ಕರ್ನಾಟಕದಾದ್ಯಂತ ಸಂಚರಿಸಿ ಕೇಜ್ರಿವಾಲ್ ಸಾಧನೆ ಕನ್ನಡಿಗರಿಗೆ ತಿಳಿಸುತ್ತೇನೆ: ಮುಖ್ಯಮಂತ್ರಿ ಚಂದ್ರು
ನವದೆಹಲಿ, ಜೂನ್ 22: ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದು ಮಾಜಿ ಶಾಸಕ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.
ಜೂನ್ 7ರಂದು ಅಧಿಕೃತವಾಗಿ ಮುಖ್ಯಮಂತ್ರಿ ಚಂದ್ರು ಆಪ್ ಸೇರಿದ್ದರು. ಪಕ್ಷ ಸೇರ್ಪಡೆ ನಂತರ ಬುಧವಾರ ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಭೇಟಿ ಮಾಡಿರುವ ಮುಖ್ಯಮಂತ್ರಿ ಚಂದ್ರು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬೆಂಗಳೂರು ಪೆರಿಫೆರಲ್ ರಸ್ತೆ ಟೆಂಡರ್ ರದ್ದು: ಎಎಪಿ ಆರೋಪವೇನು?
ದೆಹಲಿಯ ಮೊಹಲ್ಲಾ ಕ್ಲಿನಿಕ್ ಹಾಗೂ ದೆಹಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ತಮ್ಮ ಅನುಭವವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ಮುಖ್ಯಮಂತ್ರಿ ಚಂದ್ರು, "ಕೇಜ್ರಿವಾಲ್ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಕೇಳಿದ್ದೆ, ಈಗ ನಾನೇ ಕಣ್ಣಾರೆ ನೋಡಿ ವಿಸ್ಮಿತನಾಗಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಸಂಚರಿಸಿ, ದೆಹಲಿಯ ಅಭಿವೃದ್ಧಿ ಕಾರ್ಯದ ಬಗ್ಗೆ ಕನ್ನಡಿಗರಿಗೆ ತಿಳಿಸುತ್ತೇನೆ, ಕರ್ನಾಟಕದ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷ ಅನಿವಾರ್ಯ," ಎಂದು ಅಭಿಪ್ರಾಯ ಪಟ್ಟರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, "ಮುಖ್ಯಮಂತ್ರಿ ಚಂದ್ರು ನಾಡು, ನುಡಿ, ಜಲಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವುಗಳ ರಕ್ಷಣೆಯು ನಮ್ಮ ಪಕ್ಷದ ಮೂಲ ಸಿದ್ಧಾಂತ ಕೂಡ ಆಗಿದೆ. ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳನ್ನು ಪ್ರೋತ್ಸಾಹಿಸುವ ಮೂಲಕ ಪ್ರಾದೇಶಿಕತೆಗೆ ಒತ್ತು ನೀಡಿ ರಾಷ್ಟ್ರದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುವುದೇ ಆಮ್ ಆದ್ಮಿ ಪಕ್ಷದ ಗುರಿ" ಎಂದರು.
ಬೆಂಗಳೂರ ಎಎಪಿಯ ಹೊಸ ರಾಜ್ಯ ಕಚೇರಿ ಆರಂಭ
ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದರು
ರಾಮಕೃಷ್ಣ ಹೆಗಡೆ ಆಹ್ವಾನದ ಮೇರೆಗೆ ಜನತಾ ಪಕ್ಷ ಸೇರಿ ಕೆಲಸ ಮಾಡುತ್ತ ರಾಜ್ಯ ರಾಜಕರಣದಲ್ಲಿ ತಮ್ಮದೆ ಚಾಪು ಮೂಡಿಸಿದ ಚಂದ್ರು ಅವರು ಹೆಗಡೆ ಅವರ ನಂತರ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ಸಿದ್ಧಾಂತ ಮೆಚ್ಚಿ ಬಿಜೆಪಿ ಸೇರಿದರು, ನಂತರ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಸೇರಿದ್ದರು.
"ರಾಜಕರಣದಿಂದ ದೂರ ಉಳಿಯವ ಯೋಜನೆಯಲ್ಲಿ ಇದ್ದಾಗ , ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಸಿದ್ದಾಂತ ಮೆಚ್ಚಿ ಪಕ್ಷ ಸೇರಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿರುವುದರಲ್ಲಿ ಮುಖ್ಯಮಂತ್ರಿ ಚಂದ್ರು ಪಾತ್ರ ಮಹತ್ವದ್ದಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಹಲವು ಸರ್ಕಾರಿ ತಾಣಗಳಲ್ಲಿ ಕನ್ನಡದಲ್ಲಿಯೂ ಸೂಚನಾ ಫಲಕ ಇರುವುದರ ಹಿಂದೆ ಮುಖ್ಯಮಂತ್ರಿ ಚಂದ್ರು ಶ್ರಮವಿದೆ" ಎಂದು ಪೃಥ್ವಿ ರೆಡ್ಡಿ ಹೇಳಿದರು.
ಎಲ್ಲಾ ಚುನಾವಣೆಗಳಲ್ಲೂ ಆಪ್ ಸ್ಪರ್ಧೆ
"ಮುಂಬರುವ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ ಮಾಡಲಿದೆ. ಎಲ್ಲಾ 224 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವುದೇ ಪಕ್ಷದ ಗುರಿ. ಪ್ರಾಮಾಣಿಕ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಎಎಪಿ ಸೇರಬೇಕು" ಎಂದು ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ.
"ಆಮ್ ಆದ್ಮಿ ಪಕ್ಷ ದೇಶದ ರಾಜಕೀಯವನ್ನು ಸರಿದಾರಿಗೆ ತರುತ್ತಿದೆ. ಬೇರೆಲ್ಲ ಪಕ್ಷಗಳು ಶಿಕ್ಷಣ - ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಿದರೆ, ಆಪ್ ಸರ್ಕಾರವು ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಮೂಲಕ ಸಮಾಜದ ಭವಿಷ್ಯವನ್ನು ಬಲಪಡಿಸುತ್ತಿದೆ. ಕರ್ನಾಟಕದಲ್ಲಿ ಎಎಪಿ ಅಧಿಕಾರಕ್ಕೆ ಬಂದು ಇಲ್ಲಿ ಕೂಡ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು" ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.
Recommended Video