ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಹಾರಲಿದೆ ತ್ರಿವರ್ಣ ಧ್ವಜ
ಬೆಂಗಳೂರು, ಆ. 08: ಬೆಂಗಳೂರು ನಗರದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಮತ್ತೆ ಭುಗಿಲೆದ್ದಿದೆ. ಗಣೇಶ ಉತ್ಸವ ಆಚರಣೆಗೆ ಈದ್ಗಾ ಮೈದಾನದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.
ಈ ವಿವಾದ ಏಳುತ್ತಿದ್ದಂತೆ ಈದ್ಗಾ ಮೈದಾನದಲ್ಲಿ ಆಗಸ್ಟ್ 15 ರಂದು ಇದೇ ಮೊದಲ ಬಾರಿಗೆ ಸ್ವಾತಂತ್ರ ದಿನಾಚರಣೆ ವೇಳೆ ಧ್ವಜಾ ರೋಹಣ ಮಾಡಲು ಶಾಸಕ ಜಮೀರ್ ಅಹಮದ್ ಖಾನ್ ತೀರ್ಮಾನಿಸಿದ್ದಾರೆ. ವಿವಾದಿತ ಮೈದಾನ ಸ್ವಾತಂತ್ರ್ಯೋತ್ಸವಕ್ಕೆ ಇದೇ ಮೊದಲ ಬಾರಿಗೆ ಸಾಕ್ಷಿಯಾಗಲಿದೆ.
ಚಾಮರಾಜಪೇಟೆ ಬಂದ್: ಈದ್ಗಾ ಮೈದಾನ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್
ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ ಅಂಗವಾಗಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಭಾರತದ ತ್ರಿರಂಗ ಧ್ವಜಾರೋಹಣ ಮಡುವ ಸಲುವಾಗಿ ಮೈದಾನಕ್ಕೆ ತೆರಳಿ ಪೂರ್ವ ಸಿದ್ಧತೆಗಳನ್ನು ಶಾಸಕರು ವೀಕ್ಷಿಸಿದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಜಮೀರ್ ಉತ್ತರ ನೀಡಿದರು.
"ಚಾಮರಾಜಪೇಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಈದ್ಗಾ ಆಟದ ಮೈದಾನದಲ್ಲಿ ಆ. 15ರಂದು ಧ್ವಜಾರೋಹಣ ಮಾಡಿ, ಅತ್ಯಂತ ಸಡಗರದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ" ಎಂದು ಜಮೀರ್ ಅಹಮದ್ ಖಾನ್ ತಿಳಿಸಿದರು. ಕೇವಲ ಒಂದು ಸಮುದಾಯದ ಹಬ್ಬಗಳ ಆಚರಣೆಗೆ ಸೀಮಿತವಾಗಿದ್ದ ಈದ್ಗಾ ಮೈದಾನ ಸ್ವಾತಂತ್ರ ದಿನಾಚರಣೆಗೆ ಸಾಕ್ಷಿಯಾಗಲಿರುವ ವಿಷಯ ಪ್ರಕಟಿಸಿದರು.
ಗೊಂದಲ ಸೃಷ್ಟಿಸಬೇಡಿ
"ಮಾಧ್ಯಮದವರು ದಯವಿಟ್ಟು ಗೊಂದಲ ಸೃಷ್ಟಿಸಬೇಡಿ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂದು ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಇನ್ನು ಮುಂದೆ ಪ್ರತಿ ವರ್ಷ ಧ್ವಜಾರೋಹಣ ಮಾಡುತ್ತೇವೆ. ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಬಿ. ವಿ. ಗಣೇಶ್, ಬಿಬಿಎಂಪಿ ಹಾಲಿ ಸದಸ್ಯರಾದ ಕೋಕಿಲ ಚಂದ್ರಶೇಖರ್ ಹಾಗೂ ಮತ್ತಿತರ ದೇವಸ್ಥಾನಗಳ ಸದಸ್ಯರು ಮುಖಂಡರ ಜೊತೆ ಚರ್ಚಿಸಿ, ಈ ಬಾರಿ 15ರಂದು ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಸ್ಥಳ ನಿಗದಿ ಪಡಿಸುತ್ತೇವೆ" ಎಂದು ಜಮೀರ್ ಅಹಮದ್ ಖಾನ್ ಹೇಳಿದರು.
ನಮ್ಮ ವ್ಯಾಪ್ತಿಗೆ ಬರುವುದಿಲ್ಲ
ಬಿಬಿಎಂಪಿ ಚಾಮರಾಜಪೇಟೆಯ ಈದ್ಗಾ ಮೈದಾನ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿದೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, "1999ಕ್ಕಿಂತ ಮೊದಲು ವಕ್ಫ್ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎರಡೂ ಕಂದಾಯ ಇಲಾಖೆ ಅಧೀನದಲ್ಲೇ ಇದ್ದವು. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ವಕ್ಫ್ ಮಂಡಳಿಯನ್ನು ಪ್ರತ್ಯೇಕಿಸಿದರು. ಮೈದಾನದ ವಿಚಾರವನ್ನು ವಕ್ಫ್ ಮಂಡಳಿಯವರು ನೋಡಿಕೊಳ್ಳುತ್ತಾರೆ. ಸದ್ಯ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ತಯಾರಿಯಲ್ಲಿದ್ದೇವೆ" ಎಂದು ಜಮೀರ್ ತಿಳಿಸಿದರು.
ಗಣೇಶ ಉತ್ಸವಕ್ಕೆ ಬೇಡಿಕೆ
ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು. ಹೀಗಾಗಿ ಇಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೆಲವು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸಹ ಮನವಿ ಸಲ್ಲಿಸಿವೆ. ಹಲವು ತಿಂಗಳ ಹಿಂದೆ ಎದ್ದಿದ್ದ ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದಕ್ಕೆ ಧ್ವಜಾರೋಹಣ ಮೂಲಕ ತಿಲಾಂಜಲಿ ಇಡಲು ಶಾಸಕ ಜಮೀರ್ ಪ್ರಯತ್ನಿದ್ದಾರೆ.
ಸಭೆ ನಡೆಸಿದ್ದ ಶಾಸಕರು
ಈ ಹಿಂದೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಭುಗಿಲೆದ್ದಾಗ ಶಾಸಕ ಜಮೀರ್ ಅಮಮದ್ ಖಾನ್ ಸಭೆ ನಡೆಸಿದ್ದರು. ಜುಲೈನಲ್ಲಿ ಚಾಮರಾಜಪೇಟೆ ಬಂದ್ ನಡೆಸಿ ಈದ್ಗಾ ಮೈದಾನ ವಿವಾದ ಬಗೆಹರಿಸಬೇಕು ಎಂದು ಒತ್ತಾಯಿಸಲಾಗಿತ್ತು. ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಈದ್ಗಾ ಮೈದಾನದಲ್ಲಿ ಆಚರಣೆ ಮಾಡಲು ಸಹ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಕೆ ಮಾಡಿದ್ದವು.
Recommended Video