ಪತಿ ಮೇಲೆ ಕೋಪ, ಮಗಳ ಕೊಂದು ಮಹಿಳೆ ಆತ್ಮಹತ್ಯೆ
ಹುಳಿಮಾವು ಅಕ್ಷಯ ನಗರದ ನಿವಾಸಿ ಉಷಾ (28) ಎಂಬ ಮಹಿಳೆ ತನ್ನ ಪುತ್ರಿ ಸೋನಿಕಾ (5)ಳನ್ನು ಹತ್ಯೆಗೈದು, ಬಳಿಕ ಆಕೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಉಷಾ ಅವರ ಪತಿ ಶ್ರೀನಾಥ್ ಸ್ಥಳೀಯ ಟ್ರಾವೆಲ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಶ್ರೀನಾಥ್ ಗೆ ಈಗಾಗಲೇ ಮದುವೆಯಾಗಿ ಇಬ್ಬರು ಗಂಡು ಮಕ್ಕಳಿದ್ದರೂ ಈ ವಿಚಾರವನ್ನು ಮುಚ್ಚಿಟ್ಟು ಉಷಾ ಅವರನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದ. ಸುಮಾರು ವರ್ಷಗಳ ಕಾಲ ಮೊದಲ ಮದುವೆ ಬಗ್ಗೆ ಸುಳಿವು ಕೂಡಾ ಸಿಗದಂತೆ ಶ್ರೀನಾಥ್ ನಿಭಾಯಿಸಿದ್ದ. ಆದರೆ, ಇತ್ತೀಚೆಗೆ ಉಷಾಳಿಗೆ ಗಂಡನ ಮೊದಲನೇ ವಿವಾಹದ ವಿಚಾರ ಗೊತ್ತಾಗಿದೆ. ದಂಪತಿಯ ಮಧ್ಯೆ ಈ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಘಟನೆ ನಡೆದ ದಿನ ಸಂಜೆ 6 ಗಂಟೆಯಿಂದ 10:30ರ ನಡುವೆ ಉಷಾ ಮಗಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಗಂಡ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ನಗರಕ್ಕೆ ಬಂದಿರುವ ಉಷಾಳ ತಂದೆ ಕೋಲಾರ ಮೂಲದ ನಾಗಪ್ಪ ಅವರು ತಮ್ಮ ಅಳಿಯ ಶ್ರೀನಾಥ್ ಮೇಲೆ ಹರಿಹಾಯ್ದಿದ್ದು, ಶ್ರೀನಾಥ್ ಮಗಳಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ, ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಇಲ್ಲಿನ ಹುಳಿಮಾವು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀನಾಥ್ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.