ಮತ್ತೆ ನೈಸ್ ರೋಡಿಗಿಳಿದ ದೇವೇಗೌಡರು!
ಬೆಂಗಳೂರು, ಜ.6 : ನೈಸ್ ಯೋಜನೆ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತೊಂದು ಸುತ್ತಿನ ಹೋರಾಟ ನಡೆಸುವ ಸೂಚನೆ ನೀಡಿದ್ದಾರೆ. ನೈಸ್ ಕಂಪನಿ ದೊಡ್ಡ ವಂಚಕ ಸಂಸ್ಥೆಯಾಗಿದ್ದು, ಬಿಎಂಐಸಿ ಯೋಜನೆಯನ್ನು ರದ್ದುಪಡಿಸಿ ಎಂದು ದೇವೇಗೌಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, ನೈಸ್ ಕಂಪೆನಿ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದೆ. ಸರ್ಕಾರದ ಹಣ, ಸರ್ಕಾರ ಮತ್ತು ರೈತರ ಜಮೀನನ್ನು ದುರ್ಬಳಕೆ ಬಳಕೆ ಮಾಡಿಕೊಂಡು ರೈತರನ್ನು ಬೀದಿಗೆ ತಳ್ಳುವಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. [ಅಶೋಕ್ ಖೇಣಿ ವಿರುದ್ಧ ಗುಡುಗಿದ ಗೌಡರು]
ಮೈಸೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನೈಸ್ ಯೋಜನೆ ಅಪೂರ್ಣವಾಗಿದೆ. ಸಂಸ್ಥೆ ಮುಖ್ಯಸ್ಥ ಪ್ರತಿಯೊಂದಕ್ಕೂ ನ್ಯಾಯಾಲಯಕ್ಕೆ ತೆರಳಿ ತಡೆಯಾಜ್ಞೆ ತರುತ್ತಿದ್ದಾರೆ. ಆದ್ದರಿಂದ ಯೋಜನೆ ಪೂರ್ಣಗೊಳ್ಳುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಅಗಸ್ಟ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ರದ್ದು ಮಾಡಿದ ಮಾದರಿಯಲ್ಲಿಯೇ ಕರ್ನಾಟಕ ಸರ್ಕಾರ ನೈಸ್ ಯೋಜನೆಯನ್ನು ರದ್ದು ಮಾಡಿಸಬೇಕು ಎಂದು ಗೌಡರು ಒತ್ತಾಯಿಸಿದರು.
ನೈಸ್ ಸಂಸ್ಥೆ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆಯಬೇಕು, ಅದು ಸಾಧ್ಯವಾಗದಿದ್ದರೆ ಬೇರೆ ಕಂಪನಿಗೆ ಯೋಜನೆಯನ್ನು ಪೂರ್ಣಗೊಳಿಸುವ ಹೊಣೆಯನ್ನು ವಹಿಸಬೇಕು ಎಂದು ದೇವೇಗೌಡರು ಆಗ್ರಹಿಸಿದರು. ಈ ಕುರಿತು ಜ.1ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ ಎಂದು ಗೌಡರು ತಿಳಿಸಿದರು.
ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಬೇರೆ ಕಂಪೆನಿಗೆ ರಸ್ತೆ ಮಾಡಿಕೊಡುವ ಯೋಜನೆ ನೀಡಲು ಮುಂದಾಗಿತ್ತು. ಸರ್ಕಾರ ನೀಡುವ ಜಮೀನು ಸಾಕು. ಹೆಚ್ಚುವರಿ ಜಮೀನು ಬೇಡ, ನಿಯಮದಂತೆ ರಸ್ತೆ ಕಾರ್ಯಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಕಂಪನಿ ಒಪ್ಪಿಗೆ ನೀಡಿತ್ತು. ಆದರೆ, ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿದ್ದ ಬಿಜೆಪಿ ಒಪ್ಪಿಗೆ ನೀಡಲಿಲ್ಲ ಎಂದು ಗೌಡರು ಹೇಳಿದರು.
ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಭೂ ಸ್ವಾಧೀನ ಮಸೂದೆ ಅನ್ವಯ ಸರ್ಕಾರ ನೈಸ್ ಯೋಜನೆಯನ್ನು ರದ್ದು ಪಡಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹಾಗೂ ಬಡವರ ಪರವಾಗಿದ್ದೇನೆ ಎಂದು ಹೇಳುತ್ತಾರೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಯೋಜನೆ ರದ್ದು ಪಡಿಸಲಿ ಎಂದು ಆಗ್ರಹಿಸಿದರು.