು ಲಕ್ಷ ಲಕ್ಷ ಡೆಪಾಸಿಟ್ ಕಟ್ಟಿದ್ದಾರೆ. ಬಳಿಕ ನಂದಿನಿಯ ಮಾತಿನಂತೆ ಖಾಸಗಿ ಕಂಪನಿಗಳಿಗೆ ಕಾಫಿ, ಟೀ ತಿಂಡಿ ಪೂರೈಕೆ ಮಾಡಿದ್ದಾರೆ. ಕೆಲ ತಿಂಗಳು ನಂದಿನಿ ಹಣ ಪಾವತಿಸಿದ್ದಾರೆ. ಮಾಹಿತಿ ತಿಳಿದವರು ಮತ್ತೆ ನಂದಿನಿ ಬಳಿ ಹೋಗಿ ನಮಗೂ ಈ ವಹಿವಾಟು ಕೊಡಿಸಿ ಎಂದು ಹಣ ಡೆಪಾಸಿಟ್ ಮಾಡಿದ್ದಾರೆ. ಅಷ್ಟೂ ಹಣ ಸಂಗ್ರಹಿಸಿ ನಂದಿನಿ ಸದ್ಯ ಕೈ ಎತ್ತಿದ್ದಾಳೆ. ಹಣ ಕೇಳಲು ಹೋದರೆ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಕೊರೋನಾ ಹೊಡೆತಕ್ಕೆ ತುತ್ತಾಗಿ ಈಕೆಡೆ ಹಣವೂ ಇಲ್ಲ, ವ್ಯಾಪಾರವೂ ಇಲ್ಲ ಎಂದು ಹಣ ಕಟ್ಟಿದವರು ಬೀದಿಗೆ ಬಿದ್ದಂತಾಗಿದೆ. ನೂರಾರು ಜನರಿಗೆ ಮೋಸ ಮಾಡಿದ ನಂದಿನಿ ವಿರುದ್ಧ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.