ಆ ಒಂದು ಪೋಟೋ ನೋಡಿ ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಕೊಲೆ
ಬೆಂಗಳೂರು, ಜು. 12: ಆ ವಿವಾಹಿತ ಮಹಿಳೆಯ ಕುತ್ತಿಗೆಯಲ್ಲಿ 40 ಗ್ರಾಂ ಚಿನ್ನದ ಸರ ಇರುವ ಫೋಟೋ ನೋಡಿದ್ದ ಕಿರಾತಕರು ಆ ಚಿನ್ನದ ಸರಕ್ಕಾಗಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ್ದರು. ಕಿವಿಯೊಲೆಗಾಗಿ ಕಿವಿಯನ್ನೇ ಕೊಯ್ದಿದ್ದರು. ದಂಡುಪಾಳ್ಯ ಹಂತಕರ ಮಾದರಿಯಲ್ಲಿಯೇ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿದ್ದ ಹಂತಕರಿಬ್ಬರನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಪೋಟೋದಲ್ಲಿ ನೋಡಿದ್ದ ಚಿನ್ನದ ಸರಕ್ಕಾಗಿ ಕೊಲೆ ಮಾಡಿದ ಹಂತಕರ ಕೈಗೆ ಸಿಕ್ಕಿದ್ದು ಕೇವಲ ಆರು ಗ್ರಾಂ. ಚಿನ್ನದ ಸರ ಮಾತ್ರ ಎಂಬ ಸಂಗತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Recommended Video
ಜ್ಞಾನಭಾರತಿ ಪೊಲೀಸ್ ಠಾಣೆಯ ಜ್ಞಾನಜ್ಯೋತಿ ನಗರ ನಿವಾಸಿ ಇಂದಿರಮ್ಮ ಹಾಗೂ ರಾಜಶೇಖರ್ ಬಂಧಿತ ಆರೋಪಿಗಳು. ಇವರಿಂದ ಆರು ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಜ್ಞಾನಜ್ಯೋತಿ ನಗರದಲ್ಲಿ ರಂಚಿತಾ ಹಾಗೂ ಓಂಕಾರ್ ದಂಪತಿ ವಾಸವಾಗಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ವಾಸವಾಗಿದ್ದರು. ಮೇಲಿನ ಮಹಡಿಯಲ್ಲಿ ಇಂದಿರಮ್ಮ ವಾಸವಾಗಿದ್ದಳು. ರಂಜಿತಾ ಪರಿಚಯವಿದ್ದ ಇಂದಿರಮ್ಮ ಪದೇ ಪದೇ ಮಾತನಾಡುತ್ತಿದ್ದರು. ಇಂದಿರಮ್ಮನ ಜತೆ ಸಂಬಂಧ ಹೊಂದಿದ್ದ ಎನ್ನಲಾದ ರಾಜಶೇಖರ್ ಪದೇ ಪದೇ ಮನೆಗೆ ಬಂದು ಹೋಗುತ್ತಿದ್ದ.
ಜು. 10 ರಂದು ಕೊಲೆ: ರಂಜಿತಾ ಕೊರಳಿನಲ್ಲಿ 40 ಗ್ರಾಂ ಚಿನ್ನದ ಸರವನ್ನು ನೋಡಿದ್ದ ಇಂದಿರಮ್ಮ ಏನಾದರೂ ಮಾಡಿ ಅದನ್ನು ಪಡೆಯುವ ಸಂಚು ರೂಪಿಸಿದ್ದಳು. ಚಿನ್ನದ ಸರ ಒಂದು ದಿನ ಹಾಕಿಕೊಂಡು ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಕೇಳಿದ್ದಳು. ಕೊಡಲು ನಿರಾಕರಿಸಿದ್ದ ರಂಜಿತಾಳನ್ನು ಕೊಲೆಯನ್ನಾದರೂ ಮಾಡಿ ಸರ ಎಗರಿಸುವ ಪ್ಲಾನ್ ಹಾಕಿದ್ದಳು ಇಂದಿರಮ್ಮ. ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಇಂದಿರಮ್ಮ ಹಾಗೂ ಆಕೆಯ ಗೆಳೆಯ ರಾಜಶೇಖರ್ ದುಡ್ಡಿಗಾಗಿ ಪರಿತಪಿಸುತ್ತಿದ್ದರು.
ರಂಜಿತಾಳ ಕೊರಳಲ್ಲಿರುವ ಸರದ ಬಗ್ಗೆ ಹೇಳಿದ್ದು, ಅದನ್ನು ಎಗರಿಸುವ ಬಗ್ಗೆ ತನ್ನ ಪ್ಲಾನ್ ಹೇಳಿದ್ದಾರೆ. ಅದರಂತೆ ಜು. 10 ರಂದು ರಂಜಿತಾ ಒಂಟಿಯಗಿದ್ದ ವೇಳೆ ಮನೆಗೆ ನುಗ್ಗಿ ಹತ್ಯೆ ಮಾಡಿದ್ದರು. ಕತ್ತು ಸೀಳಿ ಕೊಲೆ ಮಾಡಿದ್ದ ಆರೊಪಿಗಳು ಕಿವಿಯೋಲೆಗಾಗಿ ಕಿವಿಯನ್ನೇ ಕೊಯ್ದು ದಂಡುಪಾಳ್ಯ ಗ್ಯಾಂಗ್ ಮಾದರಿಯಲ್ಲಿ ಹತ್ಯೆ ಮಾಡಿದ್ದರು. ಇದು ಪೊಲೀಸರನ್ನು ಬೆಚ್ಚಿ ಬೀಳಿಸಿತ್ತು.
ಸಿಕ್ಕಿದ್ದು ಆರು ಗ್ರಾಂ ಮಾತ್ರ: ರಂಜಿತಾಳನ್ನು ಕೊಲೆ ಮಾಡಿದರೆ 40 ಗ್ರಾಂ ಚಿನ್ನದ ಸರ ಕೈಗೆ ಸಿಗುತ್ತದೆ ಎಂದು ಭಾವಿಸಿ ಕೊಲೆ ಮಾಡಿದ್ದಾರೆ. ಆದರೆ ಇಂದಿರಮ್ಮನಿಗೆ ಸಿಕ್ಕಿದ್ದು ಕೇವಲ 6 ಗ್ರಾಂ ಚಿನ್ನದ ಸರ ಹಾಗೂ ಒಂದು ಜತೆ ರೋಲ್ಡ್ ಗೋಲ್ಡ್ ಕಿವಿಯೋಲೆ. ಶ್ರೀಮಂತರಲ್ಲದ ರಂಜಿತಾ ತನಗೆ ಪರಿಚಿತ ಸ್ನೇಹಿತೆಯ 40 ಗ್ರಾಂ ಚಿನ್ನದ ಸರವನ್ನು ಧರಿಸಿದ್ದಳು. ಅದನ್ನು ಪೋಟೋ ತೆಗೆದು ಮನೆಯಲ್ಲಿಟ್ಟುಕೊಂಡಿದ್ದರು. ಈ ಪೋಟೋದಲ್ಲಿ ರಂಜಿತಾ ಕೊರಳಲ್ಲಿದ್ದ ಸರ ನೊಡಿದ್ದ ಇಂದಿರಮ್ಮ ಒಮ್ಮೆ ಕೇಳಿದ್ದಳು. ಕೊಡಲು ರಂಜಿತಾ ನಿರಾಕರಿಸಿದ್ದಳು. ಇದರಿಂದ ಸಮಯಕ್ಕಾಗಿ ಕಾಯುತ್ತಿದ್ದ ಇಂದಿರಮ್ಮ ಕೊನೆಗೂ ಹತ್ಯೆಗೆ ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದಾಳೆ. ಕೊಲೆ ಮಾಡಿ ಪರಾರಿಯಾಗಿದ್ದ ಇಂದಿರಮ್ಮ ಮತ್ತು ಆಕೆಯ ಗೆಳೆಯ ರಾಜಶೇಖರ್ನನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.