ಹೊನ್ನಾಳಿ ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಕೇಸರೀಕರಣ ಮಾಡುತ್ತೇವೆ: ರೇಣುಕಾಚಾರ್ಯ
Recommended Video
ಬೆಂಗಳೂರು, ಜನವರಿ 22: 'ಇದುವರೆಗಿನ ಎಲ್ಲ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವವರೆಲ್ಲ ಮುಸ್ಲಿಮರೇ. ಆದರೆ ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ. ನಾವೂ ಮುಸ್ಲಿಮರನ್ನು ಗೌರವಿಸುತ್ತೇವೆ' ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, 'ಮದರಸಾಗಳಲ್ಲಿ ಭಯೋತ್ಪಾದನೆ ಬೋಧಿಸಲಾಗುತ್ತಿದೆ. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕೆಲವು ಮಸೀದಿಗಳಲ್ಲಿ ಫತ್ವಾ ಹೊರಡಿಸಲಾಗಿದೆ. ಈ ದೇಶದಲ್ಲಿ ಹುಟ್ಟಿದವರೇ ಆಗಿದ್ದರೆ ಮುಸ್ಲಿಮರು ಪೌರತ್ವ ಕಾಯ್ದೆ ವಿರೋಧಿಸುತ್ತಿರಲಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಕುಂಕುಮ ಪ್ರಸಾದ ವಿತರಣೆ ಮಾಡಿದರೆ ಕೆಲವು ಮಸೀದಿಗಳಲ್ಲಿ ಭಯೋತ್ಪಾದನೆ ಹುಟ್ಟುಹಾಕುತ್ತಿದ್ದಾರೆ. ಮದ್ದುಗುಂಡುಗಳ ಸಂಗ್ರಹ ಮಾಡುತ್ತಿದ್ದಾರೆ. ನಮಗೂ ತಾಳ್ಮೆ ಇದೆ. ತಾಳ್ಮೆ ಕೆಣಕಬೇಡಿ' ಎಂದು ಹೇಳಿದರು.
ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ
ಮುಸ್ಲಿಂ ಕೇರಿಗಳ ಅಭಿವೃದ್ಧಿಗೆ ಬಂದಿರುವ ಹಣವನ್ನು ಹಿಂದುಗಳ ಕೇರಿ ಅಭಿವೃದ್ಧಿಗೆ ಬಳಸುವ ಮೂಲಕ ಅವರನ್ನು(ಮುಸ್ಲಿಮರು) ಎಲ್ಲಿ ಇಡಬೇಕೋ ಅಲ್ಲಿ ಇಡ್ತೇವೆ' ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಪೌರತ್ವ ಕಾಯ್ದೆ ಪರವಾಗಿ ನಡೆದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಹೇಳಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತಯ.
ಕರ್ನಾಟಕ ಕೇಸರೀಕರಣ
ಹೊನ್ನಾಳಿ ಮಾತ್ರವಲ್ಲ. ಇಡೀ ಕರ್ನಾಟಕವನ್ನೇ ಕೇಸರೀಕರಣ ಮಾಡುತ್ತೇವೆ. ಹಿಂದುತ್ವದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುತ್ತೇವೆ. ಕೇಸರೀಕರಣ ಎಂದರೆ ಕೇಸರಿಶಾಲು ಹಾಕುವುದಲ್ಲ. ನಾವು ಕ್ರಾಂತಿ ಮಾಡಲ್ಲ, ಶಾಂತಿ ಹರಡುತ್ತೇವೆ ಎಂದರು.
ಜಮೀರ್ ಅಹಮದ್ ವಿರುದ್ಧ ಬಾಂಬ್
2005ರಲ್ಲಿ ಶಾಸಕ ಜಮೀರ್ ಅಹಮದ್ ಅವರ ಮಾಲೀಕತ್ವದ ನ್ಯಾಷನಲ್ ಟ್ರಾವಲ್ಸ್ನಲ್ಲಿ ಬಂದೂಕುಗಳು ಸಿಕ್ಕಿಬಿದ್ದಿದ್ದವು. ಆಗ ಜಮೀರ್ ದುಬೈಗೆ ಹೋಗಿ ಬಂದಿದ್ದರು. ಇದು ಜಮೀರ್ ಅಹಮದ್ ಅವರ ದೇಶದ್ರೋಹ ಕೃತ್ಯವಲ್ಲವೇ? ಎಂದು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ಗೂಂಡಾಗಿರಿ
ಕಾಂಗ್ರೆಸ್ನವರಿಗೆ ಕೆಲಸವಿಲ್ಲ, ಅಧಿಕಾರವಿಲ್ಲ. ನೀರಿನಿಂದ ಹೊರಬಿದ್ದ ಮೀನಿನಂತೆ ಇದ್ದಾರೆ. ದೌರ್ಜನ್ಯ ಮಾಡುವವರು, ಗೂಂಡಾಗಿರಿ ಮಾಡುವವರು ಯುವ ಕಾಂಗ್ರೆಸ್ನವರು. ನೆರೆ ಪರಿಹಾರ ಕಾರ್ಯದಲ್ಲಿ ಅವರು ತೊಡಗಿಸಿಕೊಳ್ಳಲಿಲ್ಲ. ಸಮಯ ಬಂದಾಗ ಫ್ಲೆಕ್ಸ್ ಹಿಡಿಯುತ್ತಾರೆ. ಅದೇ ನಮ್ಮ ಸಂಘಟನೆಯಲ್ಲಿರುವವರದ್ದು ಸೇವಾ ಸಂಸ್ಕೃತಿ. ಯುವ ಕಾಂಗ್ರೆಸ್ನವರು ನಮ್ಮ ಮೇಲೆ ಎಷ್ಟು ಬೇಕಾದರೂ ದೂರು ಕೊಡಲಿ ಎಂದು ಹೇಳಿದರು.
ಹೊನ್ನಾಳಿಯನ್ನು ಕೇಸರಿಮಯ ಮಾಡ್ತೀನಿ
'ಕೆಲ ಮಸೀದಿಗಳಲ್ಲಿ ಸಶಸ್ತ್ರಗಳನ್ನು ಸಂಗ್ರಹ ಮಾಡುತ್ತಿದ್ದು, ಇದಕ್ಕೆ ಮಸೀದಿಗಳು ಬೇಕಾ? ಮಸೀದಿಗಳು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿವೆ, ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ? ಹೊನ್ನಾಳಿ, ನ್ಯಾಮತಿ ತಾಲೂಕನ್ನು ಸಂಪೂರ್ಣ ಕೇಸರಿಮಯ ಮಾಡ್ತೀನಿ' ಎಂದು ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಹೇಳಿದ್ದರು.